'ಶಕ್ತಿಧಾಮ'ದ ಮಕ್ಕಳೊಂದಿಗೆ ಮೈಸೂರಿನಲ್ಲಿ ಗಣರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ ಶಿವಣ್ಣ
ಡಾ.ರಾಜ್ಕುಮಾರ್ ಕುಟುಂಬ ಮೈಸೂರಿನಲ್ಲಿ ಸ್ಥಾಪಿಸಿರುವ 'ಶಕ್ತಿಧಾಮ' ಅನಾಥ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಪಾರ್ವತಮ್ಮ ರಾಜ್ಕುಮಾರ್ ಇವರುವವರೆಗೂ ಅವರೇ ಈ ಶಕ್ತಿಧಾಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅವಳ ಬಳಿಕ ಪುನೀತ್ ರಾಜ್ಕುಮಾರ್ ಆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು. ಅಪ್ಪು ಅಗಲಿದ ಬಳಿಕ ಶಕ್ತಿಧಾಮವನ್ನು ಶಿವರಾಜ್ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ನೋಡಿಕೊಳ್ಳುತ್ತಿದ್ದಾರೆ.
ಮೈಸೂರಿನಲ್ಲಿ ಇರುವ ಈ ಶಕ್ತಿಧಾಮಕ್ಕೆ ಶಿವರಾಜ್ಕುಮಾರ್ ಆಗಾಗ ಹೋಗಿ ಬರುತ್ತಾರೆ. ಅಲ್ಲಿನ ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಸಂಭ್ರಮಿಸುತ್ತಾರೆ. ಈಗ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಗುರುದತ್ ಶಕ್ತಿಧಾಮಕ್ಕೆ ತೆರಳಿದ್ದರು. ಅಲ್ಲಿನ ಮಕ್ಕಳೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

ಶಕ್ತಿಧಾಮದಲ್ಲಿ ಶಿವಣ್ಣ ಧ್ವಜಾರೋಹಣ
ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್ಕುಮಾರ್ ಹಾಗೂ ಪತ್ನಿ ಗೀತಾ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡುವ ಮೂಲಕ 'ರಿಪಬ್ಲಿಕ್ ಡೇ' ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಶಕ್ತಿಧಾಮದ ಮಕ್ಕಳಿಗೆ ಸ್ವತಃ ಶಿವಣ್ಣನೇ ಸಿಹಿ ಹಂಚಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಶಿವಣ್ಣ ತಮ್ಮ ಪತ್ನಿ ಗೀತಾ ಅವರೊಂದಿಗೆ ಶಕ್ತಿಧಾಮಕ್ಕೆ ಭೇಟಿ, ಅಲ್ಲಿನ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಮಕ್ಕಳೊಂದಿಗೆ ಖೊ ಖೋ ಆಡಿದ್ದ ಶಿವಣ್ಣ
ಶಿವರಾಜ್ಕುಮಾರ್ ಬಿಡುವಿನ ವೇಳೆಯಲ್ಲಿ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನ ಮಕ್ಕಳೊಂದಿಗೆ ಬೆರೆಯುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಶಿವರಾಜ್ಕುಮಾರ್ ಶಕ್ತಿಧಾಮಕ್ಕೆ ಹೋಗಿದ್ದರು. ಆ ವೇಳೆ ಶಕ್ತಿಧಾಮದ ಹೆಣ್ಣು ಮಕ್ಕಳೊಂದಿಗೆ ಖೋ ಖೋ ಆಟ ಆಡಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಶಿವಣ್ಣ ಆಟ ಆಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು.

ಅಪ್ಪು ನಿಧನದ ಬಳಿಕ ಶಕ್ತಿಧಾಮದ ಶಕ್ತಿ ವಿಶ್ವಕ್ಕೆ ಗೊತ್ತಾಯ್ತು
ಅಣ್ಣಾವ್ರ ಕುಟುಂಬ ಮೈಸೂರಿನಲ್ಲಿ ಏನೋ ಸಮಾಜಮುಖಿ ಕೆಲಸದಲ್ಲಿ ನಿರತರಾಗಿದೆ ಎಂಬುದಷ್ಟೇ ಗೊತ್ತಿತ್ತು. ಶಕ್ತಿಧಾಮ ಯಾವ ಉದ್ದೇಶವನ್ನು ಇಟ್ಟಕೊಂಡು ಕೆಲಸ ಮಾಡುತ್ತೆ ಅನ್ನುವುದು ಗೊತ್ತಿರಲಿಲ್ಲ. ಪುನೀತ್ ರಾಜ್ಕುಮಾರ್ ನಿಧನ ಬಳಿಕ ಇಡೀ ವಿಶ್ವಕ್ಕೆ ಶಕ್ತಿಧಾಮದ ಶಕ್ತಿ ಪಸರಿಸಿದೆ. ಪುನೀತ್ ಯಾರಿಗೂ ಗೊತ್ತಿಲ್ಲದಂತೆ ಶಕ್ತಿಧಾಮದ ಕುಂದುಕೊರತೆಗಳನ್ನು ನೀಗಿಸುತ್ತಿದ್ದರು. ಶಕ್ತಿಧಾಮಕ್ಕೆ ದೊಡ್ಡ ಶಕ್ತಿಯಾಗಿಯೇ ನಿಂತಿದ್ದರು. ಈಗ ಆ ಸ್ಥಾನದಲ್ಲಿ ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ನಿಂತಿದ್ದಾರೆ.

ಅನಾಥ ಹೆಣ್ಣು ಮಕ್ಕಳ ಕುಟೀರ 'ಶಕ್ತಿಧಾಮ'
ಅನಾಥ ಹೆಣ್ಣು ಮಕ್ಕಳು, ಕುಟುಂಬದಿಂದ ದೂರ ಉಳಿದವರು, ಶಿಕ್ಷಣದಿಂದ ವಂಚಿತರಾದವರಿಗೆ ಶಕ್ತಿಧಾಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮೊದಲು ಶಕ್ತಿಧಾಮದ ಜವಾಬ್ದಾರಿಯನ್ನು ಪಾರ್ವತಮ್ಮ ರಾಜ್ಕುಮಾರ್ ನೋಡಿಕೊಳ್ಳುತ್ತಿದ್ದರು. ಅವರ ಬಳಿಕ ಗೀತಾ ಶಿವರಾಜ್ಕುಮಾರ್ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಲವು ವರ್ಷಗಳಿಂದ ಅನಾಥ ಹೆಣ್ಣುಮಕ್ಕಳಿಗೆ ಅಣ್ಣಾವ್ರ ಕುಟುಂಬ ಆಶ್ರಯದಾತರಾಗಿದ್ದಾರೆ.


Click it and Unblock the Notifications











