"ನನ್ನ ತಂದೆ ತೋರಿದ ಸ್ಥೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ"; ಶಿವಣ್ಣನ ಸರ್ಜರಿ ಬಗ್ಗೆ ಪುತ್ರಿ ಭಾವನಾತ್ಮಕ ಪೋಸ್ಟ್
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ಗೆ ನಿನ್ನೆ (ಡಿಸೆಂಬರ್ 24) ಅಮೆರಿಕದ ಮಿಯಾಮಿಯಲ್ಲಿ ವೈದ್ಯರು ಮಾಡಿದ ಸರ್ಜರಿ ಯಶಸ್ವಿಯಾಗಿದೆ. ಈ ಸರ್ಜರಿಗೂ ಮುನ್ನ ಅವರ ಕುಟುಂಬ, ಆಪ್ತರು ಹಾಗೂ ಅಭಿಮಾನಿಗಳು ಆತಂಕದಲ್ಲಿ ಇದ್ದರು. ಹೀಗಾಗಿ ಪತ್ನಿ ಗೀತಾ ಶಿವರಾಜ್ಕುಮಾರ್, ಮಧು ಬಂಗಾರಪ್ಪ ಹಾಗೂ ವೈದ್ಯರು ವಿಡಿಯೋ ಮೂಲಕ ಶಿವಣ್ಣ ಸರ್ಜರಿ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.
ಅಮೆರಿಕದ ಮಿಯಾಮಿ ಹೆಲ್ತ್ ಕೇರ್ನಲ್ಲಿ ಶಿವಣ್ಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಭಾರತೀಯ ಮೂಲದ ವೈದ್ಯ ಡಾ. ಮುರುಗೇಸನ್ ಮನೋಹರನ್ ನೇತೃತ್ವದಲ್ಲಿ ಶಿವಣ್ಣಗೆ ಸರ್ಜರಿಯನ್ನು ಮಾಡಲಾಗಿದೆ. ವೈದ್ಯರು ಸರ್ಜರಿ ಯಶಸ್ವಿಯಾಗಿದೆ ಎಂದು ಹೇಳಿದ ಮೇಲೆ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶಿವಣ್ಣ ಆರೋಗ್ಯದ ಬಗ್ಗೆ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಇದೇ ಸಂದರ್ಭದಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವೈದ್ಯರಿಗೆ, ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಹಿತೈಷಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಜೊತೆ ಪುತ್ರಿ ನಿವೇದಿತಾ ಕೂಡ ಅಮೆರಿಕಗೆ ತೆರಳಿದ್ದರು. ನಿನ್ನೆ (ಡಿಸೆಂಬರ್ 24) ಸರ್ಜರಿ ನಡೆದ ಬಳಿಕ ನಿವೇದಿತಾ ಶಿವರಾಜ್ಕುಮಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಂಬಲಕ್ಕೆ ನಿಂತಿದ್ದವರಿಗೆ ತಮ್ಮ ಪೋಸ್ಟ್ನಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಆ ಪೋಸ್ಟ್ ಹೀಗಿದೆ.
"ದೇವರ ಕೃಪೆಯಿಂದ ನನ್ನ ತಂದೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾಗಿರುವ, ಮಿಯಾಮಿ ಹೆಲ್ತ್ ಕೇರ್ ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ.ಮುರುಗೇಸನ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ಪೂರ್ವಕ ಧನ್ಯಾವಾದಗಳನ್ನು ಅರ್ಪಿಸುತ್ತೇವೆ." ಎಂದು ನಿವೇದಿತಾ ಹೇಳಿದ್ದಾರೆ.
"ಈ ಪಯಣದಲ್ಲಿ ನನ್ನ ತಂದೆ ತೋರಿದ ಸ್ಥೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನು ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮಗೂ ಅಶಾಭಾವ ಮೂಡಿಸಿ ನಮ್ಮೆಲ್ಲರಿಗೂ ಧೈರ್ಯ ಒದಗಿಸಿದೆ." ಎಂದು ಶಿವಣ್ಣ ಆತ್ಮಸ್ಥೈರ್ಯದ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.
"ಇದರ ನಡುವೆ, ಎಲ್ಲಾ ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮದ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಶಕ್ತಿಯ ಮೂಲವಾಗಿವೆ. ನೀವೆಲ್ಲರೂ ತೋರಿದ ಕಾಳಜಿ ನಮಗೆ ಮುನ್ನಡೆಯುವ ಬಲ ತುಂಬಿದ್ದು, ಅದಕ್ಕೆ ನಾವೆಂದೆಂದಿಗೂ ಅಭಾರಿಯಾಗಿರುತ್ತೇವೆ.
ತಂದೆಯ ಚೇತರಿಕೆಯ ಕುರಿತು ಬರುವ ದಿನಗಳಲ್ಲಿ ತಿಳಿಸುತ್ತೇವೆ. ಈ ಪಯಣದಲ್ಲಿ ನಾವು ಮುಂದಿನ ಹೆಜ್ಜೆ ಇಡುತ್ತಿರಲು, ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆ." ಎಂದು ನಿವೇದಿತಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ಗೆ ನೆಟ್ಟಿಗರು ಹಾಗೂ ಚಿತ್ರರಂಗದ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











