ಡಾ.ರಾಜ್ ಸ್ಮಾರಕ ವಿವಾದ; ಚೇತನ್ ವಿರುದ್ಧ ಕಿಡಿಕಾರಿದ ಉಮಾಶ್ರೀ, ಜಯಮಾಲಾ
ಕನ್ನಡದ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಮತ್ತೊಂದು ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ವರನಟ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದ್ದರು. ರಾಜ್ಕುಮಾರ್ ಅವರ ಅಗಲಿಕೆಯನ್ನು ಸರ್ಕಾರ ತನ್ನ ಲಾಭಕ್ಕೆ ಪಡೆದುಕೊಂಡಿತ್ತು ಎಂದು ನಟ ಚೇತನ್ ಸರ್ಕಾರದ ವಿರುದ್ಧ ಪೋಸ್ಟ್ ಮಾಡಿದ್ದರು.
ಆ ದಿನಗಳು ಚೇತನ್ ಮಾಡಿದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿರೋಧವನ್ನು ವ್ಯಕ್ತಪಡಿಸಿದ್ದವು. ಕನ್ನಡ ಚಿತ್ರರಂಗದ ಗಣ್ಯರು ಕೂಡ ಚೇತನ್ ಹೇಳಿಕೆಯನ್ನು ಖಂಡಿಸಿದ್ದರು. ಸಾರಾ ಗೋವಿಂದು ಸೇರಿದಂತೆ ಕನ್ನಡ ಪರ ಸಂಘಟನೆಗಳು ಚೇತನ್ ಮನೆ ಮುಂದೆ ಹೋಗಿ ಆಕ್ರೋಶ ಹೊರ ಹಾಕಿದ್ದರು.

ಅಣ್ಣಾವ್ರ ಅಭಿಮಾನಿಗಳು ಹಾಗೂ ಕನ್ನಡಪರ ಹೋರಾಟಗಾರ ಪ್ರತಿಭಟನೆಯ ಬಳಿಕ ಚೇತನ್ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಿದ್ದಾರೆ. ಆದರೆ, ಡಾ.ರಾಜ್ಕುಮಾರ್ ಅವರ ಸ್ಮಾರಕದ ಬಗ್ಗೆ ಚೇತನ್ ಕೊಟ್ಟ ಹೇಳಿಕೆಗಳನ್ನು ಹಿರಿಯ ನಟಿ ಉಮಾಶ್ರೀ, ನಟಿ ಜಯಮಾಲಾ ಸೇರಿದಂತೆ ಹಲವರು ಖಂಡಿಸಿದ್ದಾರೆ. ನ್ಯೂಸ್ ಫಸ್ಟ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಚೇತನ್ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇವರು ಏನು ಹೇಳಿದ್ದಾರೆಂದು ನೋಡುವುದಾರೇ,
ಆತ ನಟನಾಗುವುದಕ್ಕೆ ಯೋಗ್ಯನೇ ಅಲ್ಲ-ಉಮಾಶ್ರೀ
"ಡಾ.ರಾಜ್ಕುಮಾರ್ ಅವರು ಸಾಮಾನ್ಯ ವ್ಯಕ್ತಿ ಅಲ್ಲ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಕನ್ನಡ ನಾಡಿಗೆ ಅತೀ ಹೆಚ್ಚು ಕೊಡುಗೆ ಕೊಟ್ಟಿರುವವರು ಡಾ.ರಾಜ್ಕುಮಾರ್ ಅವರು. ರಾಜ್ಕುಮಾರ್ ಸ್ಮಾರಕವನ್ನು ಸರ್ಕಾರ ಮಾಡಿದೆ ಅಂದರೆ, ಅದನ್ನು ನಾವು ಪ್ರಶಂಸೆ ಮಾಡಬೇಕು. ಡಾ.ರಾಜ್ಕುಮಾರ್ ಕೊಟ್ಟಿರುವ ಕೊಡುಗೆಗಳ ಮುಂದೆ ಇವರೆಲ್ಲ ಏನು ಕೊಟ್ಟಿದ್ದಾರೆ? ನೆನ್ನೆ ಮೊನ್ನೆ ಬಂದಿರೋರೆಲ್ಲ ಡಾ.ರಾಜ್ಕುಮಾರ್ ಬಗ್ಗೆ ಮಾತಾಡೋಕೆ ಯಾವ ನೈತಿಕ ಹಕ್ಕು ಇದೆ. ಮಾತು ಬರುತ್ತೆ ಅಂತ ಬಾಯಿಗೆ ಬಂದಂತೆ ಮಾತಾಡೋದು ಅಲ್ಲ. ಬುದ್ದಿವಂತಿಯನ್ನು ಈ ರೀತಿಯಲ್ಲಿ ಅಲ್ಲ ತೋರಿಸೋದು. ಜನರಪರವಾಗಿ ಹೋರಾಟ ಮಾಡಲಿ. ಅದರಲ್ಲೂ ರಾಜ್ಕುಮಾರ್ ಅವರ ಬಗ್ಗೆ ಈ ರೀತಿ ಹೇಳಿಕೆಗಳನ್ನು ಕೊಡುವುದು ಸರಿಯಿಲ್ಲ. ನಾನು ಹೇಳ್ತೀನಿ, ಆತ ನಟನಾಗುವುದಕ್ಕೆ ಯೋಗ್ಯನೇ ಅಲ್ಲ. ಆತ ಕನ್ನಡದ ಹುಡುಗನಾಗಿ ಹುಟ್ಟಿದ್ದಕ್ಕೂ ಯೋಗ್ಯತೆಯಿಲ್ಲ. ಡಾ. ರಾಜ್ಕುಮಾರ್ ಕನ್ನಡದ ಆಸ್ತಿ"
"ಜನ ಪರವಾಗಿ ಹೋರಾಟ ಮಾಡುತ್ತಿದ್ದರೆ ಗೌರವ ಕೊಡೋಣ. ರಾಜ್ಕುಮಾರ್ ಅವರ ವಿಷಯವಾಗಿ ಈ ರೀತಿ ಮಾತಾಡಿದ್ದಕ್ಕೆ ಮರ್ಯಾದೆ ಕೊಡುವುದಿಲ್ಲ ಐ ಯಾಮ್ ಸಾರಿ. ಯಾವ ಉದ್ದೇಶ ಇಟ್ಟುಕೊಂಡು ಇಂತಹ ಹೇಳಿಕೆ ಕೊಟ್ಟಿದ್ದೀರಿ ಅನ್ನೋದನ್ನು ಅವರನ್ನು ಕೇಳಿ." ಎಂದು ಉಮಾಶ್ರೀ ಹೇಳಿದ್ದಾರೆ.

