"ವೀರಪ್ಪನ್ ಕಿಡ್ನಾಪ್ ಮಾಡಿದಾಗ ನಮ್ಮ ಜೊತೆ ನಿಂತಿದ್ರು.. ಅದನ್ನು ನಮ್ಮ ಕುಟುಂಬ ಮರೆಯಲ್ಲ"; ಶಿವಣ್ಣ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಸದಾಶಿವನಗರದ ಅವರ ನಿವಾಸದಲ್ಲಿ ಕೊನೆಯುಸಿರೆಳೆದ ಎಸ್ ಎಂ ಕೃಷ್ಣ ಅವರ ಅಂತಿಮ ದರ್ಶನವನ್ನು ಶಿವರಾಜ್ಕುಮಾರ್ ಪಡೆದಿದ್ದಾರೆ.
ಡಾ.ರಾಜ್ಕುಮಾರ್ ಹಾಗೂ ಎಸ್.ಎಂ ಕೃಷ್ಣ ಅವರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಮೊದಲಿನಿಂದಲೂ ಅಣ್ಣಾವ್ರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅದರಲ್ಲೂ ಅಣ್ಣಾವ್ರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿದ ಸಮಯದಲ್ಲಿ ಎಸ್ ಎಂ ಕೃಷ್ಣ ಅವರೇ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ದೊಡ್ಮನೆಗೆ ನೆರವಾಗಿದ್ದರು.

ವೀರಪ್ಪನ್ನಿಂದ ಅಣ್ಣಾವ್ರನ್ನು ಬಿಡಿಸಿಕೊಂಡು ಬರಲು ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಪ್ರಯತ್ನ ನೆನಪಿನಲ್ಲಿ ಉಳಿಯುತ್ತೆ. ಎಸ್ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ಕುಮಾರ್ ಕಠಿಣ ಸಮಯದಲ್ಲಿ ತಮ್ಮ ಕುಟುಂಬದ ಪರವಾಗಿ ನಿಂತಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರ ಕಿಡ್ನಾಪ್ ಆದಾಗ ಸಿಎಂ ಆಗಿ ಎಸ್ಎಂ ಕೃಷ್ಣ ಅವರು ನಡೆದುಕೊಂಡು ರೀತಿಯನ್ನು ಮಾಧ್ಯಮಗಳೊಂದಿಗೆ ಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡುವಾಗ ಎಸ್ಎಂ ಕೃಷ್ಣ ಜೊತೆ ತಮ್ಮ ಕುಟುಂಬದ ಸಂಬಂಧವನ್ನು ಹಂಚಿಕೊಂಡಿದ್ದಾರೆ. "ಯಾವಾಗಲೂ ಅಷ್ಟೇ ಎಸ್.ಎಂ.ಕೃಷ್ಣ ಅಂದರೆ ಒಂದು ಗೌರವ ಇರೋದು. ಒಬ್ಬ ಮನುಷ್ಯ ಹೇಗಿರಬೇಕು ಅಂದರೆ, ಎಸ್ ಎಂ ಕೃಷ್ಣ ತರ ಇರಬೇಕು. ಶಿಸ್ತು, ಮಾಡುವ ಕೆಲಸದಲ್ಲಿ ಇರಬಹುದು. ಹಾಗೇ ವೀರಪ್ಪನ್ ಕಿಡ್ನಾಪ್ ಮಾಡಿದ ಸಮಯದಲ್ಲಿ ನಮ್ಮ ಜೊತೆ ನಿಂತಿದ್ದನ್ನು ನಮ್ಮ ಕುಟುಂಬ ಯಾವತ್ತೂ ಮರೆಯುವುದಿಲ್ಲ." ಎಂದು ಹೇಳಿದ್ದಾರೆ.

