ಅಣ್ಣಾವ್ರ ಮನೆಯಲ್ಲಿ ಮತ್ತೆ ರಾಜಕೀಯ ಕಹಳೆ: ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಶಿವಣ್ಣನ ಪತ್ನಿ!
ಒಂದ್ಕಡೆ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿ ನಡೆಯುತ್ತಿದೆ. ಸಿನಿಮಾ ಮಂದಿ ತನ್ನ ನೆಚ್ಚಿನ ರಾಜಕೀಯ ಮುಖಂಡರ ಪರವಾಗಿ ಪ್ರಚಾರಕ್ಕೆ ಇಳಿಸಿದ್ದಾರೆ. ಸುದೀಪ್, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗರು ಪ್ರಚಾರ ಕಣಕ್ಕೆ ಇಳಿದಿದ್ದಾರೆ.
ಇನ್ನೊಂದು ಕಡೆ ಅಣ್ಣಾವ್ರ ಕುಟುಂಬದಲ್ಲಿ ಮತ್ತೆ ರಾಜಕೀಯ ಚಟುವಟಿಗಳು ಆರಂಭ ಆಗಿವೆ. ಸ್ಯಾಂಡಲ್ವುಡ್ನ ಸೆಂಚುರಿಸ್ಟಾರ್ ಶಿವಣ್ಣನ ಪತ್ನಿ ಗೀತಾ ಶಿವರಾಜ್ಕುಮಾರ್ ರಾಜಕೀಯದಲ್ಲಿ ಸಕ್ರಿಯರಾಗುತ್ತಿದೆ. ನಾಳೆ (ಏಪ್ರಿಲ್ 28) ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಶುಕ್ರವಾರ (ಏಪ್ರಿಲ್ 28) ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಗೀತಾ ಶಿವರಾಜ್ ಕುಮಾರ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಮತ್ತೆ ದೊಡ್ಮೆನೆಯಲ್ಲಿ ರಾಜಕೀಯ ಕಹಳೆ ಊದಿದಂತಾಗಿದೆ.
ದಿ.ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ಕುಮಾರ್ ರಾಜಕೀಯ ಹೊಸದೇನು ಅಲ್ಲ. ಅಪ್ಪ ಹಾಗೂ ಇಬ್ಬರು ಸಹೋದರರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಮಧು ಬಂಗಾರಪ್ಪ ಜೊತೆ ಗೀತಾ ಶಿವರಾಜ್ಕುಮಾರ್ ಗುರುತಿಸಿಕೊಂಡಿದ್ದರು.
2021 ಜುಲೈನಲ್ಲಿ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದರು. ಆಗಲೇ ಗೀತಾ ಶಿವರಾಜ್ಕುಮಾರ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಈಗ ಆ ಸುದ್ದಿ ನಿಜವಾಗಿದೆ.

2014ರಲ್ಲಿ ಗೀತಾ ಶಿವರಾಜ್ಕುಮಾರ್ ಜೆಡಿಎಸ್ ಪಕ್ಷದಿಂದ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧೆ ಮಾಡಿದ್ದರು. ಈ ಹಣಾಹಣಿಯಲ್ಲಿ ಸುಮಾರು 2,40,636 ಪಡೆದು ಸೋಲುಂಡಿದ್ದರು. ಯಡಿಯೂರಪ್ಪ 6,06,216 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು.
ಅಣ್ಣಾವ್ರ ಕುಟುಂಬದಿಂದ ರಾಜಕೀಯ ಬಂದವರು ಯಾರೂ ಇಲ್ಲ. ಡಾ.ರಾಜ್ಕುಮಾರ್ ಸೇರಿದಂತೆ ದೊಡ್ಮನೆಯ ಸದಸ್ಯರಿಗೆ ರಾಜಕೀಯ ಪಕ್ಷಗಳಿಂದ ಚುನಾವಣೆಗೆ ಆಹ್ವಾನ ಬಂದಿತ್ತು. ಆದರೆ, ಅಣ್ಣಾವ್ರು ಯಾರು ಸೇರಿದಂತೆ ಯಾರೂ ರಾಜಕೀಯಕ್ಕೆ ಬರಲಿಲ್ಲ. ಹೀಗಾಗಿ ದೊಡ್ಮನೆ ಕುಟುಂಬದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದವರಲ್ಲಿ ಗೀತಾ ಶಿವರಾಜ್ಕುಮಾರ್ ಮೊದಲಿಗರಾಗಿದ್ದಾರೆ.
ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ಗೆ ಶಿವಮೊಗ್ಗ ಕ್ಷೇತ್ರದಲ್ಲಿ ಕೊಂಚ ಬಲ ಬಂದಂತಾಗಿದೆ. ಸೊರಬದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು ಬಂಗಾರಪ್ಪ ಪರವಾಗಿ ಗೀತಾ ಶಿವರಾಜ್ಕುಮಾರ್ ಹಾಗೂ ಶಿವಣ್ಣ ಇಬ್ಬರು ಪ್ರಚಾರ ಮಾಡುವ ಸಾಧ್ಯತೆಯಿದೆ.


Click it and Unblock the Notifications











