"ಅವರ ಮಕ್ಕಳು, ಇವರ ಮಕ್ಕಳೇ ಕನಸು ಕಾಣಬೇಕು ಅಂತಿಲ್ಲ"; ಕಿಚ್ಚನ ಮುಂದೇನೆ 'ನೆಪೋಟಿಸಂ' ಗೆ ಶಿವಣ್ಣ ತಿರುಗೇಟು
ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸರೋವರ್ 'ಮ್ಯಾಂಗೋ ಪಚ್ಚ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಸಿನಿಮಾ ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿದಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಕಿಚ್ಚ ಸುದೀಪ್ಗೆ ನೆಪೋಟಿಸಂ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಕಿಚ್ಚ ಅಣ್ಣಾವ್ರ ಮಕ್ಕಳನ್ನು ಉದಾಹರಣೆ ಕೊಟ್ಟಿದ್ದರು. ಅಲ್ಲಿಂದ ಒಂದು ಚರ್ಚೆಯಂತೂ ಶುರುವಾಗಿತ್ತು.
'ಮ್ಯಾಂಗೋ ಪಚ್ಚ' ಬಿಡುಗಡೆಗೂ ಮುನ್ನ ಕಿಚ್ಚ ಸುದೀಪ್ಗೆ ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಸುದೀಪ್ "ನೆಪೋಟಿಸಂ ಬಗ್ಗೆ ಡಾ.ರಾಜ್ ಕುಮಾರ್ ಅವರ ಮಕ್ಕಳನ್ನು ಯಾಕೆ ಕೇಳಿಲ್ಲ? ಅವರ ಮಕ್ಕಳಾದ ಶಿವಣ್ಣನಿಗೆ ಈ ಪ್ರಶ್ನೆ ಕೇಳಿದ್ರಾ? ಯಾರಿಗೆ ಸಿನಿಮಾಗೆ ಬರುವ ಯೋಗ್ಯತೆ ಇದೆಯೋ ಅಂತಹವ್ರಿಗೆ ಇಲ್ಲಿ ಕೆಲಸ ಸಿಗುತ್ತದೆ. ಎಲ್ಲಿದ್ದನ್ನೋ ಇಲ್ಲಿಗೆ ತರಬೇಡಿ" ಎಂದು ಹೇಳಿದ್ದರು.

ಇದರ ಜೊತೆಗೆ ಸುದೀಪ್ ತಮ್ಮ ಹೇಳಿಕೆಗೆ ಕ್ಲಾರಿಟಿಯನ್ನು ನೀಡಿದ್ದರು. "ಡಾ.ರಾಜ್ ಕುಮಾರ್ ಅವರ ಎಲ್ಲಾ ಮಕ್ಕಳಿಗೂ ಆ ಅರ್ಹತೆ ಇತ್ತು. ಹಾಗಾಗಿ ಅವರೆಲ್ಲರೂ ಚಿತ್ರರಂಗಕ್ಕೆ ಬಂದ್ರು. ನಾವು ಆರಂಭದಿಂದ ಶಿವಣ್ಣನನ್ನು ನೋಡಿಕೊಂಡು ಬೆಳೆದವರು. ಪುನೀತ್ ರಾಜ್ ಕುಮಾರ್ ಅದೆಷ್ಟೋ ಮಂದಿಗೆ ಸ್ಫೂರ್ತಿ" ಎಂದು ಸುದೀಪ್ ಹೇಳಿದ್ದರು. ಆದರೆ, ನೆಪೋಟಿಸಂ ಬಗ್ಗೆ ಆಡಿದ ಮಾತು ವೈರಲ್ ಆಗಿ, ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಅದಕ್ಕೀಗ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಹೊಸಬರು ಬರಬೇಕು
'ಮ್ಯಾಂಗೋ ಪಚ್ಚ' ಸಿನಿಮಾ ನೋಡಿದ ಬಳಿಕ ನೆಪೋಟಿಸಂ ಬಗ್ಗೆ ಕಿಚ್ಚ ಸುದೀಪ್ 'ನೆಪೋಟಿಸಂ' ಬಗ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದೇನೆ. ಇಂಡಸ್ಟ್ರಿಗೆ ಹೊಸಬರು ಬರಲಿ. ಬರೀ ನಮ್ಮ ಸಿನಿಮಾಗಳನ್ನಷ್ಟೇ ನೋಡುವುದಲ್ಲ. ಹೊಸಬರ ಸಿನಿಮಾಗಳನ್ನು ನೋಡಬೇಕು. ಅವರು ಬರಬೇಕು. ನಾವು ಎಷ್ಟು ವರ್ಷ ಸಿನಿಮಾಗಳನ್ನು ಮಾಡುತ್ತೇವೆ. ಮುಂದೆ ನಮ್ಮ ಭಾಷೆಯನ್ನು ತೆಗೆದುಕೊಂಡು ಹೋಗುವುದು ಯುವಕರು. ಬೇರೆ ಭಾಷೆಯಲ್ಲಿ ಎಷ್ಟು ಚೆನ್ನಾಗಿ ಪ್ರೋತ್ಸಾಹ ನೀಡುತ್ತಾರೆ. ಇಂತಹ ಸಿನಿಮಾಗಳನ್ನು ನೋಡಬೇಕು. ಒಬ್ಬ ಡೈರೆಕ್ಟರ್ ಹುಟ್ಟಿಕೊಳ್ಳುತ್ತಾರೆ. ಒಬ್ಬ ಕ್ಯಾಮರಾಮ್ಯಾನ್ ಹುಟ್ಟಿಕೊಳ್ಳುತ್ತಾರೆ. ಒಬ್ಬ ಹೀರೋ ಬಂದ್ಮೇಲೆ ಅವರಿಂದ ಎಷ್ಟು ಸಿನಿಮಾಗಳು ಆಗಬಹುದು. ಹಾಗಾಗಿ ಇಂತಹ ಸಿನಿಮಾಗಳನ್ನು ನೋಡುವುದಕ್ಕೆ ಬರಬೇಕು" ಎಂದು ಹೇಳಿದ್ದಾರೆ.
ಎಲ್ಲರೂ ಕನಸು ಕಾಣುತ್ತಾರೆ
ಎಲ್ಲರಿಗೂ ತಾನು ಜೀವನದಲ್ಲಿ ಏನಾದರೂ ಪ್ರೂವ್ ಮಾಡಬೇಕು ಅನ್ನೋ ಹಂಬಲವಿರುತ್ತೆ. ಹೀಗಾಗಿ ಎಲ್ಲರಿಗೂ ಕನಸು ಕಾಣುವ ಅಧಿಕಾರವಿದೆ ಎಂದು ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. "ನೆಪೊಟಿಸಂ ಬಗ್ಗೆ ಪ್ರಶ್ನೆ ಕೇಳಿದ್ದನ್ನು ನಾನು ನೋಡಿದೆ. ನೀವು ಯಾಕೆ ಆ ಪ್ರಶ್ನೆಯನ್ನು ಕೇಳಿದ್ರಿ. ಈ ಪ್ರಶ್ನೆ ಕೇಳುವ ಅಗತ್ಯವಿರಲಿಲ್ಲ. ಎಲ್ಲಾ ಮನುಷ್ಯನೂ ಕನಸು ಕಾಣುತ್ತಾನೆ. ಅವರ ಮಕ್ಕಳು, ಇವರ ಮಕ್ಕಳು ಕನಸು ಕಾಣಬೇಕು ಅಂತಿಲ್ಲ. ಎಲ್ಲರ ಮಕ್ಕಳು ಕನಸು ಕಾಣಬಹುದು. ಅದನ್ನೆಲ್ಲ ನಾನು ಕೇರ್ ಮಾಡುವುದಕ್ಕೆ ಹೋಗುವುದಿಲ್ಲ. ಎಲ್ಲ ಮನುಷ್ಯನಿಗೂ ಒಂದು ಅಧಿಕಾರವಿದೆ. ನಾನು ಪ್ರೂವ್ ಮಾಡಬೇಕು ಅನ್ನೋದು ಎಲ್ಲಾ ಮನುಷ್ಯರ ಆಸೆ ಅದು. ಅದನ್ನೆಲ್ಲ ಸ್ವಾಗತ ಮಾಡಬೇಕು" ಎಂದು ಹೇಳಿದ್ದಾರೆ.

