18 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದೇಕೆ? ಪ್ರೇಮ್ ಹೇಳಿದ ಆ ಒಂದು ಸೀನ್ ಯಾವುದು?
ಈ ವರ್ಷ ಸ್ಯಾಂಡಲ್ವುಡ್ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ 'ಕೆಡಿ: ದಿ ವಿಲನ್' ಕೂಡ ಒಂದು. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ಹವಾ ಹುಟ್ಟಾಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಪ್ರಚಾರವನ್ನು ಶುರುವಾಗಿದೆ. ಬೇರೆ ನಗರಗಳಿಗೆ ತೆರಳಿ ಟೀಸರ್ ಲಾಂಚ್ ಮಾಡಿದೆ ಚಿತ್ರತಂಡ.
ಜೋಗಿ ಪ್ರೇಮ್ ಸಿನಿಮಾ ಅಂದರೇನೆ ಹಾಗೇ. ಇನ್ನೂ ಸಿನಿಮಾ ಬಿಡುಗಡೆ ಆಗಿರಲ್ಲ. ಅಷ್ಟರಲ್ಲೇ ಕ್ರೇಜ್ ಶುರುವಾಗಿಬಿಡುತ್ತೆ. ಇದಕ್ಕೆ ಪ್ರಮುಖ ಕಾರಣ ಸ್ಟಾರ್ ಕಾಸ್ಟ್. ಈ ಬಾರಿ 'ಕೆಡಿ' ಸಿನಿಮಾಗೆ ಬಾಲಿವುಡ್ನಿಂದ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿಯನ್ನು ಪ್ರಮುಖ ಪಾತ್ರಕ್ಕಾಗಿ ಕರೆದುಕೊಂಡು ಬಂದಿದ್ದಾರೆ. ಅದರಲ್ಲೂ ಶಿಲ್ಪಾ ಶೆಟ್ಟಿ ಈ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದಾರೆ. ಪ್ರೇಮ್ ಕಥೆ ಹೇಳಿದ ಶೈಲಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಶಿಲ್ಪ ಶೆಟ್ಟಿಗೆ 'ಕೆಡಿ' ಮೊದಲ ಕನ್ನಡ ಸಿನಿಮಾವೇನಲ್ಲ. ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಪ್ರೀತ್ಸೋದ್ ತಪ್ಪಾ', 'ಒಂದಾಗೋಣ ಬಾ' ಈ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. 2005ರಲ್ಲಿ ಉಪೇಂದ್ರ ನಟಿಸಿದ 'ಆಟೋ ಶಂಕರ್' ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಆ ಬಳಿಕ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿರಲಿಲ್ಲ. ಮತ್ತೊಂದು ಕನ್ನಡ ಸಿನಿಮಾ ಮಾಡುವುದಕ್ಕೆ ಅಸಲಿ ಕಾರಣವೇನು? ಪ್ರೇಮ್ ಹೇಳಿದ ಒಂದು ಸೀನ್ ಶಿಲ್ಪಾ ಶೆಟ್ಟಿ ಈ ಸಿನಿಮಾವನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ಅದ್ಯಾವ ಸೀನ್ ಅನ್ನೋದನ್ನು ಖುದ್ದು ಶಿಲ್ಪಾ ಶೆಟ್ಟಿಯೇ 'ಕೆಡಿ' ಟೀಸರ್ ಲಾಂಚ್ ವೇಳೆ ರಿವೀಲ್ ಮಾಡಿದ್ದರು.
'ಆಟೋ ಶಂಕರ್' ಬಳಿಕ ಒಂದೇ ಕನ್ನಡ ಸಿನಿಮಾವನ್ನು ಒಪ್ಪಿಕೊಳ್ಳದ ಶಿಲ್ಪಾ ಶೆಟ್ಟಿಗೆ 'ಕೆಡಿ'ಯಲ್ಲೂ ನಟಿಸುವುದಕ್ಕೆ ಇಷ್ಟವಿರಲಿಲ್ಲ. ಆ ವೇಳೆ ಶಿಲ್ಪಾ ಶೆಟ್ಟಿ ಪೆಟ್ಟು ಮಾಡಿಕೊಂಡು ವೀಲ್ ಚೇರ್ನಲ್ಲಿ ಇದ್ದರು. ಆ ವೇಳೆ ಪ್ರೇಮ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಹಿಂದೆ ಬಿದ್ದಿದ್ದರು. ಹೀಗಾಗಿ ಕಥೆ ಕೇಳುವುದಕ್ಕಷ್ಟೇ ಶಿಲ್ಪಾ ಶೆಟ್ಟಿ ಒಪ್ಪಿಕೊಂಡಿದ್ದರು. ಆದರೆ, ಪ್ರೇಮ್ ಹೇಳಿದ ಕತೆ ಅವರನ್ನು ನಿರ್ಧಾರವನ್ನು ಬದಲಿಸಿತ್ತು.
