"ಸುಧೀರ್ ಅಣ್ಣನ ಕಂಪನಿಯಲ್ಲಿ ಡಿಮ್ಯಾಂಡ್ ಮಾಡ್ದೆ ಕೆಲಸ ಮಾಡಿದೆ.. ಮಕ್ಕಳು ಮದ್ವೆಗೂ ಕರೆದಿಲ್ಲ"; ಟೆನ್ನಿಸ್ ಕೃಷ್ಣ
ಕನ್ನಡ ಚಿತ್ರರಂಗದ ಹಿರಿಯ ನಟ ಟೆನ್ನಿಸ್ ಕೃಷ್ಣ ಮೂರು ನಾಲ್ಕು ದಶಕಗಳಿಂದ ಹಾಸ್ಯ ಪಾತ್ರಗಳಲ್ಲಿ ಜನರನ್ನು ರಂಜಿಸಿದ್ದಾರೆ. ಅವರ ಮ್ಯಾನರಿಸಂ ಹಾಗೂ ಕಾಮಿಡಿಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈಗಾಗಲೇ ನೀಡಿದ ಹಲವು ಸಂದರ್ಶನಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಈಗ ಸುದ್ದಿ ಮನೆ ಯೂಟ್ಯೂಬ್ ಚಾನೆಲ್ಗೆ ಟೆನ್ನಿಸ್ ಕೃಷ್ಣ ಸಂದರ್ಶನ ನೀಡಿದ್ದಾರೆ. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ಟೆನ್ನಿಸ್ ಕೃಷ್ಣ ಕೆಲವು ಸಂಗತಿಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ದಿವಂಗತ ನಟ ಸುಧೀರ್ ಮಕ್ಕಳ ಬಗ್ಗೆ, ತರುಣ್ ಸುಧೀರ್ ಮದುವೆಗೆ ಕರೆಯದೆ ಇರುವ ಬಗ್ಗೆ ಬೇಸರ ಪಟ್ಟುಕೊಂಡಿದ್ದಾರೆ.

ಹಿರಿಯ ನಟ ಸುಧೀರ್ ಅಗಲಿದ ಬಳಿಕ ಅವರ ಕಂಪನಿಗೆ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಸುಧೀರ್ ಅವರ ಪತ್ನಿ ನಾಟಕ ಕಂಪನಿ ಉಳಿಸಿಕೊಳ್ಳಲು ಫ್ರೀ ಇದ್ದಾಗ ಡೇಟ್ ಕೊಡುವಂತೆ ಕೇಳಿಕೊಂಡಿದ್ದರು. ಅವರ ಮಕ್ಕಳಿಗೂ ಕೆಲಸ ಕೊಡಿಸಿದ್ದಾಗಿ ಟೆನ್ನಿಸ್ ಕೃಷ್ಣ ಹೇಳಿಕೊಂಡಿದ್ದಾರೆ.
"ನಮ್ಮ ಸುಧೀರ್ ಅಣ್ಣ ಅವರ ಕಂಪನಿಗೂ ನಾನು ಕೆಲಸ ಮಾಡಿದ್ದೇನೆ. ಅವರು ಕೊಟ್ಟಷ್ಟು ಸಂಭಾವನೆ ತೆಗೆದುಕೊಂಡಿದ್ದೇನೆ. ನಾನು ಡಿಮ್ಯಾಂಡ್ ಕೂಡ ಮಾಡಿಲ್ಲ. ಇವತ್ತು ಅವರ ಇಬ್ಬರು ಮಕ್ಕಳು ಕೂಡ ದೊಡ್ಡ ನಿರ್ದೇಶಕರಾಗಿದ್ದಾರೆ. ನನಗೆ ಖುಷಿ ಆಯ್ತು. ಅವರ ತಾಯಿಯವರು ಕೃಷ್ಣಣ್ಣ ಈ ನಾಟಕ ಕಂಪನಿಯನ್ನು ಬಂದ್ ಮಾಡಬೇಡ ಸುಧೀರ್ ಹೇಳಿದ್ದಾರೆ. ನಿಮಗೆ ಸಮಯವಿದ್ದಾಗ ಡೇಟ್ ಕೊಡಿ ಅಂತ ಕೇಳಿಕೊಂಡಿದ್ದರು" ಎಂದು ಟೆನ್ನಿಸ್ ಕೃಷ್ಣ ಹೇಳಿಕೊಂಡಿದ್ದಾರೆ.

