ಇಬ್ಬರು ಮಾಜಿ ಸಿಎಂ ಪರ ಸೆಂಚುರಿ ಸ್ಟಾರ್ ಪ್ರಚಾರ: ಕಿಚ್ಚ ಸುದೀಪ್ ಕ್ಯಾಂಪೇನ್ ಬಗ್ಗೆ ಶಿವಣ್ಣ ಹೇಳಿದ್ದೇನು?
ಪ್ರತಿ ಚುನಾವಣೆಯಲ್ಲೂ ಯಾವುದಾದರೂ ಒಂದು ಪಕ್ಷದ ಪರವಾಗಿಯೋ.. ಅಭ್ಯರ್ಥಿಯ ಪರವಾಗಿಯೋ ಪ್ರಚಾರ ಮಾಡೋದು ಹೊಸತೇನಲ್ಲ. ಆದರೆ, ಈ ಬಾರಿ ಮಾತ್ರ ಸೂಪರ್ಸ್ಟಾರ್ಗಳು ಪ್ರಚಾರ ಕುತೂಹಲ ಕೆರಳಿಸಿದೆ. ಅತ್ತ ದರ್ಶನ್, ಇತ್ತ ಸುದೀಪ್ ಮತ್ತೊಂದು ಕಡೆ ಶಿವರಾಜ್ಕುಮಾರ್ ಪ್ರಚಾರಕ್ಕೆ ಇಳಿದಿದ್ದಾರೆ.
ಈಗಾಗಲೇ ಚಿತ್ರರಂಗದ ಮೂವರು ಸೂಪರ್ಸ್ಟಾರ್ಗಳೂ ತಾವು ಒಪ್ಪಿಕೊಂಡಿರೋ ಅಭ್ಯರ್ಥಿಗಳ ಪರ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಸುದೀಪ್, ಹಾಗೂ ದರ್ಶನ್ ಪ್ರಚಾರ ಆರಂಭಿಸಿದ್ರೆ, ಈಗ ಶಿವಣ್ಣ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ.

ಪತ್ನಿ ಗೀತಾ ಶಿವರಾಜ್ಕುಮಾರ್ ಕ್ರಾಂಗೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಶಿವಣ್ಣ ಅದೇ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇದು ಅಚ್ಚರಿಯ ಬೆಳವಣಿಗೆ ಅಲ್ಲದೇ ಹೋದರೂ, ಇಬ್ಬರು ಮಾಜಿ ಸಿಎಂ ಸೇರಿದಂತೆ ಕ್ರಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮುಂದಾಗಿದ್ದು ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ.
ಸಿದ್ಧರಾಮಯ್ಯ, ಶೆಟ್ಟರ್ ಪರ ಪ್ರಚಾರ
ದೊಡ್ಮನೆ ಕುಟುಂಬಕ್ಕೂ, ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಕುಟುಂಬಕ್ಕೂ ಹಳೇ ನಂಟಿದೆ. ಅಣ್ಣಾವ್ರ ಕಾಲದಿಂದಲೂ ಸಿದ್ಧರಾಮಯ್ಯ ಅವರೊಂದಿಗೆ ಒಡನಾಟಿವಿದೆ. ಹೀಗಾಗಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಪರ ಶಿವರಾಜ್ಕುಮಾರ್ ಪ್ರಚಾರ ಮಾಡುತ್ತಿದ್ದಾರೆ. ಈ ವಿಷಯವನ್ನು ಶಿವಮೊಗ್ಗದಲ್ಲಿ ಸ್ವತ: ಶಿವಣ್ಣ ಅವರೇ ಬಹಿರಂಗಪಡಿಸಿದ್ದಾರೆ.