ವೀಲ್ಚೇರ್ನಲ್ಲೇ ಕಥೆ ಹೇಳಿದ್ದ ಶಿಲ್ಪಾಶೆಟ್ಟಿ: "ನಾನೊಂದು ಕಥೆ ಹೇಳುತ್ತೇನೆ. ಇವರು ಕಥೆ ತಗೊಂಡು ನನ್ನ ಬಳಿಗೆ ಬಂದಿದ್ದರು. ಈ ಸಿನಿಮಾದಲ್ಲಿ ನನ್ನ ಪಾತ್ರವನ್ನು ವಿವರಿಸುವುದಕ್ಕೆ ನನ್ನ ಬಳಿ ಬಂದಿದ್ದರು. ಆ ವೇಳೆ ನನಗೆ ಸಿನಿಮಾ ಮಾಡುವುದಕ್ಕೆ ಇಷ್ಟವಿರಲಿಲ್ಲ. ಯಾಕಂದ್ರೆ, ನಾನು ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದೆ. ಅದೇ ವೇಳೆ ನನಗೆ ಪೆಟ್ಟು ಬಿದ್ದಿತ್ತು. ರೋಹಿತ್ ಶೆಟ್ಟಿಗಾಗಿ ಆಕ್ಷನ್ ಮಾಡಿ ನಾನು ವೀಲ್ ಚೇರ್ನಲ್ಲಿ ಕೂತಿದ್ದೆ. ನನಗೆ ಮನೆಯಲ್ಲಿ ಕಾಲ ಕಳೆಯುವುದಕ್ಕೆ ಸ್ವಲ್ಪ ಸಮಯ ಸಿಕ್ಕಿತ್ತು. ಪ್ರೇಮ್ ಕ್ಲಿಯರ್ ಇದ್ದರು. ನಾನು ಈ ಪಾತ್ರವನ್ನು ಬರೆದಿದ್ದೇನೆ. ಅದನ್ನು ನೀವೇ ಮಾಡಬೇಕು ಅನ್ನೋದನ್ನು ನಿರ್ಧಾರ ಮಾಡಿಕೊಂಡೇ ಬಂದಿದ್ದರು." ಎಂದು ಜೋಗಿ ಪ್ರೇಮ್ ಬಗ್ಗೆ ಶಿಲ್ಲಾ ಶೆಟ್ಟಿ ಹೇಳಿದ್ದಾರೆ.

ಸಿನಿಮಾ ಒಪ್ಪಲು ಅದೊಂದು ಸೀನ್ ಕಾರಣ: "ನನ್ನ ಮ್ಯಾನೇಜರ್ ಅವರು ಕಥೆಯನ್ನು ನಿನಗೆ ಹೇಳಲಿ. ಆಗಲ್ಲ ಅಂತ ಆಮೇಲೆ ಹೇಳಿದರೆ ಆಯ್ತು. ವೀಲ್ ಚೇರ್ನಲ್ಲಿ ನಾನು ಇರುವಾಗ ನನಗೆ ಕಥೆಯನ್ನು ಹೇಳಿದರು. ಇಂಟರ್ವಲ್ ಪಾಯಿಂಟ್ನಲ್ಲಿ ನನಗೆ ಪೆಟ್ಟಾಗಿದ್ದು, ನಾನು ವೀಲ್ ಚೇರ್ನಲ್ಲಿ ಇದ್ದೇನೆ ಅನ್ನೋದನ್ನೇ ಮರೆತು ಹೋಗಿದ್ದೆ. ನನಗೆ ಆಗ ಅನಿಸ್ತು. ಇದೊಂದು ಸೀನ್ಗಾದರೂ ನಾನು ಸಿನಿಮಾ ಮಾಡಬೇಕು ಅಂತ ಅನಿಸ್ತು. ಆಗ ಪ್ರೇಮ್ ಸರ್ಗೆ ಸತ್ಯವತಿ ಪಾತ್ರವನ್ನು ನಾನೇ ಮಾಡುತ್ತೇನೆ ಅಂತ ಹೇಳಿದೆ." ಎಂದಿದ್ದಾರೆ ಶಿಲ್ಪಾ ಶೆಟ್ಟಿ.
ಸತ್ಯವತಿ ಪಾತ್ರ ಹಿಂದೆಂದೂ ಬಂದಿಲ್ಲ: "ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಸತ್ಯವತಿಯಂತಹ ಪಾತ್ರವನ್ನು ಕನ್ನಡ ಹಿಂದಿ ಅಂತ ಹೇಳುವುದಿಲ್ಲ ಸಿನಿಮಾದಲ್ಲಿಯೇ ಮೊದಲ ಬಾರಿ ನೋಡುತ್ತೀರ. ಇದು ನನ್ನ ಮೊದಲ ಬಹುಭಾಷೆಯ ಸಿನಿಮಾ. ನಾನು ಕನ್ನಡ ಚಿತ್ರರಂಗಕ್ಕೆ 18 ವರ್ಷಗಳ ಬಳಿಕ ವಾಪಾಸ್ ಬಂದಿದ್ದೇನೆ. ನಾನು ಯಾವಾಗಲೂ ಕರ್ನಾಟಕದ ಹುಡುಗಿ ಅಂತ ಹೇಳುತ್ತೇನೆ. ಕನ್ನಡದವರು ಎಷ್ಟು ಒಳ್ಳೆಯ ಸಿನಿಮಾ ಮಾಡುತ್ತಾರೆ. ಕನ್ನಡ ಸಿನಿಮಾದಲ್ಲಿ ನಟಿಸಿ ತುಂಬಾನೇ ಖುಷಿ ಆಯ್ತು" ಎಂದು ನಟಿ ಶಿಲ್ಪಾ ಶೆಟ್ಟಿ ವೇದಿಕೆಯಲ್ಲಿ ಹೇಳಿದ್ದಾರೆ.


Click it and Unblock the Notifications











