Shivarajkumar: ಶಿವುನೇ ಫೈನಲ್ ಅಂತ ಕ್ರೇಜಿಸ್ಟಾರ್.. ರವಿನೇ ಸೀನಿಯರ್ ಎಂದ ಶಿವಣ್ಣ.. ಅಂತ್ಯ ಕಾಣುತ್ತಾ ವಿವಾದ?
ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ವಿವಾದ ಅಂತ್ಯ ಕಾಣೋದು ಯಾವಾಗ? ಈ ವಿವಾದವೀಗ ರವಿಚಂದ್ರನ್ ಹಾಗೂ ಶಿವಣ್ಣ ಅಂಗಳಕ್ಕೆ ಬಂದು ನಿಂತಿದೆ. ನಿರ್ಮಾಪಕರು ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಬಗೆ ಹರಿಸುವಂತೆ ಹೇಳಿಕೊಂಡಿದ್ದಾರೆ.
ನಿನ್ನೆಯಿಂದ (ಜುಲೈ 18) ಕ್ರೇಜಿಸ್ಟಾರ್ ರವಿಚಂದ್ರನ್ರನ್ನು ನಿರ್ಮಾಪಕರು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದರು. ಇಂದು (ಜುಲೈ 19) ಶಿವರಾಜ್ಕುಮಾರ್ ಅನ್ನು ಭೇಟಿ ಮಾಡಿ ಇದೇ ಮಾನವಿ ಮಾಡಿಕೊಂಡಿದ್ದಾರೆ. ಇವರಿಬ್ಬರಿಂದ ಸಮಸ್ಯೆ ಬಗೆಹರಿಯುತ್ತೆ ಅಂತ ನಿರ್ಮಾಪಕರು ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ.

ಈ ಸಮಸ್ಯೆ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಲಿ.. ಶಿವರಾಜ್ಕುಮಾರ್ ಆಗಲಿ ಒಂದು ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ. ಇಬ್ಬರೂ ಒಟ್ಟಿಗೆ ಸೇರಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಶಿವಣ್ಣನೇ ಲೀಡರ್ ಅಂತ ರವಿಚಂದ್ರನ್ ಹೇಳುತ್ತಿದ್ದರೆ, ಇತ್ತ ರವಿಚಂದ್ರನ್ ಅವರೇ ಸೀನಿಯರ್ ಅಂತ ಶಿವಣ್ಣ ಹೇಳುತ್ತಿದ್ದಾರೆ. ಇದೂವರೆಗೂ ಸೈಲೆಂಟ್ ಆಗಿಯೇ ಇದ್ದ ಶಿವಣ್ಣ ಈ ವಿವಾದಕ್ಕೀಗ ಪ್ರತಿಕ್ರಿಯೆ ನೀಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.
"ಇಬ್ಬರೂ ಪಿಲ್ಲರ್ ಇದ್ದಂತೆ"
"ಯಾವಾಗಲೂ ಇಂಡಸ್ಟ್ರಿ ಒಂದೇನೆ. ಅದರ ಬಗ್ಗೆ ಏನೂ ಸಂದೇಹವೇ ಇಲ್ಲ. ಸುದೀಪ್ ನಮಗೆ ಒಳ್ಳೆಯ ಸ್ನೇಹಿತರು. ನಮಗೆ ಬ್ರದರ್ ಅಂದರೂ ತಪ್ಪಾಗಲ್ಲ. ಫ್ಯಾಮಿಲಿ ಅಂದರೂ ತಪ್ಪಾಗಲ್ಲ. ಈಗ ಏನೇನು ಆಗಿದೆ ಅನ್ನೋದು ಅವರಿಬ್ಬರಿಗೇ ಗೊತ್ತಿರುತ್ತೆ. ಈಗಾಗಲೇ ಕೋರ್ಟ್ಗೆ ಕೂಡ ಹೋಗಿದ್ದಾರೆ. ಹಾಗಾಗಿ ನಡೆದಿರೋದು ಕುಮಾರ್ ಹಾಗೂ ಸುದೀಪ್ ಸರ್ ಅವರಿಗೆ ಮಾತ್ರ ಗೊತ್ತು. ಇಂಡಸ್ಟ್ರಿ ಅಂದ್ಮೇಲೆ ಇಬ್ಬರೂ ಎರಡು ಪಿಲ್ಲರ್ ತರ. ಆಕ್ಟರ್ಗಳೂ ಪಿಲ್ಲರ್ ತರ. ಅನ್ನದಾತರೂ ಪಿಲ್ಲರ್ ತರ. ನಿಮಗೆ ಈ ಕಣ್ಣು ಮುಖ್ಯನಾ ಆ ಕಣ್ಣು ಮುಖ್ಯನಾ ಅಂದರೆ ಕಷ್ಟ ಆಗುತ್ತೆ." ಎಂದಿದ್ದಾರೆ ಶಿವಣ್ಣ.
"ರವಿ ನನಗಿಂತ ಸೀನಿಯರ್"
"ಈಗಾಗಲೇ ರವಿ ಸರ್ ಜೊತೆ ಮಾತಾಡಿದ್ದೀನಿ. ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ. ರವಿಯವರು ನನಗಿಂತ ದೊಡ್ಡ ಸೀನಿಯರ್. ಅವರೂ ಅನ್ನದಾತರೇ. ವೀರಸ್ವಾಮಿಯವರನ್ನು ಅಪ್ಪಾಜಿ ಯಾವಾಗಲೂ ಸಾಹುಕಾರರು ಎಂದು ಕರೆಯುತ್ತಿದ್ದರು. ಇದು ಅವರ ದೊಡ್ಡತನ. ರವಿ ಸರ್ ನನಗಿಂತ ಮೂರ್ನಾಲ್ಕು ವರ್ಷ ಮುಂಚೆನೇ ಬಂದರು. ಅವರು ಬಂದು 45 ವರ್ಷ ಆಗಿದೆ." ಎಂದು ರವಿಚಂದ್ರನ್ ಅಂಗಕ್ಕೆ ಬಾಲು ಎಸೆದಿದ್ದಾರೆ.

