ಅಪ್ಪುಗಾಗಿ ಅಭಿಮಾನಿಗಳ ಮೆರವಣಿಗೆಯಲ್ಲಿ ಶಿವಣ್ಣ, ಶ್ರೀಮುರಳಿ, ರಾಘಣ್ಣ: ಭಾಗವಹಿಸುವವರು ಯಾರು?
ಕೊನೆಯದಾಗಿ ಅಪ್ಪು ಅಭಿಮಾನಿಗಳು ಬೃಹತ್ ಮೆರವಣಿಗೆ ಸಜ್ಜಾಗುತ್ತಿದ್ದಾರೆ. 'ಜೇಮ್ಸ್' ಸಿನಿಮಾ ಸಂಭ್ರಮ ಒಂದು ಕಡೆ. ಇನ್ನೊಂದು ಅಪ್ಪು ಹುಟ್ಟುಹಬ್ಬ. ಇವೆರಡನ್ನೂ ಮುಂದಿಟ್ಟುಕೊಂಡು ಮಾರ್ಚ್ 20ರಂದು ಅಪ್ಪು ಫೋಟೊ ಜೊತೆ ಬೃಹತ್ ಮೆರವಣಿಗೆ ಮಾಡಲು ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಈಗಾಗಲೇ ದೊಡ್ಮೆನೆ ಕುಟುಂಬಕ್ಕೆ ಆಹ್ವಾನ ಕೂಡ ನೀಡಲಾಗಿದೆ. ಅಭಿಮಾನಿಗಳು ಇಡೀ ದೊಡ್ಮನೆ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ. ದೊಡ್ಮನೆ ತಾರೆಯರು ಕೂಡ ಮೆರೆವಣಿಗೆಯಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
'ಜೇಮ್ಸ್' ಜಾತ್ರೆ ಜೊತೆ ಪುನೀತ್ ಹುಟ್ಟುಹಬ್ಬವನ್ನು ಮೆರವಣಿಗೆ ಮೂಲಕ ಆಚರಣೆ ಮಾಡಲಿದ್ದಾರೆ. ಮಾರ್ಚ್ 17ರಿಂದ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ನಾಲ್ಕು ದಿನಗಳ ಕಾಲ ನಿರಂತರವಾಗಿ ಸಂಭ್ರಮಿಸಲಿದ್ದಾರೆ. ಅಭಿಮಾನಿಗಳೇ ಸೇರಿಕೊಂಡು ಹಣ ಒಟ್ಟುಗೂಡಿಸಿ ಈ ಮೆರವಣಿಗೆ ಮಾಡಲಿದ್ದಾರೆ. ಈಗಾಗಲೇ ಅಭಿಮಾನಿಗಳು ದೊಡ್ಮನೆಗೆ ಆಹ್ವಾನ ನೀಡಿದ್ದಾರೆ. ಆ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಗಿದ್ದರೆ, ದೊಡ್ಮೆನ ಅಭಿಮಾನಿಗಳ ಈ ಬೃಹತ್ ಮೆರವಣಿಗೆಯಲ್ಲಿ ಯಾರು ಭಾಗಿಯಾಗುತ್ತಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ದೊಡ್ಮನೆ ಮೆರವಣಿಗೆಯಲ್ಲಿ ಶಿವಣ್ಣ ಭಾಗಿ
ಮಾರ್ಚ್ 20ರಂದು ದೊಡ್ಮನೆ ಅಭಿಮಾನಿಗೆಲ್ಲಾ ಸೇರಿಕೊಂಡು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡಿದ್ದಾರೆ. ರಾಜಾಜಿನಗರ 6ನೇ ಹಂತದಿಂದ ಕಂಠೀರವ ಸ್ಡುಡಿಯೋದ ವೀರೇಶ್ ಚಿತ್ರಮಂದಿರದವರೆಗೂ ಅಪ್ಪು ಫೋಟೊ ಹಿಡಿದು ಅಭಿಮಾನಿಗಳು ಮೆರವಣಿಗೆ ಮೂಲಕ ಸಾಗಲಿದ್ದಾರೆ. ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಅಭಿಮಾನಿಗಳು ಶಿವಣ್ಣನಲ್ಲಿ ಮನವಿ ಮಾಡಿಕೊಂಡಿದ್ದರು. ಅಭಿಮಾನಿಗಳ ಮನವಿಗೆ ಶಿವಣ್ಣ ಸ್ಪಂದಿಸಿದ್ದು, ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಶಿವಣ್ಣ ಜೊತೆ ದೊಡ್ಮನೆ ನಾಯಕರು
