"38 ವರ್ಷ ಸಂಸಾರ ಮಾಡಿದ್ದಕ್ಕಿಂತ ಎಕ್ಸ್ಪೀರಿಯನ್ಸ್ ಬೇಕಾ?"; ಪತ್ನಿ ರಾಜಕೀಯ ಅನುಭವದ ಬಗ್ಗೆ ಶಿವಣ್ಣ
ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಸದ್ಯ ಡಬಲ್ ಟಾಸ್ಕ್ನಲ್ಲಿದ್ದಾರೆ. ಒಂದು ಕಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಪತ್ನಿ ಗೀತಾ ಅವರಿಗಾಗಿ ಚುನಾವಣೆಯ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಸದ್ಯ ಬ್ರೇಕ್ ಮಾಡಿಕೊಂಡು ಪತ್ನಿ ಪರ ಪ್ರಚಾರ ಮಾಡುವುದರೊಂದಿಗೆ, ಕಾಂಗ್ರೆಸ್ ಬೆಂಬಲಿಗರನ್ನು ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ.
ಮುಂಬರುವ 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದು ಗೊತ್ತೇ ಇದೆ. ಹೀಗಾಗಿ ಶಿವರಾಜ್ಕುಮಾರ್ ಪತ್ನಿಗೆ ಬೆಂಬಲ ನೀಡುತ್ತಿದ್ದಾರೆ. ಪತ್ನಿಗೆ ಶಿವಮೊಗ್ಗದಿಂದ ಟಿಕೆಟ್ ಅನೌನ್ಸ್ ಆಗುತ್ತಿದ್ದಂತೆ ಶಿವಣ್ಣ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಹೇಳಿಕೆ ಕೊಟ್ಟಿದ್ದರು.

ಇದೇ ವೇಳೆ ಗೀತಾ ಶಿವರಾಜ್ಕುಮಾರ್ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಅನೌನ್ಸ್ ಆಗುತ್ತಿದ್ದಂತೆ ರಾಜಕೀಯ ಅನುಭವ ಇಲ್ಲ ಅನ್ನುವ ಕಮೆಂಟ್ ಪಾಸ್ ಆಗಿದ್ದವು. ಅಂತಹ ಟೀಕೆಗಳಿಗೆ ಶಿವಣ್ಣ ಇಂದು (ಮಾರ್ಚ್ 20) ನೆರೆದಿದ್ದವರ ಮುಂದೆ ಉತ್ತರ ಕೊಟ್ಟಿದ್ದಾರೆ. ಪತ್ನಿ ಪರ ನಿಂತು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಪತ್ನಿ ಗೀತಾ ಪರ ಶಿವಣ್ಣ ಆಡಿದ ಮಾತುಗಳ ಝಲಕ್ ಇಲ್ಲಿದೆ.
"38 ವರ್ಷ ಸಂಸಾರ ಮಾಡಿದ ಅನುಭವವಿದೆ"
ಗೀತಾ ಶಿವರಾಜ್ಕುಮಾರ್ ಅನುಭವದ ಕೊರತೆಯಿದೆ ಎಂದವರಿಗೆ ಶಿವಣ್ಣ ತಿರುಗೇಟು ಕೊಟ್ಟಿದ್ದಾರೆ. "ಎಲ್ಲಾ ಕೇಳ ಬಹುದು ಏನು ಎಕ್ಸ್ಪೀರಿಯನ್ಸ್ ಇದೆ ಅಂತ. 38 ವರ್ಷ ಸಂಸಾರ ಮಾಡಿದ್ದಾರೆ ಅದಕ್ಕಿಂತ ಎಕ್ಸ್ಪೀರಿಯನ್ಸ್ ಬೇಕಾ? ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಶಕ್ತಿಧಾಮದಲ್ಲಿ ಇನ್ನೊಂದು ತಾಯಿಯಾಗಿ, ನಮ್ಮ ತಾಯಿ ಸ್ಥಾನದಲ್ಲಿ ತಾಯಿಯಾಗಿ, ರಾಜ್ಕುಮಾರ್ ಸೊಸೆಯಾಗಿ, ಶಿವರಾಜ್ಕುಮಾರ್ ಹೆಂಡತಿಯಾಗಿ, ಯಾಕಂದ್ರೆ ನನ್ನನ್ನು ಕಂಟ್ರೋಲ್ ಮಾಡುವುದು ತುಂಬಾನೇ ಕಷ್ಟ. ಅದು ಅವರಿಂದ ಮಾತ್ರ ಸಾಧ್ಯ. ಅದೆಲ್ಲದನ್ನೂ ತಡೆದುಕೊಂಡು ಮಾಡ್ತಾರೆ ಅಂದರೆ, ಇದಕ್ಕಿಂತ ಇನ್ನೇನು ಎಕ್ಸ್ಪೀರಿಯನ್ಸ್ ಬೇಕು." ಎಂದಿದ್ದಾರೆ ಶಿವಣ್ಣ.
