"ನನಗೆ ಭರವಸೆ ಇದೆ ನಾನು ಗೆಲ್ತೀನಿ" ಎಂದು ಗೀತಕ್ಕ: "100% ಸಪೋರ್ಟ್ ಇದ್ದೇ ಇರುತ್ತೆ" ಎಂದ ಶಿವಣ್ಣ
ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ಹೆಚ್ಚಾಗುತ್ತಲೇ ಇದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಕೆಲವು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಅದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಪವರ್ಫುಲ್ ಕ್ಷೇತ್ರದಿಂದ ಕಣಕ್ಕಿಳಿದು ಗೆಲ್ಲಲೇ ಬೇಕು ಅಂತ ನಿರ್ಧರಿಸಿದ್ದಾರೆ.
ಗೀತಾ ಶಿವರಾಜ್ಕುಮಾರ್ ಅವರಿಗೆ ಪಾಲಿಟಿಕ್ಸ್ ಹೊಸದೇನು ಅಲ್ಲ. ತಂದೆ ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಸಹೋದರರಾದ ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧೆ ಮಾಡುವ ಮೂಲಕ ಗೀತಾ ಶಿವರಾಜ್ಕುಮಾರ್ ಕೂಡ ಚುನಾವಣಾ ಅಖಾಡಕ್ಕೆ ಇಳಿದಿದ್ದರು.

ಈಗ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ನಿ ಗೀತಾ ಶಿವರಾಜ್ಕುಮಾರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಏನು ಹೇಳಿದ್ದಾರೆ ತಿಳಿಯಲು ಮುಂದೆ ಓದಿ.
ಪತ್ನಿ ಗೀತಾ ಶಿವರಾಜ್ಕುಮಾರ್ ಪರ ಚುನಾವಣಾ ಪ್ರಚಾರಕ್ಕೆ ಹೋಗುತ್ತೀರ ಎಂಬ ಪ್ರಶ್ನೆಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಅವರು ಏನು ಪ್ಲಾನ್ ಹೇಳುತ್ತಾರೋ ಅದನ್ನು ಮಾಡುತ್ತೇವೆ. ನನ್ನ ಶೂಟಿಂಗ್ ಅವರೇ ನೋಡುತ್ತಿದ್ದಾರೆ. ನಾನು ಏನೇ ಶೂಟಿಂಗ್ ಮಾಡಿದರೂ, ಅವರಿಗೆ ಹೇಳಿಯೇ ಮಾಡಬೇಕು. ಯಾಕಂದ್ರೆ, ಒಂದು ಹೊಂದಾಣಿಕೆ ಇರುತ್ತೆ. ಇಲ್ಲಾ ಅಂದರೆ, ಅದು ನೋಡುವುದಕ್ಕೆ ಚೆನ್ನಾಗಿರಲ್ಲ. ನಾನು ಏನೇ ಮಾಡಿದರೂ, ಗೊತ್ತಾಗಬೇಕು. ನಾನು ಈತರ ಮಾಡುತ್ತಿದ್ದೇನೆ ಅಂತ. ಈಗ ಅವರು ಮಾಡುವಾಗಲೂ ಅದೇ ರೀತಿ ಕ್ಲಾರಿಟಿ ಇರುತ್ತೆ." ಎಂದಿದ್ದಾರೆ.