ಶಿವರಾಜ್ಕುಮಾರ್ ಜೊತೆ ರೋರಿಂಗ್ ಸ್ಟಾರ್ ಶ್ರೀಮುರಳಿ ಭಾಗಿಯಾಗಲಿದ್ದಾರೆ. ಅಭಿಮಾನಿಗಳು ಶ್ರೀಮುರಳಿಗೂ ಆಹ್ವಾನ ನೀಡಿದ್ದರು. ಅದಕ್ಕೆ ಶ್ರೀಮುರಳಿ ಕೂಡ ಒಪ್ಪಿಕೊಂಡಿದ್ದು, ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇವರೊಂದಿಗೆ ರಾಘವೇಂದ್ರ ರಾಜ್ಕುಮಾರ್, ಪುತ್ರರಾದ ಯುವರಾಜ್ಕುಮಾರ್, ವಿನಯ್ ರಾಜ್ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ. ಹೀಗಾಗಿ ಮಾರ್ಚ್ 20ರಂದು ಭಾನುವಾರ ಸಂಜೆ 4 ಗಂಟೆಯಿಂದ ಬೃಹತ್ ಮೆರವಣಿಗೆಗೆ ಚಾಲನೆ ಸಿಗಲಿದೆ.

ಪಲ್ಲಕ್ಕಿಯ ಮೆರವಣಿಗೆ
ಹೂವಿನ ಪಲ್ಲಕ್ಕಿಯನ್ನು ನಿರ್ಮಿಸಿ, ಅದರೊಳಗೆ ಪುನೀತ್ ರಾಜ್ಕುಮಾರ್ ಫೋಟೊವನ್ನು ಇಟ್ಟು ಅಭಿಮಾನಿಗಳು ಮೆರವಣಿಗೆ ಬರಲಿದ್ದಾರೆ. ಇದು ಅಭಿಮಾನಿಗಳ ಕನಸು. ಅಪ್ಪು ಇದ್ದಿದ್ದರೆ, ಪುನೀತ್ ಹುಟ್ಟುಹಬ್ಬ ಹಾಗೂ 'ಜೇಮ್ಸ್' ಸಿನಿಮಾದ ಸಂಭ್ರಮ 15 ದಿನಗಳ ಮುಂಚೆನೇ ಆರಂಭ ಆಗಿರುತ್ತಿತ್ತು. ಅಪ್ಪು ಕರ್ನಾಟಕ ಟೂರ್ ಹಾಕಿ ಬರುತ್ತಿದ್ದರು. ಸಿನಿಮಾ ಬಿಡುಗಡೆ ಮುನ್ನ ಇಲ್ಲವೇ ತೆರೆಕಂಡ ಬಳಿಕ ಸಿನಿಮಾ ಅಬ್ಬರವಿರುತ್ತಿತ್ತು. ಹೀಗಾಗಿ ಅಭಿಮಾನಿಗಳೇ ಅಪ್ಪು ನೆನಪಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಜೆಸಿಬಿಯಿಂದ ಪುಷ್ಪಾರ್ಚನೆ
ಅಪ್ಪು ಬೃಹತ್ ಮೆರವಣಿಗೆ ಸಾಗುವ ದಾರಿ ಯುದ್ದಕ್ಕೂ ಸಂಭ್ರಮ ನಡೆಯುತ್ತೆ. ಟೋಲ್ಗೇಟ್ ಬಳಿ 10 ಜೆಸಿಬಿಗಳು ಅಪ್ಪು ಭಾವಚಿತ್ರಕ್ಕೆ ಹೂವಿನ ಸುರಿಮಳೆಯನ್ನು ಸುರಿಸಲಿವೆ. ಈ ಮೆರವಣಿಗೆಯಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಲಿದ್ದಾರೆ. ಈ ಮೆರವಣಿಗೆ ವೀರೇಶ್ ಚಿತ್ರಮಂದಿರ ತಲುಪಿದ ಬಳಿಕ ಅಲ್ಲಿ ಕೇಕ್ ಕಟಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.


Click it and Unblock the Notifications











