ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್ ರಾಜ್ಕುಮಾರ್ಗೆ ಗೌರವ
ನಟ ಪುನೀತ್ ರಾಜ್ಕುಮಾರ್ಗೆ ಕರ್ನಾಟಕದಲ್ಲಿ ಮಾತ್ರವೇ ಅಲ್ಲ ದೇಶ-ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದರು. ಪುನೀತ್ ಅಗಲಿದಾಗ ನೆರೆ ರಾಜ್ಯಗಳ ಸಿಎಂಗಳು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಪುನೀತ್ ಕೇವಲ ಕನ್ನಡದ ಆಸ್ತಿ ಆಗಿರಲಿಲ್ಲ, ಅವರು ದೇಶದ ಆಸ್ತಿಯಾಗಿದ್ದರು.
ಇಂದು ತಮಿಳುನಾಡಿನ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದು ನಿಯಮ. ಅಂತೆಯೇ ತಮಿಳು ನಾಡು ವಿಧಾನಸಭೆಯಲ್ಲಿ ಇಂದು ನಟ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು.
ರಾಜ್ಯಪಾಲರ ಭಾಷಣ ಆರಂಭಕ್ಕೂ ಮುನ್ನಾ ನಟ ಪುನೀತ್ ರಾಜ್ಕುಮಾರ್ಗೆ ತಮಿಳುನಾಡು ವಿಧಾನಸಭೆ ಸದಸ್ಯರು ಸಾಮೂಹಿಕವಾಗಿ ಗೌರವ ಸಲ್ಲಿಸಿದರು. ಕನ್ನಡದ ನಟನೊಬ್ಬನ ಅಗಲಿಕೆಗೆ ನೆರೆ ರಾಜ್ಯದ ವಿಧಾನಸಭೆಯಲ್ಲಿ ಅಧಿಕೃತವಾಗಿ ಗೌರವ ಸೂಚಿಸಿರುವುದು ಸಾಮಾನ್ಯ ಸಂಗತಿಯಲ್ಲ.

ಪುನೀತ್ ರಾಜ್ಕುಮಾರ್ ನಿಧನರಾದಾಗಲೂ ತಮಿಳುನಾಡಿ ಸಿಎಂ ಎಂಕೆ.ಸ್ಟಾಲಿನ್ ಪುನೀತ್ ಭಾವಚಿತ್ರ ಟ್ವೀಟ್ ಮಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಎಂಕೆ ಸ್ಟಾಲಿನ್ ಕುಟುಂಬ ಮತ್ತು ಡಾ.ರಾಜ್ಕುಮಾರ್ ಕುಟುಂಬದ ಮಧ್ಯೆ ದಶಕಗಳಿಂದಲೂ ಆಪ್ತತೆ ಇತ್ತು. ಈ ವಿಷಯವನ್ನೂ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದರು.
''ಪುನೀತ್ ಸಾವು ನನಗೆ ವೈಯಕ್ತಿಕ ನಷ್ಟ. ಡಾ.ರಾಜ್ಕುಮಾರ್ ಕುಟುಂಬ ಹಾಗೂ ನಮ್ಮ ಕುಟುಂಬದ ನಡುವೆ ದಶಕಗಳಿಂದಲೂ ಸೌಹಾರ್ದ ಸಂಬಂಧ ಇತ್ತು. ಪುನೀತ್ ರಾಜ್ಕುಮಾರ್ ಸ್ಟಾರ್ ಆಗಿದ್ದರೂ ಬಹಳ ವಿನಯವನ್ನು ಹೊಂದಿದ್ದರು. ತಂದೆ ಕರುಣಾನಿಧಿ ನಿಧನ ಹೊಂದಿದ್ದಾಗ ಗೋಪಾಲಪುರಂ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದ ಪರವಾಗಿ ಸಂತಾಪವನ್ನು ವ್ಯಕ್ತಪಡಿಸಿದ್ದಿದ್ದು ನನಗೆ ನೆನಪಿದೆ'' ಎಂದು ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದರು.
ಹಾಗೆ ನೋಡಿದರೆ ಪುನೀತ್ ರಾಜ್ಕುಮಾರ್ ಜನಿಸಿದ್ದು ತಮಿಳುನಾಡಿನಲ್ಲಿಯೇ. ಅವರ ಬಾಲ್ಯವನ್ನು ತಮಿಳುನಾಡಿನಲ್ಲಿಯೇ ಕಳೆದ ಪುನೀತ್ಗೆ ತಮಿಳುನಾಡಿನಲ್ಲಿ ಹಲವು ಗೆಳೆಯರು ಇದ್ದಾರೆ. ತಮಿಳುನಾಡು ಚಿತ್ರರಂಗದ ಜೊತೆಗೂ ಅಪ್ಪುಗೆ ಬಹಳ ಆತ್ಮೀಯ ಬಂಧವಿತ್ತು. ನಟ ಸೂರ್ಯ ಹಾಗೂ ಅಪ್ಪು ಬಾಲ್ಯದ ಸ್ನೇಹಿತರಾಗಿದ್ದರು. ರಜನೀಕಾಂತ್ಗೂ ಅಪ್ಪು ಅಂದರೆ ಬಹಳ ಅಚ್ಚು-ಮೆಚ್ಚು.
ಅಪ್ಪು ನಿಧನವಾದ ಕೆಲ ದಿನಗಳ ಬಳಿಕ ತಮಿಳುನಾಡಿನಲ್ಲಿ ಅಪ್ಪು ಅಭಿಮಾನಿಗಳು ಅಪ್ಪುವಿನ ಭಾವಚಿತ್ರ ಇರಿಸಿಕೊಂಡು ಕೊಂಡ ಹಾದಿದ್ದು ತಮಿಳುನಾಡಿನಲ್ಲಿ ಅಪ್ಪುಗೆ ಇದ್ದ ಅಭಿಮಾನಿ ಬಳಗಕ್ಕೆ ಸಾಕ್ಷಿ.


Click it and Unblock the Notifications











