ಪಾದರಸದಂತಿದ್ದ ಶಿವಣ್ಣ ಆರೋಗ್ಯದಲ್ಲಿ ಏನು ಸಮಸ್ಯೆ? ಸುಸ್ತಿದೆ.. ಆಪರೇಷನ್ ಆಗಬೇಕು.. ರೆಸ್ಟ್ ಬೇಕು!
ಸ್ಯಾಂಡಲ್ವುಡ್ನ ಮೋಸ್ಟ್ ಎನೆರ್ಜೆಟಿಕ್ ಆಕ್ಟರ್ ಶಿವರಾಜ್ಕುಮಾರ್. ತಮ್ಮ 63ನೇ ವಯಸ್ಸಿನಲ್ಲೂ ಚಿರಯುವಕನಂತೆ ಆಕ್ಟಿವ್ ಆಗಿದ್ದಾರೆ. ಇಂದಿನ ಯುವ ಸ್ಟಾರ್ ನಟರ ಕೈಯಲ್ಲಿ ಇರದಷ್ಟು ಸಿನಿಮಾಗಳು ಇವರ ಕೈಯಲ್ಲಿ ಇದೆ. ಆದರೆ, ಇತ್ತೀಚೆಗೆ ಶಿವಣ್ಣ ತನಗೆ ಕಳೆದ ನಾಲ್ಕು ತಿಂಗಳಿನಿಂದ ಹುಷಾರಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಸಹಜವಾಗಿ ಅವರ ಅಭಿಮಾನಿಗಳಲ್ಲಿ ಆತಂಕವನ್ನು ಹುಟ್ಟಿಸಿದೆ.
ಪಾದರಸದಂತೆ ಓಡಾಡುತ್ತಿದ್ದ ಶಿವಣ್ಣ ದಿಢೀರನೇ ಕೊಂಚ ಡಲ್ ಆಗಿದ್ದರು. ಆದರೂ ಯಾರಿಗೂ ಅದು ಕಣ್ಣಿಗೆ ಬಿದ್ದಿರಲಿಲ್ಲ. ಈಗ ಶಿವರಾಜ್ಕುಮಾರ್ ತಾವೇ ಸ್ವತ: ತನಗೆ ಅನಾರೋಗ್ಯ ಅನ್ನೋದನ್ನು ಹೇಳಿಕೊಂಡಿದ್ದಾರೆ. ಹಾಗಿದ್ದರೆ, ಶಿವಣ್ಣನ ಆರೋಗ್ಯದಲ್ಲಿ ಇರುವ ಸಮಸ್ಯೆ ಏನು?ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಆಗಬೇಕು? ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆಯೇ? ಈ ಪ್ರಶ್ನೆಗಳಿಗೆ ಶಿವಣ್ಣ 'ಕುಡ್ಲದಕ್ಲು' (KUDLADAKLU) ಅನ್ನೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಶಿವರಾಜ್ಕುಮಾರ್ ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿಲ್ಲ. ಇನ್ನೂ ಆ ಜೋಷ್ ಹಾಗೇ ಇದೆ. ಶಿವಣ್ಣ ಜೊತೆಗೆ ಇರುವವರು ಕೂಡ ಅವರನ್ನು ಕುಗ್ಗುವುದಕ್ಕೆ ಬಿಟ್ಟಿಲ್ಲ. ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಎಂದಿನಂತೆ ಆಕ್ಟಿವ್ ಆಗಿ ಇರುವುದಕ್ಕೆ ಸಹಾಯ ಮಾಡುತ್ತಿದ್ದಾರೆ. ಹಾಗಿದ್ದರೆ, ಸಂದರ್ಶನದಲ್ಲಿ ಶಿವಣ್ಣ ಹಂಚಿಕೊಂಡ ಮಾಹಿತಿ ಏನು? ತಿಳಿಯಲು ಮುಂದೆ ಓದಿ.
ಫ್ಲೋರಿಡಾದಲ್ಲಿ ಚಿಕಿತ್ಸೆ?
