ಒಬ್ಬ ಫ್ಯಾನ್ ಬಾಯ್ ತರ ಕಮಲ್ ಹಾಸನ್ ಅವರನ್ನು ಭೇಟಿಯಾದೆ ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ಘೋಸ್ಟ್ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಭಾರೀ ಪ್ರಚಾರದಲ್ಲಿ ತೊಡಗಿದ್ದು, ಘೋಸ್ಟ್ ಹಿಂದಿಯಲ್ಲೂ ಬಿಡುಗಡೆಯಾಗಲಿದ್ದು, ನಟ ಶಿವಣ್ಣ ಮತ್ತು ನಿರ್ದೇಶಕ ಶ್ರೀನಿವಾಸ್ ಮುಂಬೈನಲ್ಲಿ ಠಿಕಾಣಿ ಹೂಡಿದ್ದರು. ಹಲವು ಹಿರಿಯ ನಟರನ್ನು ಭೇಟಿಯಾಗಿದ್ದರು.
ಘೋಸ್ಟ್ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಚಿತ್ರತಂಡ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದು, ಶಿವರಾಜ್ ಕುಮಾರ್, ಬಾಲಿವುಡ್ ನಟ ಅನುಪಮ್ ಖೇರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ವೇಳೆ ತಾವು ಮುಂಬೈನಲ್ಲಿ ನಟ ಕಮಲ್ ಹಾಸನ್ ಅವರನ್ನು ಭೇಟಿಯಾದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.

ಫ್ಯಾನ್ ಬಾಯ್ ತರ ಕಮಲ್ ಹಾಸನ್ ಭೇಟಿ ಎಂದ ಶಿವಣ್ಣ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ತಾವು ಕಮಲ್ ಹಾಸನ್ ಅವರನ್ನು ಒಬ್ಬ ಫ್ಯಾನ್ ಬಾಯ್ ತರ ಭೇಟಿಯಾಗಿದ್ದು, ಮತ್ತೇನು ಅಲ್ಲ ಎಂದು ಹೇಳಿದ್ದಾರೆ. "ಕಮಲ್ ಹಾಸನ್ ಅವರು ನಾವಿದ್ದ ಹೋಟೆಲ್ನಲ್ಲಿಯೇ ಉಳಿದುಕೊಂಡಿದ್ದರು. ಅವರೇನೋ ಬೇರೆ ಕೆಲಸಕ್ಕೆ ಬಂದಿದ್ದರು. ನಾವಯ ಊಟ ಮಾಡುತ್ತಿದ್ದ ವೇಳೆ ಅವರು ಇದ್ದರು. ಆಗ ಕಮಲ್ ಹಾಸನ್ ಅವರನ್ನು ಮೀಟ್ ಮಾಡ್ತಿನಿ ಎಂದೆ ನೀವೇನು ಹಾಗೆ ಕೇಳ್ತಿರಿ ಮೀಟ್ ಮಾಡಿ ಅಂದರು ಅಷ್ಟೇ" ಎಂದಿದ್ದಾರೆ.
"ಹೇಗೆ ನನ್ನನ್ನು ಫ್ಯಾನ್ ಬಾಯ್ ಆಗಿ ಮೀಟ್ ಮಾಡಲು ಬರುತ್ತಾರೋ.. ನಾನು ಹಾಗೆ ಅವರನ್ನು ಭೇಟಿಯಾದೆ. ತುಂಬಾ ಖುಷಿ ಆಯಿತು. ಸಿನಿಮಾ ಬಗ್ಗೆ ಮಾತನಾಡುವ ಪ್ಲ್ಯಾನ್ ಇರಲಿಲ್ಲ. ಅವರ ಜೊತೆ ಮಾತನಾಡಬೇಕಿತ್ತು ಅಷ್ಟೇ. ಅವರ ಪರಿಸ್ಥಿತಿ ಹೇಗಿರುತ್ತದೋ. ಯಾರನ್ನು ಸಂಕಷ್ಟಕ್ಕೆ ಸಿಲುಕಿಸಬಾರದು. ಗೊತ್ತು ಅಂದ ಮಾತ್ರಕ್ಕೆ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅವರಿಗೆ ಸಮಯವಾದಾಗ ಸಿನಿಮಾ ನೋಡುತ್ತಾರೆ" ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಕಮಲ್ ಹಾಸನ್ ಭೇಟಿ
ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಶ್ರೀನಿವಾಸ್ ಮುಂಬೈನಲ್ಲಿ ಘೋಸ್ಟ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದ ವೇಳೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಫೋಟೋ ಹಂಚಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ವೈರಲ್ ಕೂಡ ಆಗಿತ್ತು.
"ಒಂದಾನೊಂದು ಕಾಲದಲ್ಲಿ ಒಂದು 'ಘೋಸ್ಟ್' ವಾಸಿಸುತ್ತಿತ್ತು. ಮುಂಬೈನಲ್ಲಿ ಘೋಸ್ಟ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕಮಲ್ ಹಾಸನ್ ಸರ್ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು" ಎಂದು ಫೋಟೋ ಹಂಚಿಕೊಂಡು ಶಿವಣ್ಣ ಖುಷಿ ಹಂಚಿಕೊಂಡಿದ್ದರು. ಹೀಗಾಗಿ ಸಿನಿಮಾ ಬಿಡುಗಡೆ ಅಥವಾ ಆಡಿಯೊ ಲಾಂಚ್ ವೇಳೆ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಆರಂಭವಾಗಿತ್ತು.

ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಾವಳಿ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಶಿವರಾಜ್ ಕುಮಾರ್ ಭೇಟಿಯಾಗಿದ್ದರು. ಜೊತೆಗೆ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ಟೈಗರ್ ಭಾಗ ಮೂರಕ್ಕೆ ಶುಭಾಶಯ ಹೇಳಿದ್ದರು. ಇದು ಕೂಡ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿತ್ತು. ಇಬ್ಬರು ನಟರು ಒಟ್ಟಿಗೆ ಕಾಣಿಸಿಕೊಳ್ಳಲಿ ಎಂದು ಹಲವರು ಬೇಡಿಕೆ ಇಟ್ಟಿದ್ದರು.
ಘೋಸ್ಟ್
ಶಿವರಾಜ್ಕುಮಾರ್ ಅಭಿನಯದ ಘೋಸ್ಟ್ ಅಕ್ಟೋಬರ್ 19 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಮತ್ತು ನಿರ್ದೇಶಕ ಶ್ರೀನಿವಾಸ್ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಅನುಪಮ್ ಕೇರ್, ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಯಕಿ ಇಲ್ಲ ಎನ್ನಲಾಗಿದೆ. ಜಯಂತಿಲಾಲ್ ಗಡ (ಪೆನ್ ಸ್ಟುಡಿಯೋಸ್) ಮತ್ತು ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸಂದೇಶ್ ನಾಗರಾಜ್ (ಮಾಜಿ ಎಂಎಲ್ಸಿ) 'ಘೋಸ್ಟ್' ಸಿನಿಮಾಗೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











