ಸನ್ಯಾಸಿನೂ ಅಲ್ಲ.. ಖಿನ್ನತೆನೂ ಇಲ್ಲ..ವಿಷ್ಣು, ಅಂಬಿ ಜೊತೆ ನಟಿಸಿದ್ದ ಮಹಾಲಕ್ಷ್ಮಿ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ!
80ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡ ನಟಿ ಮಹಾಲಕ್ಷ್ಮಿ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಲ್ಲಿಯೇ ಈ ನಟಿ ಸಿನಿಮಾ ದೂರ ಉಳಿದುಬಿಟ್ಟರು. ಆದ್ರೀಗ ಇದೇ ಮೊದಲ ಬಾರಿಗೆ ಕನ್ನಡದ ಧಾರಾವಾಹಿಯೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅತೀ ಶೀಘ್ರದಲ್ಲಿಯೇ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಹಾಲಕ್ಷ್ಮಿ ಮೂಲತ: ತಮಿಳುನಾಡಿನವರಾಗಿದ್ದರೂ, ಕನ್ನಡದಲ್ಲಿಯೇ ಹೆಚ್ಚು ಅವಕಾಶ ಸಿಕ್ಕಿತ್ತು. ಅದಕ್ಕೆ ಇಂದಿಗೂ ಕನ್ನಡ ಚಿತ್ರರಂಗ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕನ್ನಡ ಚಿತ್ರರಂಗದ ಅಂದಿನ ಬಹುತೇಕ ಎಲ್ಲಾ ದಿಗ್ಗಜರೊಂದಿಗೆ ಮಹಾಲಕ್ಷ್ಮಿ ನಟಿಸಿ ಗೆದ್ದಿದ್ದಾರೆ. ಆದರೆ, ಸಿನಿಮಾದಿಂದ ದಿಢೀರನೇ ಯಾಕೆ ದೂರ ಆದರು? ಅನ್ನೋದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿತ್ತು.

ಈ ಮಧ್ಯೆ ಮಹಾಲಕ್ಷ್ಮಿ ಬಗ್ಗೆ ನೂರು ಕಥೆಗಳು ಓಡಾಡಿದ್ದವು. ಮಹಾಲಕ್ಷ್ಮಿ ಆಧ್ಯಾತ್ಮದ ಕಡೆಗೆ ವಾಲಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗೆ ನೂರೆಂಟು ಸುದ್ದಿಗಳು ಅವರ ಚಿತ್ರರಂಗದಿಂದ ದೂರವಿದ್ದಾಗ ಓಡಾಡಿದ್ದವು. ಆದರೂ, ಮಹಾಲಕ್ಷ್ಮಿ ಅದೆಲ್ಲದಕ್ಕೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಲಿಲ್ಲ. ಮಾಧ್ಯಮದ ಮುಂದೆ ಬರಲಿಲ್ಲ. ತಾನಾಯ್ತು ತನ್ನ ಬದುಕಾಯ್ತು ಅಂತಲೇ ಇದ್ದುಬಿಟ್ಟಿದ್ದರು. ಆದರೆ, ಎರಡು ವರ್ಷಗಳಿಂದ ಹಿಂದಷ್ಟೇ ಮತ್ತೆ ಪ್ರತ್ಯಕ್ಷ ಆಗಿದರು.
ಕನ್ನಡ ಸಿನಿಮಾ ಮೂಲಕವೇ ಮರಳಿದ ಮಹಾಲಕ್ಷ್ಮಿ
ಹೆಚ್ಚು ಕಡಿಮೆ 30 ವರ್ಷ ಆಗಿತ್ತು. ಹಿರಿಯ ನಟಿ ಮಹಾಲಕ್ಷ್ಮಿ ಬಣ್ಣದ ಲೋಕದಿಂದ ದೂರವೇ ಉಳಿದುಬಿಟ್ಟಿದ್ದರು. ಯಾರ ಕೈಗೂ ಸಿಕ್ಕಿರಲಿಲ್ಲ. ಎಲ್ಲಿಗೆ ಹೋದ್ರು? ಈಗೇನು ಮಾಡುತ್ತಿದ್ದಾರೆ? ಸಿನಿಮಾ ಮಾಡುತ್ತಾರಾ? ಇಲ್ವಾ? ಯಾಕೀ ನಿರ್ಧಾರಕ್ಕೆ ಬಂದ್ರು? ಇಂತಹ ನೂರೆಂಟು ಪ್ರಶ್ನೆಗಳು ಅವರ ಅಭಿಮಾನಿಗಳಿಗೆ ಇತ್ತು. ಆದರೆ, ಅದ್ಯಾವುಕ್ಕೂ ಉತ್ತರ ಕೊಡದೆ ಕಣ್ಮರೆಯಾಗಿದ್ದ ನಟಿ ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಟಿಆರ್ಪಿ ರಾಮ' ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಮೂಲಕ ಎರಡನೇ ಇನ್ನಿಂಗ್ ಶುರು ಮಾಡಿದ್ದರು.
ಎರಡು ವರ್ಷದ ಬಳಿಕ ಕಿರುತೆರೆಗೆ ಎಂಟ್ರಿ
ಹಿರಿಯ ನಟಿ ಮಹಾಲಕ್ಷ್ಮಿ ಬದುಕು ಕನ್ನಡಿಗರಿಗೆ ನಿಗೂಢವಾಗಿ ಕಂಡಿದ್ದೇ ಹೆಚ್ಚು. ಆದ್ರೀಗ ಮತ್ತೆ ನಟನೆಗೆ ಮರಳಿದ್ದಾರೆ. ಈ ಬಾರಿ ಸಿನಿಮಾದಲ್ಲಿ ಅಲ್ಲ. ಬದಲಾಗಿ, ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಕನ್ನಡದ ಜನಪ್ರಿಯ ಮನರಂಜನಾ ವಾಹಿನಿಯಲ್ಲಿ ಮಹಾಲಕ್ಷ್ಮಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಫಿಲ್ಮಿಬೀಟ್ಗೆ ತಿಳಿಸಿವೆ. ಸದ್ಯಕ್ಕೆ ಆ ಧಾರಾವಾಹಿ ಹಾಗೂ ವಾಹಿನಿ ಯಾವುದು ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಇನ್ನೆರಡು ವಾರದಲ್ಲಿ ಮಹಾಲಕ್ಷ್ಮಿ ಕನ್ನಡ ಕಿರುತೆರೆಯಲ್ಲಿ ರಾರಾಜಿಸಲಿದ್ದಾರೆ ಅನ್ನೋದಂತೂ ಸತ್ಯ.

