ತರುಣ್ ಸುಧೀರ್ 'ಏಳು ಮಲೆ' ಸಿನಿಮಾಗೆ ಸಾಥ್ ಕೊಟ್ಟ ಶಿವಣ್ಣ-ಪ್ರೇಮ್
ತರುಣ್ ಕಿಶೋರ್ ಸುಧೀರ್ ಈಗ ನಿರ್ಮಾಪಕರಾಗಿ ಬದಲಾಗಿದ್ದಾರೆ. 'ಕಾಟೇರ' ಬಳಿಕ ಮತ್ತೊಂದು ಸಿನಿಮಾ ನಿರ್ದೇಶನಕ್ಕೂ ಮುನ್ನ ನಿರ್ಮಾಣಕ್ಕೆ ಇಳಿದಿದ್ದಾರೆ. ಅದುವೇ 'ಏಳು ಮಲೆ'. ಆರಂಭದಲ್ಲಿಯೇ ತರುಣ್ ಸುಧೀರ್ ಈ ಸಿನಿಮಾದ ಪೋಸ್ಟರ್ ರಿಲೀಸ್ ಕುತೂಹಲವನ್ನು ಕೆರಳಿಸಿದ್ದರು. ಈಗ ಸಿನಿಮಾದ ಟೈಟಲ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಈ ಸಿನಿಮಾಗೆ ಶುಭ ಹಾರೈಸಿದ್ದಾರೆ.
'ಏಳು ಮಲೆ' ಸಿನಿಮಾವನ್ನು ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರಿಗೆ ಚೊಚ್ಚಲ ಸಿನಿಮಾ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ನಡೆದಿತ್ತು. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಟೈಟಲ್ ಟೀಸರ್ ಅನ್ನು ರಿಲೀಸ್ ಮಾಡಿ ಶುಭ ಹಾರೈಸಿದರು. ಇವರೊಂದಿಗೆ ಜೋಗಿ ಪ್ರೇಮ್ ಕೂಡ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ 'ಏಳು ಮಲೆ' ಸಿನಿಮಾಗೆ ಹೀರೋ ಆಗಿ ನಟಿಸುತ್ತಿದ್ದಾರೆ. ಹಾಗೇ 'ಮಹಾನಟಿ' ಖ್ಯಾತಿಯ ಪ್ರಿಯಾಂಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ಮಿಸುತ್ತಿದ್ದರು ಈ ಸಿನಿಮಾ ನೈಜ ಘಟನೆಯನ್ನು ಆಧರಿಸಿದೆ. 2004ರಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ನಡೆದಿದ್ದ ಈ ಘಟನೆಯನ್ನು ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಲಾಗಿದೆ.
'ಏಳು ಮಲೆ' ಟೀಸರ್ ಲಾಂಚ್ ಮಾಡಿದ ಬಳಿಕ ಶಿವಣ್ಣ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. " ಟೈಟಲ್ ಟೀಸರ್ ತುಂಬಾ ಚೆನ್ನಾಗಿದೆ. ಒಳ್ಳೆಯವರಿಗೆ ಒಳ್ಳೆದಾಗುತ್ತದೆ ಎನ್ನುವುದಕ್ಕೆ ಟೈಟಲ್ ಟೀಸರ್ ಸಾಕ್ಷಿ. ರಾಣಾ ತುಂಬಾ ಹ್ಯಾಂಡ್ಸಮ್ ಇದ್ದಾನೆ. ವಿಲನ್ ಸಮಯದಲ್ಲಿ ಅವನಿಗೆ ಹೀರೋ ಆಗ್ತಾನೆ ಅಂತ ಹೇಳಿದ್ದೆ. ಏಳು ಮಲೆ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ. ಈ ಟೀಸರ್ನಲ್ಲಿ ಪ್ರಿಯಾಂಕಾ ಫಸ್ಟ್ ಟೈಮ್ ಅನಿಸುವುದಿಲ್ಲ. ಹೊಸಬರು ಬರಬೇಕು. ಸಿನಿಮಾ ಮಾಡಬೇಕು. ಮೆಚ್ಚುಗೆ ಬಂದ ಮೇಲೆ ಹಣ ಮಾಡೋದು ಇದ್ದೇ ಇದೆ. ಅದು ತಾನಾಗಿಯೇ ಆಗುತ್ತೆ. ಮೊದಲು ಮೆಚ್ಚಿಗೆ ಆಮೇಲೆ ಹೆಚ್ಚಿಗೆ" ಎಂದು ಶಿವಣ್ಣ ಸಲಹೆ ನೀಡಿದ್ದಾರೆ.
