ಕಮಲ್ ಹಾಸನ್ ವಿವಾದ; ಶಿವಣ್ಣನ ಪರ ಅಭಿಮಾನಿಗಳು ಬ್ಯಾಟಿಂಗ್
ಕನ್ನಡಿಗರನ್ನು ಕೆಣಕಿರುವ ಕಮಲ್ ಹಾಸನ್ ವಿರುದ್ಧ ರಾಜ್ಯಾದ್ಯಂತ ಅಸಮಾಧಾನ ವ್ಯಕ್ತವಾಗುತ್ತಿದೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ ಎದುರೇ ಈ ಮಾತನ್ನು ಕಮಲ್ ಆಡಿದ್ದರು.
ಕಮಲ್ ತಮ್ಮ ಹೇಳಿಕೆ ಹಿಂಪಡೆಯಬೇಕು, ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ. ಆದರೆ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳುವ ಮಾತೇಯಿಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇನ್ನು ಕಮಲ್ ಹಾಸನ್ ಹೇಳಿಕೆ ವಿವಾದದ ನಡುವೆ ಕೆಲವರು ನಟ ಶಿವರಾಜ್ಕುಮಾರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ವೇದಿಕೆಯಲ್ಲಿ ಕಮಲ್ ಹಾಸನ್ ಆ ರೀತಿ ಹೇಳಿದಾಗ ಶಿವಣ್ಣ ಯಾಕೆ ಸುಮ್ಮನಿದ್ದರು. ಅಲ್ಲೇ ಅದನ್ನು ಸರಿಪಡಿಸಬಹುದಿತ್ತಲ್ಲ, ಅವರಿಗೆ ಭಾಷಾಭಿಮಾನ ಇಲ್ಲವೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕನ್ನಡ ಪರ ಸಂಘಟನೆಗಳು ಈಗಾಗಲೇ ಪ್ರತಿಭಟನೆ ನಡೆಸಿ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿವೆ.
ಅಭಿಮಾನಿಗಳು ಶಿವರಾಜ್ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಕನ್ನಡ ಭಾಷಾಭಿಮಾನದ ಬಗ್ಗೆ ಶಿವಣ್ಣನಿಗೆ ಪಾಠ ಮಾಡಲು ಬರಬೇಡಿ. ಅವರಿಗೆ ಕನ್ನಡ ಅಭಿಮಾನ, ಹೋರಾಟ ಗೊತ್ತಿಲ್ಲವೇ? ಟ್ವಿಟ್ಟರ್ನಲ್ಲಿ ಕೂತು ಕಾಮೆಂಟ್ ಮಾಡುವುದಲ್ಲ ಎಂದು ತಿರುಗೇಟು ನೀಡುತ್ತಿದ್ದಾರೆ. 4 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಎಂಇಎಸ್ ಕಾರ್ಯಕರ್ತರು ಕರ್ನಾಟಕ ಬಾವುಟ ಸುಟ್ಟು ಉದ್ಧಟತನ ಮೆರೆದಿದ್ದರು. ಈ ಬಗ್ಗೆ ಶಿವಣ್ಣ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾಷೆಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದಿದ್ದರು. ಆ ವೀಡಿಯೋವನ್ನು ಅಭಿಮಾನಿಗಳು ಈಗ ವೈರಲ್ ಮಾಡುತ್ತಿದ್ದಾರೆ.
"ಬಾವುಟ ಸುಟ್ಟ ವಿಚಾರದ ಬಗ್ಗೆ ನನಗೆ ಗೊತ್ತಿರಲಿಲ್ಲ. ಯಾರೋ ಹೇಳಿದ ಬಳಿಕ ಟ್ವೀಟ್ ಮಾಡ್ದೆ. ಈಗ ಟ್ವೀಟ್ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಅದು ಮಾಡುವುದರಿಂದ ಪ್ರಯೋಜನ ಇಲ್ಲ. ಟ್ವೀಟ್ ಮಾಡಿದರೆ ಅಭಿಮಾನ ಅಲ್ಲ. ನಮ್ಮ ಭಾಷೆಗಾಗಿ ಪ್ರಾಣ ಕೊಡುವುದಕ್ಕೂ ನಾನು ಸಿದ್ಧ. ಮುಂದೆ ನನಗೆ 60 ವರ್ಷ ಆಗುತ್ತದೆ. ಇಷ್ಟು ವರ್ಷ ಬೆಳೆಸಿದ್ದೀರಾ ಸಾಕು. ಇದರಿಂದ ಪ್ರಾಣ ಹೋಗಬೇಕು ಅಂದ್ರೆ ಹೋಗ್ಲಿಬಿಡಿ. ಯಾರು ಹೆಂಗೋ ಹೋಗ್ತಾರೆ. 46 ವರ್ಷಕ್ಕೆ ಒಬ್ಬ ಹೋಗ್ತಾನೆ ಅಂದ್ರೆ ಹೆಂಗೆ. ಜೀವ ಗ್ಯಾರೆಂಟಿ ಇಲ್ಲ. ಬಾವುಟ ಸುಡುವುದು ಅಂದ್ರೆ ತಾಯಿನ ಸುಟ್ಟಂತೆ ಹೆಂಗೆ ಬಿಟ್ಟುಬಿಡ್ತೀವಿ" ಎಂದು ಶಿವಣ್ಣ ಅಂದು ಹೇಳಿದ್ದರು.
'ಬಡವ ರಾಸ್ಕಲ್' ಪ್ರೀ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಶಿವರಾಜ್ಕುಮಾರ್ ಅಂದು ಮಾತನಾಡಿದ್ದರು. ಶಿವಣ್ಣ ಚೆನ್ನೈನಲ್ಲೇ ಓದಿ ಬೆಳೆದವರು. ಚಿಕ್ಕಂದಿನಿಂದ ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿ. 'ಥಗ್ ಲೈಫ್' ಆಡಿಯೋ ಲಾಂಚ್ ವೇದಿಕೆಯಲ್ಲಿ ಕೂಡ ಇದೇ ಮಾತನ್ನು ಹೇಳಿದ್ದರು.
ಕಮಲ್ ಹಾಸನ್ ಕೂಡ ಡಾ. ರಾಜ್ಕುಮಾರ್ ಕುಟುಂಬದ ಜೊತೆಗಿನ ಒಡನಾಟದ ಬಗ್ಗೆ ಮಾತನಾಡುತ್ತಿದ್ದರು. ಇದೇ ವೇಳೆ ಕೊನೆಯಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಕರ್ನಾಟಕದಲ್ಲಿ ಅವರ 'ಥಗ್ ಲೈಫ್' ಸಿನಿಮಾ ಬಿಡುಗಡೆಗೂ ಸಂಕಷ್ಟ ಎದುರಾಗಿದೆ. ಮುಂದೆ ಈ ವಿವಾದ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