ಸಿನಿಮಾ ಹಾಗೂ ಪ್ರಚಾರ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. "ಅವರಿಗೆ ಗೊತ್ತಿದೆ. ಶೂಟಿಂಗ್ ನಡೆಯುತ್ತಿರುವಾಗ ಪಾಲಿಟಿಕ್ಸ್ ಎಷ್ಟು ಮುಖ್ಯವೋ. ಅವರ ಗಂಡನ ಪ್ರೊಫೆಷನ್ ಕೂಡ ಅಷ್ಟೇ ಮುಖ್ಯ ಅಂತ ಗೊತ್ತು. ಎರಡಕ್ಕೂ ಪ್ರಾಮುಖ್ಯತೆ ಕೊಡಬೇಕು. ಅವರ ಪ್ರಕಾರ ನಾವು ಪ್ಲಾನ್ ಮಾಡುತ್ತೇವೆ. 100% ಸಪೋರ್ಟ್ ಇದ್ದೇ ಇದೆ ಅದರ ಬಗ್ಗೆ ಮಾತಾಡೋ ಹಾಗೇ ಇಲ್ಲ." ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಗೀತಾ ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತಂತ್ರವೇನು ಮಾಡುತ್ತಿಲ್ಲ ಅಪ್ಪ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದಿದ್ದಾರೆ. "ನಮ್ಮ ತಂದೆಯವರು ಮೊದಲು ಎಂಎಲ್ಎ ಆಗಿದ್ದು ನನಗೆ ಎರಡು ವರ್ಷ ಇದ್ದಾಗ. ನನಗೆ ನೆನಪು ಇದ್ದಾಗಿನಿಂದ ಅವರು ಸೋಶಿಯಲ್ ವರ್ಕ್ ಮಾಡಿಕೊಂಡೇ ಬಂದಿದ್ದಾರೆ. ಇಲ್ಲಿ ಟ್ರಿಕ್ ಅಂತೇನೂ ಇಲ್ಲ. ಅವರು ಏನೇ ಮಾಡಿದರೂ, ಹಾರ್ಟ್ನಿಂದ ಮಾಡುತ್ತಿದ್ದರು. ಜನ ಬಳಕೆ ಜಾಸ್ತಿ. ಎಲ್ಲೋ ಒಬ್ಬರು ಉಳುಮೆ ಮಾಡುತ್ತಿದ್ದರೆ, ಒಬ್ಬರೇ ಇದ್ದರೂ ಅವರನ್ನು ಕರೆದು ಮಾತಾಡಿಸಿ ಮುಂದಕ್ಕೆ ಹೋಗುತ್ತಿದ್ದರು. ಅವರ ಸಿಂಪ್ಲಿಸಿಟಿನೇ ಮನೆಯಲ್ಲಿ ಎಲ್ಲರಿಗೂ ಬಂದಿದೆ." ಎಂದು ಗೀತಾ ಶಿವರಾಜ್ಕುಮಾರ್ ಹೇಳಿದ್ದಾರೆ.
ಈ ಹಿಂದೆ ಚುನಾವಣಗೆ ನಿಂತಿದ್ದನ್ನು ನೆನೆಪಿಸಿಕೊಂಡಿದ್ದು, ಸಹೋದರ ಮಧು ಬಂಗಾರಪ್ಪ ಸಹಾಯಕ್ಕೆ ನಿಂತಿದ್ದನ್ನು ನೆನಪಿಸಿಕೊಂಡಿದ್ದಾರೆ. "ತಯಾರಿ ಅಂತೇನು ಇಲ್ಲ. 9 ವರ್ಷದ ಹಿಂದೆ ನಾನು ಎಲೆಕ್ಷನ್ಗೆ ನಿಂತಿದ್ದೆ. ಅದು ಬೇರೆ ಪಕ್ಷ ಆಗಿತ್ತು ಬೇರೆ ಟೈಮ್ ಇತ್ತು. ನಾನು ಶಿವಮೊಗ್ಗಕ್ಕೆ ಹೋಗ್ತಾನೇ ಇದ್ದೀನಿ. ಮಧು ಎಲೆಕ್ಷನ್ಗೆ ಹೋಗಿದ್ದೀನಿ. ನಾನು ಆಗಾಗ ಹೋಗುತ್ತಲೇ ಇರುತ್ತೇನೆ. ನನಗೆ ಯಾರೂ ಹೊಸಬರು ಅಂತೇನೂ ಇಲ್ಲ. ಗೊತ್ತಿರೋ ಜನರೇ. ಏನೂ ಸಮಸ್ಯೆಯಿಲ್ಲ. ನನಗೆ ಭರವಸೆಯಿದೆ. ನಾನು ಗೆಲ್ಲುತ್ತೀನಿ ಅಂತ ಅನಿಸುತ್ತೆ. ಯಾಕಂದ್ರೆ, ಅಲ್ಲಿ ನಮ್ಮ ಪಕ್ಷದ ಕೆಲಸಗಳು ತುಂಬಾನೇ ಚೆನ್ನಾಗಿ ಆಗಿದೆ. ಮಧುನೂ ಹಾಗೇ ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ. " ಎಂದಿದ್ದಾರೆ.


Click it and Unblock the Notifications











