ತಮಿಳುನಾಡು ಸಿಎಂ ಸ್ಟಾಲಿನ್ ಭೇಟಿಯಾದ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಇಂದು ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ಪತ್ನಿ ಅಶ್ವಿನಿ ಸಹ ಇದ್ದರು.
Recommended Video
ಚೆನ್ನೈಗೆ ತೆರಳಿದ್ದ ಶಿವರಾಜ್ ಕುಮಾರ್ ಅಲ್ಲಿಯೇ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ. ಸ್ಟಾಲಿನ್ ಅವರಿಗೆ ಹಾರು, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ್ದಾರೆ. ಶಿವಣ್ಣ, ಎಂಕೆ ಸ್ಟಾಲಿನ್ ಅವರಿಗೆ ಸನ್ಮಾನಿಸುತ್ತಿರುವ ಚಿತ್ರಗಳು ತಮಿಳುನಾಡಿನ ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಯಾವ ಕಾರಣಕ್ಕೆ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ ಎಂಬುದರ ಸ್ಪಷ್ಟನೆ ಇಲ್ಲ. ಆದರೆ ಪುನೀತ್ ನಿಧನದ ಸಮಯದಲ್ಲಿ ಎಂಕೆ ಸ್ಟಾಲಿನ್ ಅವರು ಪತ್ರದ ಮೂಲಕ ನೀಡಿದ್ದ ಸಾಂತ್ವನಕ್ಕೆ ಧನ್ಯವಾದ ಅರ್ಪಿಸಲು ಶಿವಣ್ಣ ಹಾಗೂ ಗೀತಕ್ಕನವರು ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.

ಅಸಲಿಗೆ ಡಾ ರಾಜ್ಕುಮಾರ್ ಹಾಗೂ ಎಂಕೆ ಸ್ಟಾಲಿನ್ ಕುಟುಂಬದ ನಡುವೆ ಬಹುವರ್ಷಗಳ ಬಂಧವಿದೆ. ಸ್ಟಾಲಿನ್ ಅವರ ತಂದೆ ಕರುಣಾನಿಧಿ ಹಾಗೂ ಡಾ ರಾಜ್ಕುಮಾರ್ ಆತ್ಮೀಯರಾಗಿದ್ದರು. ರಾಜ್ಕುಮಾರ್ ಅವರು ಮದ್ರಾಸಿನಲ್ಲಿ ಇದ್ದ ಸಮಯದಿಂದಲೂ ಆತ್ಮೀಯತೆ ಇತ್ತು, ಅದು ಹಾಗೆಯೇ ಮುಂದುವರೆಯುತ್ತಿದೆ.
ಪುನೀತ್ ರಾಜ್ಕುಮಾರ್ ನಿಧನರಾದಾಗ ಸಿಎಂ ಎಂಕೆ ಸ್ಟಾಲಿನ್ ಅವರು ಸರಣಿ ಟ್ವೀಟ್ಗಳನ್ನು ಮಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದರು. ''ಪುನೀತ್ ಸಾವು ನನಗೆ ವೈಯಕ್ತಿಕ ನಷ್ಟ. ಡಾ.ರಾಜ್ಕುಮಾರ್ ಕುಟುಂಬ ಹಾಗೂ ನಮ್ಮ ಕುಟುಂಬದ ನಡುವೆ ದಶಕಗಳಿಂದಲೂ ಸೌಹಾರ್ದ ಸಂಬಂಧ ಇತ್ತು. ಪುನೀತ್ ರಾಜ್ಕುಮಾರ್ ಸ್ಟಾರ್ ಆಗಿದ್ದರೂ ಬಹಳ ವಿನಯವನ್ನು ಹೊಂದಿದ್ದರು. ತಂದೆ ಕರುಣಾನಿಧಿ ನಿಧನ ಹೊಂದಿದ್ದಾಗ ಗೋಪಾಲಪುರಂ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದ ಪರವಾಗಿ ಸಂತಾಪವನ್ನು ವ್ಯಕ್ತಪಡಿಸಿದ್ದಿದ್ದು ನನಗೆ ನೆನಪಿದೆ'' ಎಂದು ಎಂಕೆ ಸ್ಟಾಲಿನ್ ಹೇಳಿದ್ದರು.
ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್ ರಾಜ್ಕುಮಾರ್ಗೆ ಗೌರವ
''ಪುನೀತ್ ಅಗಲಿಕೆ ನನಗೆ ತೀವ್ರ ಆಘಾತ ತಂದಿದೆ. ಸ್ಟಾರ್ ಪುನೀತ್ ರಾಜ್ಕುಮಾರ್ ದಂತಕತೆ ರಾಜ್ಕುಮಾರ್ ಅವರ ಪುತ್ರ. ನಮ್ಮ ಎರಡೂ ಕುಟುಂಬ ಹಲವು ದಶಕಗಳಿಂದ ಬಾಂಧವ್ಯ ಹೊಂದಿದೆ. ಹಾಗಾಗಿ ಇದು ನನಗೆ ವೈಯಕ್ತಿಕ ನಷ್ಟ'' ಎಂದು ಎಂಕೆ ಸ್ಟಾಲಿನ್ ಹೇಳಿದ್ದರು.

''ಕನ್ನಡ ಸಿನಿಮಾ ರಂಗವು ಸಮಕಾಲೀನ ಅತ್ಯುತ್ತಮ ನಟನನ್ನು ಕಳೆದುಕೊಂಡಿದೆ. ಪುನೀತ್ ರಾಜ್ಕುಮಾರ್ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ಹಾಗೂ ನೋವಿನಲ್ಲಿರುವ ಸಕಲ ಕರ್ನಾಟಕ ಜನತೆಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತಿದ್ದೇನೆ'' ಎಂದು ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದರು.
ಆ ಬಳಿಕ ಶಿವರಾಜ್ ಕುಮಾರ್ ಸೇರಿದಂತೆ ಪುನೀತ್ ರಾಜ್ಕುಮಾರ್ ಕುಟುಂಬಕ್ಕೆ ಪತ್ರ ಬರೆದು ತಮ್ಮ ಸಂತಾಪಗಳನ್ನು ಎಂಕೆ ಸ್ಟಾಲಿನ್ ವ್ಯಕ್ತಪಡಿಸಿದ್ದರು. ಇದೇ ಗೌರವಾರ್ಥ ಇಂದು ಶಿವರಾಜ್ ಕುಮಾರ್ ಹಾಗೂ ಗೀತಾ ಅವರುಗಳು ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇವುಗಳ ಜೊತೆಗೆ ಜನವರಿ 06 ರಂದು ತಮಿಳುನಾಡು ವಿಧಾನಸಭೆ ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆ ನಟ ಪುನೀತ್ ರಾಜ್ಕುಮಾರ್ ಅವರಿಗೂ ಸಂತಾಪ ಸೂಚಿಸಲಾಯಿತು.


Click it and Unblock the Notifications