"ರವಿ ಸರ್ ಏನು ಹೇಳುತ್ತಾರೋ ನೋಡೋಣ"
"ಒಬ್ಬ ಪ್ರಡ್ಯೂಸರ್ ಹಾಗೂ ಆಕ್ಟರ್ ನಡುವೆ ಹೀಗೆ ಆಗೋದು ಕಾಮನ್. ಅವರಿಬ್ಬರೇ ಒಂದು ನಿರ್ಧಾರಕ್ಕೆ ಬರಬೇಕು. ಇದರಲ್ಲಿ ರವಿ ಸರ್ ಏನು ಹೇಳುತ್ತಾರೋ ನೋಡೋಣ. ಅವರೊಂದಿಗೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ." ಎಂದು ನಿರ್ಮಾಪಕರಿಗೆ ಶಿವಣ್ಣ ಭರವಸೆ ನೀಡಿದ್ದಾರೆ.
"ಲೆಕ್ಕಾಚಾರದ ಬಗ್ಗೆ ನಮ್ಮ ಬಳಿ ಮಾತಾಡಬಾರದು"
"ಇಲ್ಲಿ ತಪ್ಪೇನಾಗುತ್ತೆ ಅಂದ್ರೆ, ಲೆಕ್ಕಾಚಾರದ ಬಗ್ಗೆ ನಮ್ಮ ಹತ್ತಿರ ಮಾತಾಡಬಾರದು. ಇಲ್ಲೇನು ಮ್ಯಾಟರ್ ಆಗಿದೆ ಅದರ ಬಗ್ಗೆ ಮಾತಾಡಬೇಕು. ಲೆಕ್ಕಾಚಾರವನ್ನು ಬಿಟ್ಟು ರವಿ ಸರ್ ಏನು ಹೇಳಿದ್ದಾರೋ ಅದರ ಬಗ್ಗೆ ಮಾತಾಡಿ ಬಗೆಹರಿಸುವ ಪ್ರಯತ್ನ ಮಾಡೋದು ಧರ್ಮ." ಎಂದು ವಿವಾದದ ಬಗ್ಗೆ ಮಾತಾಡಿದ್ದಾರೆ.


Click it and Unblock the Notifications











