"ನಮಗೂ ಆಂಜನೇಯ ಸ್ವಾಮಿಗೂ ಅವಿನಾಭಾವ ಸಂಬಂಧವಿದೆ":'ಹನುಮಾನ್'ಗೆ ಜೈ ಎಂದ ಶಿವಣ್ಣ, ಡಾಲಿ
ಕೇವಲ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿನಿಮಾ 'ಹನುಮಾನ್' ಬಾಕ್ಸಾಫೀಸ್ನಲ್ಲಿ 100 ಕೋಟಿ ರೂಪಾಯಿ ಲೂಟಿ ಮಾಡಿದೆ. ತೆಲುಗು ಚಿತ್ರರಂಗ ಯುವ ನಾಯಕನ ಸಿನಿಮಾ ದಿಗ್ಗಜರಿಗೆ ಟಕ್ಕರ್ ಕೊಟ್ಟು ಮುನ್ನುಗ್ಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡಿರೋ ಈ ಸೂಪರ್ ಹೀರೊ ಸಿನಿಮಾಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತೇಜ್ ಸಜ್ಜ, ಕನ್ನಡದ ನಟಿ ಅಮೃತಾ ಐಯ್ಯರ್, ವಿನಯ್ ರೈ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಅಭಿನಯದ ಈ ಸೂಪರ್ ಹೀರೊ ಸಿನಿಮಾ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಬಾಕ್ಸಾಫೀಸ್ನಲ್ಲೂ ಧೂಳೆಬ್ಬಿಸುತ್ತಿರುವ 'ಹನುಮಾನ್'ಗೆ ಕನ್ನಡ ತಾರೆಯರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಡಾಲಿ ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಅದೇ ಇನ್ನೊಂದು ಕಡೆ ಶಿವರಾಜ್ಕುಮಾರ್ ಪತ್ನಿ ಜೊತೆ 'ಹನುಮಾನ್' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಕುಟುಂಬಕ್ಕೂ ಆಂಜನೇಯ ಸ್ವಾಮಿಗೂ ಅವಿನಾಭಾವ ಸಂಬಂಧವಿದೆ ಎಂದು ಶಿವಣ್ಣ 'ಹನುಮಾನ್' ಸಿನಿಮಾ ನೋಡಿ ಹೇಳಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
'ಹನುಮಾನ್' ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಅನ್ನು ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸೂಪರ್ ಹೀರೊ ಸಿನಿಮಾ ಆಗಿರುವುದರಿಂದ ಮಕ್ಕಳೊಂದಿಗೆ ಇಡೀ ಕುಟುಂಬ ಸಿನಿಮಾ ನೋಡುತ್ತಿದ್ದಾರೆ. ಇತ್ತ ಶಿವಣ್ಣ ಕೂಡ 'ಹನುಮಾನ್' ನೋಡಿದ ಬಳಿಕ ಬಾಲ್ಯದಲ್ಲಿ ಇಷ್ಟ ಪಡುತ್ತಿದ್ದ ಸೂಪರ್ ಹೀರೊಗಳನ್ನು ನೆನೆದಿದ್ದಾರೆ.
"ಹನುಮಾನ್ ಸಿನಿಮಾ ನೋಡುವಾಗ ನಾನು ನನ್ನ ಬಾಲ್ಯಕ್ಕೆ ಹೊರಟು ಹೋದೆ. ಟಾರ್ಜನ್ ಆಗಿರಬಹುದು. ಫ್ಯಾಂಟಮ್ ಆಗಿರಬಹುದು. ಬ್ಯಾಟ್ ಮ್ಯಾನ್ ಆಗಿರಬಹುದು ಯಾರೇ ಆಗಿದ್ದರೂ ಸೂಪರ್ ಹೀರೊ ಫೀಲಿಂಗ್ ಇದ್ದೇ ಇರುತ್ತೆ. ಹನುಮಾನ್ ಇಡೀ ಸಿನಿಮಾ ನೋಡುವಾಗ ನಾನು ಎಂಜಾಯ್ ಮಾಡುತ್ತಿದೆ. ನಾನು ಒಬ್ಬ ಸ್ಟಾರ್ ಅಂತ ಬಂದು ಸಿನಿಮಾ ನೋಡಿಲ್ಲ. ನಾನೊಬ್ಬ ಫ್ಯಾನ್ ಆಗಿ ಬಂದು ಸಿನಿಮಾ ನೋಡಿದ್ದೇನೆ." ಎಂದು ಶಿವಣ್ಣ ಹೇಳಿದ್ದಾರೆ.
