ಶಿವಮೊಗ್ಗದಲ್ಲಿ ಗೀತಕ್ಕ ಗೆಲ್ಲಲಿಲ್ಲ; ದೊಡ್ಮನೆಗೆ ರಾಜಕೀಯ ಒಲಿಯಲಿಲ್ಲ!
ಶಿವಮೊಗ್ಗ: 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕುತೂಹಲ ಕೆರಳಿಸಿದ ಕ್ಷೇತ್ರಗಳಲ್ಲಿ ಶಿವಮೊಗ್ಗ ಕೂಡ ಒಂದು. ಕನ್ನಡ ಚಿತ್ರರಂಗದ ದೊಡ್ಮನೆ ಸೊಸೆ, ಶಿವಣ್ಣನ ಪತ್ನಿ ಗೀತಾ ಶಿವರಾಜ್ಕುಮಾರ್ ಎರಡನೇ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಗೆಲ್ಲಬಹುದು ಎಂಬ ಆಸೆ ಇಟ್ಟುಕೊಂಡಿದ್ದರು.
ಗೀತಾ ಶಿವರಾಜ್ಕುಮಾರ್ ಸಹೋದರ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿದ್ದಾರೆ. ಹಾಗೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಗೀತಾ ಶಿವರಾಜ್ಕುಮಾರ್ಗೆ ಅತೀ ಹೆಚ್ವು ಬೆಂಬಲ ಸಿಕ್ಕಿತ್ತು. ಈ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರದ ಮತದಾರರು ಈ ಬಾರಿ ದೊಡ್ಮನೆ ಸೊಸೆಯನ್ನು ಗೆಲ್ಲಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು.

ಇನ್ನೊಂದು ಕಡೆ ಶಿವರಾಜ್ಕುಮಾರ್ ಬಿಸಿ ಎನ್ನದೆ ಪತ್ನಿ ಪರ ನಿರಂತರವಾಗಿ ಪ್ರಚಾರ ಮಾಡಿದ್ದರು. ಶಿವಮೊಗ್ಗ ಕ್ಷೇತ್ರವನ್ನೆಲ್ಲ ನಿರಂತರವಾಗಿ ಸುತ್ತಿ ಪತ್ನಿ ಗೀತಾ ಪರ ಪ್ರಚಾರ ಮಾಡಿದ್ದರು. ಇವರೊಂದಿಗೆ ಕನ್ನಡದ ಚಿತ್ರರಂಗದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಕೂಡ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇಷ್ಟೆಲ್ಲ ಬೆಂಬಲದ ಹೊರತಾಗಿಯೂ, ಅಣ್ಣಾವ್ರ ಮನೆಯ ಮೊದಲ ಸೊಸೆ ಎರಡನೇ ಬಾರಿ ಸೋಲು ಕಾಣಬೇಕಾಯ್ತು.
2024ರ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಶಿವಣ್ಣ ರೊಚ್ಚಿಗೆದ್ದು ಪ್ರಚಾರ ಮಾಡಿದ್ದರು. ಎದುರಾಳಿಗಳಿಗೆ ಪ್ರಚಾರದ ವೇಳೆನೇ ತಿರುಗೇಟು ಕೊಟ್ಟಿದ್ದರು. ಇತ್ತ ಗೀತಕ್ಕ ಕೂಡ ಪ್ರಚಾರದ ವೇಳೆ ತಮ್ಮನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು. ಒಂದ್ಕಡೆ ದೊಡ್ಮನೆಯ ಸೊಸೆ, ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರಿ ಅನ್ನುವ ಹಿನ್ನೆಲೆಯಿದ್ದರೂ, ಗೀತಾ ಶಿವರಾಜ್ಕುಮಾರ್ ಗೆಲ್ಲುವುದಕ್ಕೆ ಆಗುತ್ತಿಲ್ಲ.
ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್ಕುಮಾರ್ ಜೊತೆ ಕೆ ಎಸ್ ಈಶ್ವರಪ್ಪ ಕೂಡ ಅಖಾಡಕ್ಕೆ ಇಳಿದಿದ್ದರು. ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ, ಬಿ.ವೈ. ರಾಘವೇಂದ್ರ ಹಾಗೂ ಗೀತಾ ಶಿವರಾಜ್ಕುಮಾರ್ ನಡುವೆ ನೇರಾ ನೇರ ಹಣಾಹಣಿಯಿತ್ತು. ಈ ಪೈಪೋಟಿಯಲ್ಲಿ ಗೀತಕ್ಕ 1 ಲಕ್ಷದ 50 ಸಾವಿರಕ್ಕೂ ಹೆಚ್ಚು ಅಂತರದಿಂದ ಸೋಲು ಕಂಡಿದ್ದಾರೆ.

"ಗೀತಾ ಶಿವರಾಜ್ಕುಮಾರ್ ಚುನಾವಣೆ ವೇಳೆ ಮಾತ್ರ ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುತ್ತಾರೆ". "ಗೆದ್ದ ಬಳಿಕ ಶಿವಮೊಗ್ಗದಲ್ಲಿ ಇರುವುದಿಲ್ಲ" ಎಂದು ಆರೋಪ ಮಾಡಿದ್ದರು. ಮತ್ತೆ ಕೆಲವರು "ಗೀತಾ ಶಿವರಾಜ್ಕುಮಾರ್ಗೆ ರಾಜಕೀಯದ ಅನುಭವವಿಲ್ಲ" ಎಂದಿದ್ದರು. ಆದರೂ, ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂದು ಕೆಲವು ಇವರ ಗೆಲುವಿಗೆ ಒಲವು ತೋರಿಸಿದ್ದರು.
ಮತ್ತೊಂದು ಕಡೆ ಗೀತಾ ಶಿವರಾಜ್ಕುಮಾರ್ ಸಹೋದರ, ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಇವರ ವಿರುದ್ಧ ಪ್ರಚಾರ ಮಾಡಿದ್ದರು. "ಚುನಾವಣೆ ಬಳಿಕ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗದ ಮನೆಗೆ ಬೀಗ ಹಾಕಿಕೊಂಡು ಹೋಗುತ್ತಾರೆ", "ಡ್ಯಾನ್ಸ್ ಮಾಡ್ಲೇಬೇಕು ಅಂತಿದ್ರೆ, ಚಂದ್ರಗುತ್ತಿ ಜಾತ್ರೆಯಲ್ಲಿ ಡ್ಯಾನ್ಸ್ ಮಾಡಿ" ಅಂತೆಲ್ಲ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದರು. ಈ ಟೀಕೆಗಳಿಗೆ ಶಿವಣ್ಣ ಪ್ರಚಾರದ ವೇಳೆ ಕಿಡಿಕಾರಿದ್ದರು. ಮತದಾರರಲ್ಲಿ ಪತ್ನಿಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಏನೇ ಇದ್ದರೂ ದೊಡ್ಮನೆ ಮನೆ ಸೊಸೆ ಗೀತಕ್ಕಗೆ ಈ ಬಾರಿ ಗೆಲುವು ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಗೆಲ್ಲುವ ಅವಕಾಶ ಹೆಚ್ಚಿತ್ತು. ಹೀಗಿದ್ದರೂ, ಗೀತಕ್ಕ ಗೆಲ್ಲಲಿಲ್ಲ. ಅದ್ಯಾಕೋ ದೊಡ್ಮನೆಗೆ ರಾಜಕೀಯ ಆಗಿಬರಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾದಂತೆ ಆಗಿದೆ.


Click it and Unblock the Notifications