ಹಾಗೇ ಎಸ್ಎಂ ಕೃಷ್ಣ ಅವರ ಕುಟುಂಬದೊಂದಿಗೂ ಶಿವರಾಜ್ಕುಮಾರ್ ಒಡನಾಟವನ್ನು ಇಟ್ಟುಕೊಂಡಿದ್ದರು. "ವೈಯಕ್ತಿವಾಗಿ ನಮ್ಮ ಕುಟುಂಬದ ಜೊತೆ ಆತ್ಮೀಯತೆ ಇತ್ತು. ಅವರ ಅಳಿಯ ಇರಬಹುದು, ಇಡೀ ಕುಟುಂಬ ಪ್ರೇಮ ಆಂಟಿ ಇರಬಹುದು ಎಲ್ಲರೊಂದಿಗೂ ಒಂದು ಆತ್ಮೀಯತೆ ಇತ್ತು. ವಯಸ್ಸು ಎಷ್ಟೇ ಆದರೂ ಅವರು ಹೋದಾಗ ದು:ಖ ಆಗುತ್ತೆ. 92 ವರ್ಷ ಆಗಿದೆ ಅಂತ ಹೇಳಬಹುದು ಆದರೂ, ಮನಸ್ಸಿನಲ್ಲಿ ಕಷ್ಟ ಅನ್ನೋದು ಇದ್ದೇ ಇರುತ್ತೆ. ದೇವರು ಆ ಕುಟುಂಬಕ್ಕೆ ಶಕ್ತಿ ಕೊಡಲಿ. ಆ ಕುಟುಂಬದೊಂದಿಗೆ ನಾವೆಲ್ಲರೂ ಇರುತ್ತೇವೆ." ಎಂದಿದ್ದಾರೆ.
ದೊಡ್ಮನೆ ಕುಟುಂಬದಿಂದ ಯುವರಾಜ್ಕುಮಾರ್ ಜೊತೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಬಂದು ಅಂತಿಮ ನಮನ ಸಲ್ಲಿಸಿದ್ದರು. ಇನ್ನು ಡಾ.ರಾಜ್ಕುಮಾರ್ ಕಿಡ್ನಾಪ್ ಆದಾಗ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ವೀರಪ್ಪನ್ ಸುಮಾರು 108 ದಿನಗಳ ಕಾಲ ಅಣ್ಣಾವ್ರನ್ನು ಕಾಡಿನಲ್ಲಿ ಇಟ್ಟುಕೊಂಡಿದ್ದ. ವೀರಪ್ಪನ್ ಬೇಡಿಕೆ ಈಡೇರಿಸಲು ಸಮಯ ತೆಗೆದುಕೊಂಡಿತ್ತು. ದೊಡ್ಡ ಮೊತ್ತದ ಹಣವನ್ನು ಬೇಡಿಕೆ ಇಟ್ಟಿದ್ದ. ಹಾಗೇ ಬಂಧಿಯಾಗಿರುವ ತನ್ನ ಸಹಚರರನ್ನು ಬಿಡುವಂತೆ ಹೇಳಿದ್ದ.
ಸುಮಾರು 50 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದ. ರಾಜ್ಯದಲ್ಲಿ ಅಣ್ಣಾವ್ರು ಕಿಡ್ನಾಪ್ ಆದ ವಿಷಯ ಕೇಳಿ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಆಗಿದ್ದವು. ಈ ಸಂದರ್ಭದಲ್ಲಿ ಎಸ್ ಎಂ ಕೃಷ್ಣ ಈ ಗಂಭೀರ ವಿಷಯವನ್ನು ನಾಜೂಕಾಗಿ ಬಗೆ ಹರಿಸಿದ್ದರು. ದೊಡ್ಮೆನೆ ಕುಟುಂಬದೊಂದಿಗೆ ನಿಂತು ಅಣ್ಣಾವ್ರನ್ನು ಸೇಫ್ ಆಗಿ ಬಿಡಿಸಿಕೊಂಡು ಬಂದಿದ್ದರು. ಆ ಘಟನೆಯನ್ನೇ ಶಿವರಾಜ್ಕುಮಾರ್ ಇಂದು ನೆನಪಿಸಿಕೊಂಡಿದ್ದಾರೆ.


Click it and Unblock the Notifications