ಹಾಗೇ ಆಂಜನೇಯ ಸ್ವಾಮಿಗೂ ತಮ್ಮ ಕುಟುಂಬಕ್ಕಿರುವ ನಂಟಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. "ನಮಗೂ ಆಂಜನೇಯ ಸ್ವಾಮಿಗೂ ಒಂದು ಅವಿನಾಭಾವ ಸಂಬಂಧವಿದೆ. ಭಜರಂಗಿ ಮುತ್ತಣ್ಣನಿಂದ ಇದೆ. ನಮ್ಮ ತಂದೆಯ ಹೆಸರು ಮುತ್ತುರಾಜ್. ಮುತ್ತತ್ತಿರಾಯ ಅಂತಾರೆ. ಹೀಗಾಗಿ ಎಲ್ಲೋ ಒಂದು ಕಡೆ ಆಂಜನೇಯನ ಜೊತೆ ನಂಟು ಇದೆ. 'ಭಜರಂಗಿ 1', 'ಭಜರಂಗಿ 2', 'ವಜ್ರಕಾಯ' ಆಗಲಿ ಒಂದೊಂದು ಸಂಬಂಧವಿದೆ." ಎಂದು ಇದೇ ಸಂದರ್ಭದಲ್ಲಿ ಶಿವಣ್ಣ ಹೇಳಿದ್ದಾರೆ.
ಡಾಲಿ ಧನಂಜಯ್ ಕೂಡ 'ಹನುಮಾನ್' ಸಿನಿಮಾದ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತನ್ನ ಎಕ್ಸ್ ಖಾತೆಯಲ್ಲಿ (ಟ್ವಿಟರ್) ಧನಂಜಯ್ " ಹನುಮಾನ್ ಚಿತ್ರತಂಡ ಇಷ್ಟು ದೊಡ್ಡ ಸಕ್ಸಸ್ ಕಂಡಿದ್ದಕ್ಕೆ ಅಭಿನಂದನೆಗಳು. ಅದ್ಭುತ ಅಭಿನಯದ ನೀಡಿದ ಸಹೋದರ ತೇಜ ಸಜ್ಜಗೂ ಅಭಿನಂದನೆ. ಜೈ ಹನುಮಾನ್" ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ತೆಲುಗು ನಟ ತೇಜ ಸಜ್ಜ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. " ಧನ್ಯವಾದಗಳು ಡಾಲಿ ಸರ್.. ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ.." ಅಂತ ಅವರ ಡೈಲಾಗ್ ಅನ್ನೇ ಬರೆದು ಪ್ರತಿಕ್ರಿಯಿಸಿದ್ದಾರೆ.
ಸದ್ಯ 'ಹನುಮಾನ್' ವಾರದ ಆರಂಭದಲ್ಲೂ ಬಾಕ್ಸಾಫೀಸ್ನಲ್ಲಿ ಚಮತ್ಕಾರ ಮಾಡುತ್ತಿದೆ. ಯುವ ಪ್ರತಿಭೆಯ ಪರ್ಫಾಮೆನ್ಸ್ಗೆ, ಸಿನಿಮಾದ ವಿಎಫ್ಎಕ್ಸ್ಗೆ ಪ್ರೇಕ್ಷಕರು ಮನಸೋತಿದ್ದಾರೆ. ಸದ್ಯ 100 ಕೋಟಿ ರೂಪಾಯಿ ಕಲೆ ಹಾಕಿರೋ ಈ ಸಿನಿಮಾ ಮುಂದಿನ ದಿನಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ? ಅನ್ನುವ ಕುತೂಹಲವಿದೆ.


Click it and Unblock the Notifications











