ರಾಕಿಂಗ್ ಸ್ಟಾರ್ ಯಶ್ ಹೊಗಳಿದ ಶಿವಣ್ಣ
ರಾಕಿಂಗ್ ಸ್ಟಾರ್ ಯಶ್ ಹಲವು ದಿನಗಳಿಂದ 'ಯಶೋಮಾರ್ಗ ಫೌಂಡೇಶನ್' ಮೂಲಕ ರೈತರಿಗಾಗಿ ಒಳ್ಳೇ ಕೆಲಸಗಳನ್ನು ಮಾಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಸದ್ಯದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ನಿರ್ಧರಿಸಿರುವ ಯಶ್, ಮೊನ್ನೆಯಷ್ಟೇ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]
ತೆರೆ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೆಯೂ ತಮ್ಮ ಉತ್ತಮ ಕೆಲಸಗಳಿಂದ ಹೀರೋ ಆಗಿರುವ ನಟ ಯಶ್ ಅವರ ಈ ಉತ್ತರ ಕರ್ನಾಟಕದ ಪ್ರವಾಸಕ್ಕೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ, ಯಶ್ ಬಗ್ಗೆ ಹೇಳಿದ್ದೇನು ತಿಳಿಯಲು ಮುಂದೆ ಓದಿ..

ಮಂಗಳೂರಿನಲ್ಲಿ ಶಿವಣ್ಣನ ಮನದಾಳದ ಮಾತುಗಳು
ನಿನ್ನೆ(ಮಾರ್ಚ್ 1) ಮಂಗಳೂರಿಗೆ 'ಕಟಪಾಡಿ ಕಟ್ಟಪ್ಪ' ಚಿತ್ರದ ಆಡಿಯೋ ಮೂಹೂರ್ತಕ್ಕೆ ಶಿವಣ್ಣ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಂಬಳ, ಎತ್ತಿನ ಹೊಳೆ ಯೋಜನೆ, ಡಬ್ಬಿಂಗ್ ವಿಚಾರಗಳ ಬಗ್ಗೆ ಮಾತನಾಡಿದ್ದು, ತೆರೆ ಹಿಂದೆ ರಿಯಲ್ ಹೀರೋ ಆಗಿ ಉತ್ತರ ಕರ್ನಾಟಕದ ಜನತೆಗೆ ನೆರವಾಗುತ್ತಿರುವ ಯಶ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್ ಪ್ರವಾಸ ಶ್ಲಾಘನೀಯ
ಯಶ್ ಅವರ ಉತ್ತರ ಕರ್ನಾಟಕದ ಪ್ರವಾಸ ಕುರಿತು ಕೇಳಿದಾಗ, "ಯಶ್ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಅವರ ಪ್ರವಾಸ ನಿಜಕ್ಕೂ ಶ್ಲಾಘನೀಯ. ಅವರಿಗೆ ಕಲಾವಿದರೂ, ಶಾಸಕರು, ಮಂತ್ರಿಗಳು ಹಾಗೂ ಅಧಿಕಾರಿಗಳು ಎಲ್ಲರೂ ಸಹಕಾರ ನೀಡಬೇಕು' ಎಂದು ಶಿವಣ್ಣ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಗಡಿ, ನೀರು ವಿಷಯದಲ್ಲಿ ಐಕ್ಯತೆ ತೋರಿಸಬೇಕು
" ಬರಗಾಲ ಬಂದಾಗ ಮಾತ್ರ ನಾವು ಭೇಟಿ ನೀಡುತ್ತೇವೆ. ಆದರೆ ರಾಜ್ಯಕ್ಕೆ ಎದುರಾಗುವ ಯಾವುದೇ ಸಮಸ್ಯೆಗಳ ಬಗ್ಗೆ ಕಲಾವಿದರಾದ ನಾವು ಸ್ಮಂದಿಸಬೇಕು. ಈ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು" - ಶಿವರಾಜ್ ಕುಮಾರ್, ನಟ

ಕಲಾವಿದರು ಒಂದು ಜಾಗಕ್ಕೆ ಸೀಮಿತವಲ್ಲ
"ಕಲಾವಿದರು ಕೇವಲ ಒಂದು ಜಾಗಕ್ಕೆ ಸೀಮಿತವಲ್ಲ. ಅವರಿಗೆ ಮಂಡ್ಯ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಒಂದೇ ಎಂಬ ಭಾವನೆ ಇರಬೇಕು", - ಶಿವರಾಜ್ ಕುಮಾರ್, ನಟ

ಎತ್ತಿನಹೊಳೆ ಯೋಜನೆಗೆ ಬೆಂಬಲವಿದೆ
ಬರಪೀಡಿತ ಪ್ರದೇಶಗಳ ಬಗ್ಗೆ ಮಾತನಾಡಿದ ಶಿವಣ್ಣ, "ಮಂಗಳೂರು ಮಾತ್ರವಲ್ಲದೇ ಮಂಡ್ಯ, ಕೊಪ್ಪಳ ಸಹ ಬರಪೀಡಿತ ಜಿಲ್ಲೆಯಾಗಿದೆ. ಬರಮುಕ್ತ ನಾಡನ್ನು ಕಟ್ಟಲು ನಾವು ಒಗ್ಗಟ್ಟಾಗಿರಬೇಕು. ಆಗ ಮಾತ್ರ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಎತ್ತಿನ ಹೊಳೆ ಯೋಜನೆಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲವಿದೆ. ಹೋರಾಟಕ್ಕೆ ಅನಿವಾರ್ಯ ಇದ್ದರೆ ಕರಾವಳಿ ಜನರ ಜೊತೆ ನಾವು ನಿಲ್ಲುತ್ತೇವೆ" ಎಂದು ಹೇಳಿದ್ದಾರೆ.

ಡಬ್ಬಿಂಗ್ ಬಗ್ಗೆ ಶಿವಣ್ಣ ಹೇಳಿದ್ದೇನು?
"ನಾನು ಮೊದಲಿನಿಂದಲೂ ಡಬ್ಬಿಂಗ್ ವಿರೋಧಿಸುತ್ತಾ ಬಂದಿದ್ದೇನೆ. ಕನ್ನಡದಲ್ಲಿಯೇ ಉತ್ತಮ ಚಿತ್ರಕಥೆಗಳಲಿದ್ದು, ಇತರೆ ಭಾಷೆಗಳನ್ನು ಡಬ್ಬಿಂಗ್ ಮಾಡಿ ಕನ್ನಡದಲ್ಲಿ ನೋಡುವ ಅವಶ್ಯಕತೆ ಇಲ್ಲ", - ಶಿವರಾಜ್ ಕುಮಾರ್, ನಟ


Click it and Unblock the Notifications