"ಲೈಫೇ ಒಂದು ಎಕ್ಸ್ಪೀರಿಯನ್ಸ್"
"ಲೈಫೇ ಒಂದು ಎಕ್ಸ್ಪೀರಿಯನ್ಸ್. ಅವರಿಗೆ 58-59 ವರ್ಷ. ಅವರಿಗೆ ಗೊತ್ತು. ಜೀವನದಲ್ಲಿ ಸಾಕಷ್ಟು ನೋಡಿದ್ದಾರೆ. ನಾವು ಮದುವೆ ಆಗಿ 38 ವರ್ಷ. ಇವತ್ತು ಸ್ಟ್ರಾಂಗ್ ಆಗಿ ಇದ್ದೀವಿ ಅಂದರೆ, ಅದೇ ಗುರು ಬಾಂಡ್. ಯಾವ ಕುಟುಂಬದಲ್ಲಿ ಲೇಡಿ ಸ್ಟ್ರಾಂಗ್ ಆಗಿ ಇರುತ್ತಾಳೋ ಅವಳು ಸಮಾಜ ಸೇವೆ ಮಾಡುವುದಕ್ಕೆ ಪರ್ಫೆಕ್ಟ್. ಅವರಿಗೆ ಆ ತಕತ್ತು ಇರುತ್ತೆ. ಯಾಕಂದ್ರೆ, ಭೂಮಿ ತಾಯಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಇಡೀ ಭೂಮಿ ತಾಯಿ ನಮ್ಮೆಲ್ಲರ ಭಾರವನ್ನು ಹೊರುತ್ತಾಳೆ. ಒಂದು ಸಾರಿ ಅವಕಾಶ ಕೊಟ್ಟು ಆ ಭಾರನ ಹೊರೆಸಬಾರದ ನಾವು?" ಎಂದು ಶಿವಣ್ಣ ಪ್ರಶ್ನೆ ಮಾಡಿದ್ದಾರೆ.