"ತುಂಬಾ ಕಡೆಯಿಂದ ಬಂದಿದೆ. ವರುಣ ಕ್ಷೇತ್ರದ ಅಭ್ಯರ್ಥಿ ಸಿದ್ಧರಾಮಯ್ಯ ಅವರ ಪರ ನಾಲ್ಕನೇ ತಾರೀಕು ಪ್ರಚಾರ ಮಾಡುತ್ತೇನೆ. 3ನೇ ತಾರೀಕು ನನಗೆ ಡಿಕೆಡಿ ಶೂಟಿಂಗ್ ಇದೆ. ಅದನ್ನು ಮುಗಿಸಿಕೊಂಡು ಹೋಗುತ್ತೇನೆ. ಎರಡನೇ ತಾರೀಕು ಶೂಟಿಂಗ್ ಇತ್ತು. ಅದು ಕ್ಯಾನ್ಸಲ್ ಆಯ್ತು. ಮತ್ತೆ ನನಗೂ 61 ವರ್ಷ ಆಯ್ತು. ನಾನಿನ್ನೂ ಯಂಗ್ ಅಲ್ಲ. ಅದಕ್ಕೆ ಕೆಲವು ಕಡೆ ಪ್ರಚಾರ ಮಾಡುತ್ತೇನೆ." ಎಂದು ಶಿವಣ್ಣ ತಿಳಿಸಿದ್ದಾರೆ.
"ನಮಗೆ ತುಂಬಾ ಕ್ಲೋಸ್ ಸರ್ಕಲ್ ಭೀಮಾ ನಾಯ್ಕ್ ಅವರು. ಸಾಗರ ಪಕ್ಕದಲ್ಲೇ ಇರೋದ್ರಿಂದ ಅಲ್ಲೂ ಪ್ರಚಾರ ಮಾಡುತ್ತಿದ್ದೇವೆ. ಅದು ಬಿಟ್ಟರೆ, ಜಗದೀಶ್ ಶೆಟ್ಟರ್ ಅವರು. ಮತ್ತೆ ಭೀಮಣ್ಣ ಶಿರಸಿ, ಅದು ಬಿಟ್ಟರೆ ಅಶೋಕ್ ಖೇಣಿ ಬೀದರ್ನಲ್ಲಿ ಪ್ರಚಾರ ಮಾಡುತ್ತೇನೆ. ಮಧು ಬಂಗಾರಪ್ಪ ನನಗೆ ಆತ್ಮೀಯ. ಅವರು ನನ್ನ ಭಾಮೈದ ಅನ್ನೋದಕ್ಕೆ ನನ್ನ ಫ್ರೆಂಡ್. ಹಾಗೇ ಜಗದೀಶ್ ಶೆಟ್ಟರ್ ಅವರು ನನ್ನ ಕುಟುಂಬವಿದ್ದಂತೆ. ಭೀಮಣ್ಣ ಅವರು ಫ್ಯಾಮಿಲಿ ಆಗಬೇಕು. ಹಾಗೇ ಅಶೋಕ್ ಖೇಣಿಯವರು ನನ್ನ ಒಳ್ಳೆಯ ಸ್ನೇಹಿತರು." ಎಂದಿದ್ದಾರೆ ಶಿವಣ್ಣ.
"ಸಿದ್ದರಾಮಯ್ಯ ನಮ್ಮ ಕಾಡಿನವರು ಅನ್ನೋರು ಅಪ್ಪಾಜಿ"
ಸಿದ್ಧರಾಮಯ್ಯ ಮೈಸೂರು ಪ್ರಾಂತ್ಯಕ್ಕೆ ಸೇರಿದವರು. ಹೀಗಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಅಣ್ಣಾವ್ರ ನಡುವೆ ಆತ್ಮೀಯತೆ ಇತ್ತು. ಈ ಸಂಗತಿಯನ್ನು ಶಿವರಾಜ್ಕುಮಾರ್ ಅವರೇ ಹೇಳಿದ್ದಾರೆ. ಅದರಲ್ಲೂ ಡಾ.ರಾಜ್ಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ನಮ್ಮ ಕಾಡಿನವರು ಅಂತಲೇ ಕರೆಯುತ್ತಿದ್ದ ಸಂಗತಿಯನ್ನೂ ರಿವೀಲ್ ಮಾಡಿದ್ದಾರೆ.
"ನಮ್ಮ ಅಪ್ಪಾಜಿ ಯಾವಾಗಲೂ ನಮ್ ಕಾಡಿನೋರು.. ನಮ್ಮ ಕಾಡಿನೋರು ಅಂತ ಹೇಳೋರು. ಸಿದ್ಧರಾಮಯ್ಯ ಮೈಸೂರಿನವರು. ಮೈಸೂರು ಪ್ರಾಂತ್ಯದಲ್ಲಿ ಯಾವಾಗಲೂ ನಮ್ಮ ಕಾಡಿನವರು ಬಂದ್ರು ಅಂತಾರೆ. ಹಾಗಾಗಿ ಅವರೊಂದಿಗೂ ಅಷ್ಟೇ ಬಾಂಧವ್ಯವಿದೆ" ಎಂದು ಶಿವಣ್ಣ ಸ್ವಾರಸ್ಯಕರ ಸಂಗತಿಯನ್ನು ತಿಳಿದ್ದಾರೆ.
"ಸುದೀಪ್ ಅವರದ್ದು ಅದು ಬೇರೆ"
ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರು ಸೂಚಿಸಿದವರ ಪರ ಪ್ರಚಾರ ಮಾಡುತ್ತೇನೆ ಎಂದು ಕಿಚ್ಚ ಹೇಳಿದ್ದರು. ಅಲ್ಲಿಂದ ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಪ್ರಚಾರ ಮಾಡುತ್ತಿದ್ದಾರೆ. ಇದು ಆರಂಭದಲ್ಲಿ ಇದು ವಿವಾದಕ್ಕೆ ಒಳಗಾಗಿತ್ತು. ಕಿಚ್ಚನ ಪ್ರಚಾರದ ಬಗ್ಗೆನೂ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
"ಸುದೀಪ್ ಅವರದ್ದು ಅದು ಬೇರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಿದ್ಧಾಂತವಿರುತ್ತೆ. ನಾವು ಯಾರ ವಿರುದ್ಧವೂ ಇಲ್ಲ. ಅದಕ್ಕೆ ನಾವು ಯಾವ ಪಾರ್ಟಿಯ ವಿರುದ್ಧವೂ ಮಾತಾಡುವುದಿಲ್ಲ. " ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.


Click it and Unblock the Notifications