ಹೊಸಬರ ಸಿನಿಮಾಗಳನ್ನು ನೋಡ್ಬೇಕು
ಇದೇ ವೇಳೆ ಹೊಸಬರ ಸಿನಿಮಾಗಳನ್ನು ನೋಡುವಂತೆ ಶಿವಣ್ಣ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. "ಸುದೀಪ್ ಅವರನ್ನು ಮುಂದಿಟ್ಟುಕೊಂಡೇ ಈ ಮಾತನ್ನು ಯಾಕೆ ಹೇಳಿದೆ ಅಂದರೆ, ನಮ್ಮ ಸಿನಿಮಾಗಳನ್ನು ನೋಡುತ್ತೀರ. ಹೊಸಬರ ಸಿನಿಮಾಗಳನ್ನು ನೋಡಬೇಕು ಅಂತ ಯಾಕೆ ಹೇಳಿದೆ ಅಂದರೆ, ನಮ್ಮ ಭಾಷೆ ಬೆಳೆಯಬೇಕು. ನಮ್ಮ ಹೀರೋಗಳು ಗಟ್ಟಿಯಾಗಿ ನಿಂತುಕೊಳ್ಳಬೇಕು. ಅದೇ ನಮಗೆ ಬೇಕಾಗಿರೋದು. ನಮ್ಮ ಭಾಷೆ ಉದ್ದಾರ ಆಗಬೇಕು ಅಂದರೆ, ಬೆಂಬಲ ಬೇಕೇ ಬೇಕು" ಎಂದು ಹೇಳಿದ್ದಾರೆ.
ಸಂಚಿತ್ಗೆ ಸಿನಿಮಾ ಒಲವಿತ್ತು
ನೆಪೋಟಿಸಂ ಬಗ್ಗೆ ಕಿಚ್ಚ ಸುದೀಪ್ ಈ ಹಿಂದೆನೇ ಕ್ಲಾರಿಟಿ ಕೊಡುವುದಕ್ಕೆ ಪ್ರಯತ್ನ ಪಟ್ಟಿದ್ದರು. "ನನ್ನ ಫ್ಯಾಮಿಲಿಯಲ್ಲಿ ಇನ್ನೂ ಸಾಕಷ್ಟು ಸದಸ್ಯರು ಇದ್ದರು. ಅವರು ಯಾರಿಗೂ ಚಿತ್ರರಂಗಕ್ಕೆ ಬರಲಿಲ್ಲ. ಸಂಚಿತ್ಗೆ ಸಿನಿಮಾ ಬಗ್ಗೆ ಒಲವಿತ್ತು. ಹಾಗಾಗಿ ಚಿತ್ರರಂಗಕ್ಕೆ ಬಂದಿದ್ದಾನೆ. ಅರ್ಹತೆ ಇದ್ದವರು ಯಾರು ಬೇಕಾದರೂ ಸಿನಿಮಾಗೆ ಬರಬಹುದು" ಕಿಚ್ಚ ಸುದೀಪ್ ಹೇಳಿದ್ದರು.


Click it and Unblock the Notifications