ನಟನೆಯಲ್ಲಿ ಆಸಕ್ತಿ
ಮಹಾಲಕ್ಷ್ಮಿ ನಟಿಸಿದ ಕನ್ನಡ ಸಿನಿಮಾಗಳನ್ನು ಇಂದಿಗೂ ಸಿನಿಪ್ರಿಯರು ಮರೆತಿಲ್ಲ. ಕನ್ನಡದಲ್ಲಿ ಸುಮಾರು 35ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 'ಬಡ್ಡಿ ಬಂಗಾರಮ್ಮ', 'ಪರಶುರಾಮ', 'ಜಯಸಿಂಹ', 'ಭದ್ರಕಾಳಿ'ಯಂತಹ ಸಿನಿಮಾಗಳನ್ನು ಮರೆಯೋಕೆ ಸಾಧ್ಯವಿಲ್ಲ. ಮೂರು ದಶಕಗಳ ಬಳಿಕ ಮತ್ತೆ ನಟನೆಯ ಮರಳಿದ್ದರು. ಈಗ ಕಿರುತೆರೆಯ ವೀಕ್ಷಕರನ್ನು ತನ್ನ ನಟನೆಯ ಮೂಲಕ ರಂಜಿಸಲಿದ್ದಾರೆ.
ಮಹಾಲಕ್ಷ್ಮಿಯ ಮೊದಲ ಧಾರಾವಾಹಿ
ಹಿರಿಯ ನಟಿ ಮಹಾಲಕ್ಷ್ಮಿ ಸಿನಿಮಾ ಬಿಟ್ಟರೆ, ಕಿರುತೆರೆಯಲ್ಲಿ ನಟಿಸಿದ್ದೇ ಇಲ್ಲ. ಅವರು ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದಾಗಲೇ ಕಿರುತೆರೆಗೆ ಆಫರ್ ನೀಡಿದ್ದರು. ಆಗ ಒಂದೊಳ್ಳೆ ಪಾತ್ರಕ್ಕಾಗಿ ಎದುರು ನೋಡುತ್ತಿದ್ದರು. ಅದರಂತೆ ಈಗ ಪ್ರಮುಖ ಪಾತ್ರವೊಂದು ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಮನರಂಜನಾ ವಾಹಿನಿ ಮಹಾಲಕ್ಷ್ಮಿ ನಟಿಸುತ್ತಿರುವ ಧಾರಾವಾಹಿ ಹಾಗೂ ಪಾತ್ರವನ್ನು ಬಹಿರಂಗ ಪಡಿಸುತ್ತಿದೆ. ಅಲ್ಲಿವರೆಗೂ ಧಾರಾವಾಹಿ ಹಾಗೂ ಚಾನೆಲ್ ಯಾವುದು ಅನ್ನೋದು ರಹಸ್ಯವಾಗಿಯೇ ಇರುತ್ತೆ.


Click it and Unblock the Notifications