ಇವರು ಯಾರು ಕೇಳುವುದಕ್ಕೆ?-ಜಯಮಾಲಾ
"ಅಣ್ಣಾವ್ರ ಸ್ಮಾರಕಕ್ಕೆ ಜಾಗವನ್ನು 20 ವರ್ಷಗಳ ಹಿಂದೆ ಕೊಟ್ಟಿದ್ದಾರೆ. ಇವರು ಯಾರು ಕೇಳೋಕೆ. ಇವರ ಜೇಬಿನಿಂದ ಏನಾದರೂ ಕೊಟ್ಟರೇ? ಇಲ್ಲ ಅಲ್ವಾ? ಸರ್ಕಾರ ಕೊಟ್ಟಿರೋದು ರಾಜ್ಕುಮಾರ್ ಮನೆಗೆ ಕೊಟ್ಟಿಲ್ಲ. ಸರ್ಕಾರ ಕೊಟ್ಟಿದ್ದು ರಾಜ್ಕುಮಾರ್ ಅವರು ಸಂಪಾದಿಸಿರುವ ಜನ ಸಾಗರವನ್ನು ನೋಡಿ, ಆ ಜನರಿಗೋಸ್ಕರ ಕೊಟ್ಟಿರೋದರು. ರಾಜ್ಕುಮಾರ್ ಅವರು ಜನರ ಆಸ್ತಿ. ಇವರು ಏನು ಮಾಡುತ್ತಾರೆ? ರಾಜ್ಕುಮಾರ್ ಅವರು ಹೋಗಿ 20 ವರ್ಷ ಆಯ್ತು. ಈಗ ಯಾಕೆ ಮಾತಾಡುತ್ತಾರೆ? ಹೀಗೆಲ್ಲ ಮಾತಾಡಬಾರದು. ಇದು ನೋವಿನ ಸಂಗತಿ. ಒಬ್ಬ ಕಲಾವಿದನಾಗಿ ಶೋಭೆ ತರುವುದಿಲ್ಲ." ಎಂದು ಹಿರಿಯ ನಟಿ ಹಾಗೂ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಕಿಡಿಕಾರಿದ್ದಾರೆ.
ನಿರ್ಮಾಪಕರ ಸಂಘ ಆಕ್ರೋಶ
ಡಾ. ರಾಜಕುಮಾರ್ ಅವರ ಸಮಾಧಿ ಜಾಗದ ಕುರಿತು ನಟ ಚೇತನ್ ಅಹಿಂಸ ಪೋಸ್ಟ್ಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಖಂಡನೆ ವ್ಯಕ್ತಪಡಿಸಿದೆ. "ಇಡೀ ಕರ್ನಾಟಕದ ಮೆಚ್ಚಿನ ನಾಯಕ ವರನಟ ಡಾ. ರಾಜಕುಮಾರ್. ಏಪ್ರಿಲ್ 24 ಗಾನಗಂಧರ್ವ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಅದೇ ದಿನ ನಟ ಅಹಿಂಸ ಚೇತನ್ ಅವರು ಡಾ. ರಾಜಕುಮಾರ್ ಅವರ ಸಮಾಧಿಗೆ ಸರ್ಕಾರ ಜಾಗ ನೀಡಿರುವುದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವರನಟ ರಾಜಕುಮಾರ್ ಅವರಿಗೆ ಅಗೌರವ ತರುವ ಚೇತನ್ ಅಹಿಂಸ ಅವರ ಹೇಳಿಕೆಯನ್ನು ಕನ್ನಡ ಚಲಚಿತ್ರ ನಿರ್ಮಾಪಕರ ಸಂಘ ತೀವ್ರವಾಗಿ ಖಂಡಿಸುತ್ತದೆ" ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.


Click it and Unblock the Notifications