'ನಾನು ಅಪ್ಪುಗೆ ಕೊಡುವ ಗೌರವ ಯಾರಿದಂಲೂ ಕೊಡಲು ಸಾಧ್ಯವೇ ಇಲ್ಲ'-ಶಿವಣ್ಣ
ಶಿವರಾಜ್ಕುಮಾರ್ ಸಿನಿಮಾ 'ಬೈರಾಗಿ' ರಾಜ್ಯಾದ್ಯಂತ ರಿಲೀಸ್ ಆಗಿದೆ. ಶಿವಣ್ಣನನ್ನು ವಿಭಿನ್ನ ಅವತಾರಗಳಲ್ಲಿ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಇದೇ ವೇಳೆ ಶಿವಣ್ಣ ಕೂಡ ಥಿಯೇಟರ್ಗಳಿಗೆ ವಿಸಿಟ್ ಹಾಕುತ್ತಿದ್ದಾರೆ. ಮಂಡ್ಯ, ಮೈಸೂರುಮ ಕೊಳ್ಳೆಗಾಲದ ಭಾಗಗಳಿಗೆ ಭೇಟಿ ನೋಡುತ್ತಿದ್ದಾರೆ.
ಕೊಳ್ಳೆಗಾಲದ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿಮಾನಿಗಳ ಮುಂದೆ ಭಾವುಕರಾಗಿದ್ದಾರೆ. ತಮ್ಮ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಎಮೋಷನಲ್ ಆಗಿದ್ದಾರೆ.
ಪುನೀತ್ ರಾಜ್ಕುಮಾರ್ ಅಗಲಿಕೆ ಬಳಿಕ ರಿಲೀಸ್ ಆಗುತ್ತಿರುವ ಶಿವಣ್ಣನ ಮೊದಲ ಸಿನಿಮಾವಿದು. ಎಂಟು ತಿಂಗಳ ಬಳಿಕ ಶಿವರಾಜ್ಕುಮಾರ್ ಅಭಿನಯದ ಸಿನಿಮಾ ಬಿಡುಗಡೆಯಾಗಿದೆ. ಈ ವೇಳೆ ಖುಷಿಯಲ್ಲಿದ್ದರೂ ಶಿವಣ್ಣ ಸಹೋದರನನ್ನು ನೆನೆದು ಅಭಿಮಾನಿಗಳ ಮುಂದೆ ಭಾವುಕರಾಗಿ ಮಾತಾಡಿದ್ದಾರೆ. ಕೊಳ್ಳೆಗಾಲದಲ್ಲಿ ಶಿವಣ್ಣ ಆಡಿದ ಮಾತುಗಳ ಸಾರಾಂಶ ಹೀಗಿದೆ.

ಅಪ್ಪುನ ಮನಸ್ಸಲ್ಲಿಇಟ್ಟುಕೊಳ್ಳಿ
" ಒಂದು ಮಾತು ಹೇಳುತ್ತೇನೆ ಯಾರು ಬೇಜಾರು ಮಾಡಿಕೊಳ್ಳಬಾರದು. ಅಪ್ಪು ನಿಮಗೆ ಮಾತ್ರ ಅಲ್ಲ ಪ್ರತಿಯೊಬ್ಬರ ಮನಸ್ಸಿನಲ್ಲಿಇದ್ದಾನೆ. ಅಪ್ಪು ಅಂತ ಹೇಳಿ ದೂರ ತಳ್ಳಬೇಡಿ. ಅಪ್ಪುನ ಮನಸ್ಸಲ್ಲಿಇಟ್ಟುಕೊಳ್ಳಿ. ಅಲ್ಲಿ ತೋರಿಸಿ ನೀವು. ಅದು ಅವನಿಗೆ ಕೊಡುವ ಮರ್ಯಾದೆ. ಸುಮ್ಮನೆ ಮಾತಾಡುವುದಲ್ಲ." ಎಂದು ಅಭಿಮಾನಿಗಳಿಗೆ ಡಾ.ಶಿವರಾಜ್ಕುಮಾರ್ ಹೇಳಿದ್ದಾರೆ.