ಇನ್ನು ಪತ್ನಿ ರಕ್ಷಿತಾ ತಮ್ಮ ರಾಣಾರನ್ನು ಪ್ರೇಮ್ ಅವರೇ ಲಾಂಚ್ ಮಾಡಿದ್ದರು. ರಾಣಾ ನಟಿಸಿದ 'ಏಕ್ ಲವ್ ಯಾ' ಸಿನಿಮಾ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣದೇ ಹೋದರೂ, ರಾಣಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ತರುಣ್ ಸುಧೀರ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಣಾ ಎರಡನೇ ಸಿನಿಮಾ ಬಗ್ಗೆ ಜೋಗಿ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. "ಜೋಗಿ ಸಿನಿಮಾ ಮಾಡುವಾಗ ಅಪ್ಪಾಜಿ ಜೊತೆಯಲ್ಲಿ ಕಾಲ ಕಳೆದಿದ್ದೆ. ನಮ್ಮ ಕಾಡಿನವರು ಎಂದು ಹೇಳುತ್ತಿದ್ದರು. ನಮ್ಮ ಯಜಮಾನ್ರು ಶಿವಣ್ಣ ಲಾಂಚ್ ಮಾಡಿದ್ದಾರೆ. ನೂರಕ್ಕೆ ನೂರರಷ್ಟು ಸಿನಿಮಾ ಯಶಸ್ಸು ಆಗುತ್ತೆ" ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
ಇದೇ ವೇಳೆ ನಿರ್ಮಾಪಕ ತರುಣ್ ಸುಧೀರ್ ಕೂಡ ತಮ್ಮ ಚೊಚ್ಚಲ ನಿರ್ಮಾಣದ ಸಿನಿಮಾ ಬಗ್ಗೆ ಮಾತಾಡಿದ್ದಾರೆ. "ಏಳು ಮಲೆ ಊರು, ಮಲೆಮಹದೇಶ್ವರ ದೇವಸ್ಥಾನ ಹಾಗೂ ಅದರ ಐತಿಹಾಸವನ್ನು ಸಿನಿಮಾ ಮೂಲಕ ಹೇಳುವುದರಲ್ಲಿ ನಿಸ್ಸಾಮರು ಅಂದರೆ ಶಿವಣ್ಣ ಹಾಗೂ ಪ್ರೇಮ್ ಸರ್. ಶಿವಣ್ಣ ಅವರಿಂದ ಟೈಟಲ್ ಲಾಂಚ್ ಆಗುತ್ತಿರುವುದು ನನಗೆ ದೊಡ್ಡ ಆಶೀರ್ವಾದ." ಎಂದು ತರುಣ್ ಸುಧೀರ ಹೇಳಿದ್ದಾರೆ.
ತರುಣ್ ಸುಧೀರ್ ನಿರ್ಮಾಣದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಒಳ್ಳೆಯ ವ್ಯಾಪಾರ ಮಾಡಿದೆ. ಈಗಾಗಲೇ ಒಳ್ಳೆಯ ಮೊತ್ತಕ್ಕೆ ಆನಂದ್ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ. ಇನ್ನು ಟೈಟಲ್ ಟೀಸರ್ ಆಗುವುದಕ್ಕೂ ಮೊದಲೇ ಸಿನಿಮಾ ಮಾರಾಟ ಆಗಿದೆ. ಒಳ್ಳೆಯ ಸಿನಿಮಾ, ಅದಕ್ಕೆ ಕಂಟೆಂಟ್ ಇದ್ದರೆ ಅದಕ್ಕೆ ಬೆಲೆಯಿದೆ ಎಂದು ತರುಣ್ ಸುಧೀರ ಹೇಳಿದ್ದಾರೆ.
ಇನ್ನು 'ಏಳು ಮಲೆ' 2004ರಲ್ಲಿ ನಡೆದ ಘಟನೆಯನ್ನು ಆಧರಿಸಲಾಗಿದೆ. ಇದು ಹೋರಾಟದ ಕಥೆಯಲ್ಲ. ಇದೊಂದು ಪ್ರೇಮಕತೆ ಎಂದು ನಿರ್ದೇಶಕ ಪುನೀತ್ ಹೇಳಿದ್ದಾರೆ. ಇನ್ನು ಸಿನಿಮಾವನ್ನು ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನೂ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ನಟಿಸಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