ಶಿವಣ್ಣ ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಹಂತದ ಚಿಕಿತ್ಸೆ ಮುಗಿದಿದ್ದು, ಇನ್ನೂ ಎರಡು ಹಂತ ಬಾಕಿಯಿದೆ ಆ ಬಳಿಕ ಆಪರೇಷನ್ ಆಗಲಿದೆ. "ನನಗೆ ಹುಷಾರಿಲ್ಲ. ಈಗ ಒಂದು ಟ್ರೀಟ್ಮೆಂಟ್ ನಡೆಯುತ್ತಿದೆ. ಅದೊಂದು ನಾಲ್ಕು ಟೈಪ್ ಇದೆ. ಆದಾದ್ಮೇಲೆ ಒಂದು ಆಪರೇಷನ್ ಇದೆ. ಅದಾದ್ಮೇಲೆ ಒಂದು ತಿಂಗಳು ರೆಸ್ಟ್ ಮಾಡಬೇಕಿದೆ ಅಷ್ಟೇನೇ.. ಜನವರಿ 20ರ ಒಳಗೆ ಎಲ್ಲರೂ ಸರಿ ಹೋಗುತ್ತೆ. ಎರಡು ಆಯ್ಕೆ ಇದೆ. ಒಂದು ಆ ಆಪರೇಷನ್ ಅನ್ನು ಇಲ್ಲೇ ಮಾಡುತ್ತಾರೆ. ಇಲ್ಲಾ ಅಂದರೆ ಫ್ಲೋರಿಡಾ ಇರಬಹುದು. ಎರಡರಲ್ಲಿ ಯಾವುದಾದರೂ ಒಂದು ಕಡೆ ಆಗುತ್ತೆ." ಎಂದು ಶಿವಣ್ಣ ಕುಡ್ಲದಕ್ಲು ಯೂಟ್ಯೂಬ್ ಚಾನೆಲ್ಗೆ ಮಾಹಿತಿ ನೀಡಿದ್ದಾರೆ.

'ನನಗೆ ಸುಸ್ತಾಗುತ್ತಿದೆ"
"ಈ ಸಮಯವೇ ಶೂಟಿಂಗ್ನಿಂದ ಸ್ವಲ್ಪ ದೂರ ಆಗುದ್ದೇನೆ. ಈಗ ನನ್ನದು ಎರಡು ಹಂತದ ಚಿಕಿತ್ಸೆ ಮುಗಿದಿದೆ. ನವೆಂಬರ್ನಲ್ಲಿ ನನ್ನ ಪಿಕ್ಚರ್ ಬೇರೆ ರಿಲೀಸ್ ಇದೆ. ಅದಕ್ಕೆ ಪ್ರಮೋಷನ್ ಕೂಡ ಮಾಡುತ್ತಿದ್ದೇನೆ. ಡಿಕೆಡಿ ಕೂಡ ಮಾಡುತ್ತಿದ್ದೇನೆ. ವೈದ್ಯರು ಸುಸ್ತಾಗುತ್ತೆ ಎಂದು ಹೇಳಿದ್ದಾರೆ. ಎಲ್ಲಿವರೆಗೂ ಆಗುತ್ತೋ ಅಲ್ಲಿವರೆಗೂ ವರ್ಕ್ ಮಾಡುತ್ತಿದ್ದೇನೆ. ಆ ದೇವರು ಶಕ್ತಿ ಕೊಡುತ್ತಿದ್ದಾನೆ. ನನಗೆ ಗೊತ್ತಿಲ್ಲ ಹೇಗೆ ವರ್ಕ್ ಮಾಡುತ್ತಿದ್ದೇನೆ ಅಂತ" ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
"ನನ್ನ ಬೆಂಬಲಕ್ಕೆ ನಿಂತಿದ್ದಾರೆ"
"ನನಗೆ ಸುಸ್ತಾಗುತ್ತಿರೋದು ನಿಜ. ಆದರೆ, ನನ್ನ ಸರ್ಕಲ್ ಯಾರೂ ನನಗೆ ಸುಸ್ತಾಗುವುದಕ್ಕೆ ಬಿಡುತ್ತಿಲ್ಲ. ನನ್ನ ಫ್ಯಾಮಿಲಿ ಸಪೋರ್ಟ್ ಇದೆ. ಗೀತಾ ಸಪೋರ್ಟ್ ಇರಬಹುದು, ಮಕ್ಕಳ ಸಪೋರ್ಟ್ ಇರಬಹುದು, ಎಲ್ಲಾ ಚಿತ್ರರಂಗದ ಸಪೋರ್ಟ್, ಬೇರೆ ಆರ್ಟಿಸ್ಟ್ಗಳು ಸುದೀಪ್ ಆಗಲಿ, ಯಶ್ ಅವರಾಗಲಿ, ದುನಿಯಾ ವಿಜಯ್, ಡಾಲಿ ಧನಂಜಯ್ ಎಲ್ಲರೂ ಸ್ಟ್ರಾಂಗ್ ಬಾಂಡೇಜ್ ಕೊಡುತ್ತಿದ್ದಾರೆ." ಎಂದು ಹೇಳಿದ್ದಾರೆ.