"ಹೆಣ್ಣು ಮಕ್ಕಳು ತುಂಬಾನೇ ತ್ಯಾಗ ಮಾಡ್ತಾರೆ"
ಶಿವಣ್ಣ ಸಿಕ್ಕಾಪಟ್ಟೆ ಎನರ್ಜೆಟಿಕ್ ಆಗಿ ಪತ್ನಿ ಪರ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಹೆಣ್ಣು ಮಕ್ಕಳ ತ್ಯಾಗದ ಬಗ್ಗೆ ಮಾತಾಡಿದ್ದಾರೆ. "ಹೆಣ್ಣು ಮಕ್ಕಳು ತುಂಬಾನೇ ತ್ಯಾಗ ಮಾಡುತ್ತಾರೆ. ಇದು ಎಲ್ಲರಿಗೂ ಸೇರಬೇಕು. ಅವರು ಏನು ಕೆಲಸ ಮಾಡುವುದಿಲ್ಲ ಹೇಳಿ. ಬರೀ ಅಡುಗೆ ಮಾಡೋದು ಅಷ್ಟು ಸುಲಭ ಅಲ್ಲ ಸರ್.. ಅದಕ್ಕೆ ಸರಿಯಾಗಿ ಉಪ್ಪಿ ಹಾಕಬೇಕು. ಖಾರ ಹಾಕಬೇಕು. ಈರುಳ್ಳಿ ಕತ್ತರಿಸಬೇಕು. ಟೊಮ್ಯಾಟೋ ಹಾಕಬೇಕು. ತರಕಾರಿ ಹಾಕಬೇಕು. ಕಷ್ಟ ಪಟ್ಕೊಂಡು ಕೆಲಸ ಮಾಡಿಕೊಂಡು ಬರುತ್ತೇವೆ. ಏನು ಸರ್ ಬರೀ ಬೇಳೆ ಸಾರು ಅಂತೀವಿ. ಇಷ್ಟೆಲ್ಲ ನೆನಪು ಇಟ್ಕೊಂಡು ಗಂಡ ಕಷ್ಟ ಪಟ್ಕೊಂಡು ಬರುತ್ತಾನೆ. ಇಷ್ಟೆಲ್ಲ ಸಮಸ್ಯೆಗಳನ್ನು ಒಂದು ಹೆಣ್ಣು ಹೊರುತ್ತಾಳೆ ಅಂದ್ರೆ, ಖಂಡಿತಾ ಸಮಾಜದ ಎಲ್ಲಾ ಸಮಸ್ಯೆಗಳನ್ನು ಅವಳು ಹೊರಬಲ್ಲಳು." ಎಂದಿದ್ದಾರೆ.
"ಗೀತಾನ ನಿಮ್ಮ ಮಡಿಲಿಗೆ ಹಾಕಿದ್ದೀವಿ"
ಸದಾ ಪತ್ನಿ ಗೀತಾ ಪರವಾಗಿ ಅವರ ಜೊತೆ ಇರುತ್ತೇನೆ. ಆದರೆ, ತನಗೂ ತನ್ನದೇ ಕೆಲಸ ಇರೋದ್ರಿಂದ ನಾಲ್ಕು ದಿನ ಬರಲಿಲ್ಲ ಅಂದರೂ ಬೇಜಾರು ಮಾಡಿಕೊಳ್ಳಬೇಡಿ ಅಂತಾನೂ ಹೇಳಿದ್ದಾರೆ. "ಮಧು ಹೇಳಿದ ಹಾಗೆ ಗೀತಾನ ನಿಮ್ಮ ಮಡಿಲಿಗೆ ಹಾಕಿದ್ದೀವಿ. ಖಂಡಿತಾ ಈ ಬಾರಿ ಅವಳನ್ನು ಗೆಲ್ಲುಸುತ್ತೀರಾ ಅನ್ನೋ ಭರವಸೆಯಿದೆ. ನಾನು ನಾಲ್ಕು ದಿನ ಬರಲಿಲ್ಲ ಅಂದರೆ ಬೇಜಾರು ಮಾಡಿಕೊಳ್ಳಬೇಡಿ. ನಾನು ಇಲ್ಲ ಅಂದರೂ ಗೀತಾ ರೀತಿಯಲ್ಲಿ ನಾನು ಇರುತ್ತೇನೆ. ಅವರು ಮಾತಾಡುವುದರಲ್ಲಿ ನಾನು ಇರುತ್ತೇನೆ. ನಾನು ಆದಷ್ಟು ಎಲ್ಲಾ ಸಮಯದಲ್ಲೂ ಅವರೊಂದಿಗೆ ಇರುತ್ತೇನೆ. ಎಲ್ಲಾ ಊರಿಗು ಬರುತ್ತೇನೆ. ಇದು ನನ್ನ ಪ್ರಾಮಿಸ್." ಎಂದಿದ್ದಾರೆ.


Click it and Unblock the Notifications