ನನ್ನ ತಮ್ಮನ ಬಗ್ಗೆ ಬಿಟ್ಟು ಯಾರ ಬಗ್ಗೆನೂ ಮಾತಾಡಲ್ಲ
" ಅವನು ಹುಟ್ಟುವಾಗ ನನಗೆ 13 ವರ್ಷ. ಅವನನ್ನು ಮಗು ತರ ನೋಡಿಕೊಂಡಿದ್ದೀವಿ ಗೊತ್ತಾ? ಅವನನ್ನು ಕೊಂಡಾಡಿದ್ದೀವಿ. ಅವನ ಯಶಸ್ಸನ್ನು ಕೊಂಡಾಡಿದ್ದೇವೆ. ಇವಾಗಲ್ಲ ಅವಾಗಿಂದ. ನಾನು ಹೀರೊ ಆದಗಿನಿಂದ ಅವನು ಹೀರೊ ಆದಾಗಿನಿಂದ ಅಪ್ಪುಗೆ ಕೊಡುವ ಗೌರವ ಯಾರಿದಂಲೂ ಕೊಡಲು ಸಾಧ್ಯವೇ ಇಲ್ಲ. ಪ್ರತಿಯೊಂದು ಇಂಟರ್ವ್ಯೂನಲ್ಲಿ ನೋಡಿ ನನ್ನ ತಮ್ಮನ ಬಗ್ಗೆ ಬಿಟ್ಟು ಬೇರೆ ಯಾರ ಬಗ್ಗೆನೂ ಮಾತಾಡಲ್ಲ ನಾನು." ಎಂದು ಅಭಿಮಾನಿಗಳ ಮುಂದೆ ಶಿವಣ್ಣ ಭಾವುಕರಾಗಿ ನುಡಿದಿದ್ದಾರೆ.

ನಮಗೂ ನೋವಿದೆ
"ನನ್ನ ತಮ್ಮ ಅಂದರೆ ರಕ್ತ ಕಣೋ. ನನ್ನ ಜೀವ. ನೋವಾಗುತ್ತೆ. ಯಾರಿಗೂ ನೋವಿಲ್ಲ ಅಂತಲ್ಲ. ನಮಗೂ ನೋವಿದೆ. ಎಲ್ಲರಿಗೂ ನೋವಿದೆ. ಆ ನೋವನ್ನು ನುಂಗಿಕೊಂಡು ನಾವು ಬದುಕಿ, ಅವನನ್ನೂ ಬದುಕಿಸಬೇಕು. ನಾವು ಬದುಕಿಸಿ ಅವನನ್ನು ಕರೆದುಕೊಂಡು ಹೋಗಬೇಕು. ಅವನನ್ನು ಇನ್ನೂ ಜಾಸ್ತಿ ಪ್ರೀತಿಸಬೇಕು. " ಎಂದು ಅಭಿಮಾನಿಗಳಿಗೆ ಬುದ್ಧಿ ಮಾತುಗಳನ್ನು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹೇಳಿದ್ದಾರೆ.

ತಂದೆ-ತಾತನ ನೆನೆದ ಶಿವಣ್ಣ
"ನಮಗೆ ಚಾಮರಾಜನಗರ, ಕೊಳ್ಳೆಗಾಲ ಎಲ್ಲಾ ಕಡೆ ಓಡಾಡಿ ಸ್ವಲ್ಪ ಅಭ್ಯಾಸ. ಎಲ್ಲಾ ಗೊತ್ತಿರುವ ಜಾಗಗಳೇ. ಕೊಳ್ಳೆಗಾಲ ನಮಗೇನು ಹೊಸತಲ್ಲ. ಗಾಜನೂರು ಅಪ್ಪಾಜಿ ಊರು. ಸಿಂಗನಲ್ಲೂರು ನಮ್ಮ ತಾತನ ಊರು. ಆದ್ಧರಿಂದ ನಂಟು ಜಾಸ್ತಿ." ಎಂದು ಶಿವಣ್ಣ ತಮ್ಮ ಮೂಲದ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ 'ಬೈರಾಗಿ' ಸಿನಿಮಾಗೆ ನಾನೊಬ್ಬನೇ ಹೀರೊ ಅಲ್ಲ. ಡಾಲಿ ಧನಂಜಯ್, ಪೃಥ್ವಿ ಅಂಬರ್ ಎಲ್ಲರೂ ಹೀರೊ ಎಂದು ಹೇಳಿದ್ದಾರೆ.


Click it and Unblock the Notifications