"ಚಿಕಿತ್ಸೆ ನಡೆಯುತ್ತಿದೆ.. ಸಮಸ್ಯೆ ಇಲ್ಲ"
"ಮಾಧ್ಯಮದವರಿಗೆ ಗೊತ್ತಿದ್ದರೂ ಈ ವಿಷಯವನ್ನು ಹಾಕಿಲ್ಲ. ನಾನೇ ಯಾಕೆ ಬಂದು ಹೇಳಿದೆ ಅಂದರೆ, ಎಲ್ಲ ವಿಷಯವನ್ನು ಹೇಳುತ್ತೇವೆ. ಈ ವಿಷಯವನ್ನು ಬಚ್ಚಿಡುವ ಅಗತ್ಯವೇನೂ ಇಲ್ಲ. ಆಮೇಲೆ ಜನರಿಗೆ ಸಡನ್ ಆಗಿ ಗೊತ್ತಾಗಿ ಅವರು ಗಾಬರಿ ಆಗಬಾರದು. ಅದಕ್ಕೆ ಚಿಕಿತ್ಸೆ ನಡೆಯುತ್ತಿದೆ. ಏನೂ ಸಮಸ್ಯೆಯಿಲ್ಲ. ಅದನ್ನು ಫೇಸ್ ಮಾಡುತ್ತಿದ್ದೇನೆ. ಚೆನ್ನಾಗಿ ಆಗುತ್ತಿದೆ. ಈಗ ಎರಡು ಟ್ರೀಟ್ಮೆಂಟ್ ಆಗಿದೆ. ಇನ್ನೆರಡು 27ನೇ ತಾರೀಕಿನ ಒಳಗೆ ಮುಗಿಯುತ್ತೆ. ಅದಾದ ಎರಡು ವಾರಗಳ ಬಳಿಕ ಸರ್ಜರಿ ಇದೆ. ಅದು ಮುಗಿದರೆ ಟ್ರೀಟ್ಮೆಂಟ್ ಮುಗಿದ ಹಾಗೆ." ಎಂದು ಶಿವಣ್ಣ ಮಾಹಿತಿ ನೀಡಿದ್ದಾರೆ.
"ಸೆಲೆಬ್ರಿಟಿಗೆ ಆದಾಗ ಹಾಗನಿಸುತ್ತೆ"
"ಅನಾರೋಗ್ಯ ಅನ್ನೋದು ಮನುಷ್ಯನೇ ಆಗುವುದು ಅಲ್ವಾ? ಬೇರೆವರಿಗೆ ಆದರೆ ಏನು ಅನಿಸುವುದಿಲ್ಲ. ಸೆಲೆಬ್ರಿಟಿಗೆ ಆದಾಗ ಹಾಗನಿಸುತ್ತೆ. ಇಂತಹ ಸಮಯದಲ್ಲಿ ಎಲ್ಲರಿಗೂ ಸಪೋರ್ಟ್ ಇರುತ್ತೆ. ನಮಗೂ ಇದೆ. ಅದರೊಂದಿಗ ಮುಂದಕ್ಕೆ ಹೋಗುತ್ತಿದ್ದೇವೆ ಅಷ್ಟೇ." ಎಂದು ಶಿವರಾಜ್ಕುಮಾರ್ ಕುಡ್ಲದಕ್ಲು ಯೂಟ್ಯುಬ್ ಚಾನೆಲ್ಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