ದಿವಂಗತ ಸುಧೀರ್ ಅವರ ಮೊದಲ ಪುತ್ರ ನಂದ ಕಿಶೋರ್ಗೆ ಎರಡು ಸಿನಿಮಾಗಳಲ್ಲಿ ಅವಕಾಶ ಕೊಡಿಸಿದ್ದಾಗಿಯೂ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಹಾಗೇ ಕೃಷ್ಣಣ್ಣ ನನ್ನ ಮಕ್ಕಳಿಗೆ ಸಿನಿಮಾದಲ್ಲಿ ಎಲ್ಲಾದರೂ ಇದ್ದರೆ ಹೇಳಿ ಎಂದಿದ್ದರು. ಮುಂದಿನ ವಾರ ಒಂದು ಸಿನಿಮಾವಿದೆ ಅಂತ ನಾನು ಮನೆ ಹತ್ತಿರ ಹೋಗಿ ಕರೆದುಕೊಂಡು ಹೋಗಿದ್ದೆ. ಎಲ್ಲರನ್ನೂ ಪರಿಚಯ ಮಾಡಿಸಿ, ಎರಡು ಸಿನಿಮಾಗಳಿಗೆ ಪಾತ್ರ ಮಾಡಿಸಿದ್ದೆ. ನಂದ ಕಿಶೋರ್ಗೆ ಅವಕಾಶ ಕೊಡಿಸಿದ್ದೆ." ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಸುಧೀರ್ ಮಕ್ಕಳ ಬಗ್ಗೆ ಬೇಸರವನ್ನೂ ಹೊರಗೆ ಹಾಕಿದ್ದಾರೆ. ನಂದ ಕಿಶೋರ್ ಹಾಗೂ ತರುಣ್ ಸುಧೀರ್ ನಿರ್ದೇಶಿಸಿದ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿಲ್ಲ. ಹಾಗೇ ತರುಣ್ ಸುಧೀರ್ ಮದುವೆಗೂ ಕರೆದಿಲ್ಲ ಎಂದು ಹೇಳಿಕೊಂಡಿದ್ದಾರೆ. "ಆದರೆ, ಅವರು ನನ್ನನ್ನು ಸಿನಿಮಾಗೆ ಕರೆದಿಲ್ಲ. ಅದೇ ನನ್ನ ಪ್ರಶ್ನೆ. ಅವರಿಗೆ ಶರಣ್, ಚಿಕ್ಕಣ್ಣ ಆತ್ಮೀಯರಾಗಿದ್ದರು. ಈ ಪಾತ್ರ ಅವರಿಗೆ ಸೂಟ್ ಆಗಿರಬಹುದೆಂದು ಹಾಕಿಕೊಂಡಿರಬಹುದು. ನಾನು ಇಷ್ಟು ಮಾತಾಡಿದ್ದು ಸುಳ್ಳು ಅಂತ ಹೇಳಲಿ. ದೇವರು ಮುಟ್ಟಿ ಆಣೆ ಮಾಡಲಿ. ಮದುವೆಗೂ ಕರೆದಿಲ್ಲ. ಎಲ್ಲರೂ ಕೇಳಿದರು ಯಾಕೆ ಮದುವೆ ಬರಲಿಲ್ಲ ಅಂತ. ಕರೆದರೆ ತಾನೆ ಬರೋದು ಅಂತ ಹೇಳಿದೆ." ಎಂದು ಬೇಸರ ಹೊರ ಹಾಕಿದ್ದಾರೆ.


Click it and Unblock the Notifications











