"ಯೋ.. ಬರ್ಕಯ್ಯ.. ಶಿವಮೊಗ್ಗ ನಂದು"; ಪತ್ನಿ ಪರ ಪ್ರಚಾರದ ಮೇಲೆ ಡೈಲಾಗ್ ಬಿಟ್ಟ ಶಿವಣ್ಣ
2024ರ ಲೋಕಸಭೆ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಬಾರಿ ಕುತೂಹಲಕಾರಿ ಫಲಿತಾಂಶ ಬರಬಹುದು. ಸೋಲುವವರು ಗೆಲ್ಲಬಹುದು. ಗೆಲ್ಲುವವರು ಸೋಲಬಹುದು. ಈ ಬಾರಿ ಲೋಕ ಸಭೆ ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ಈ ಬಾರಿ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸಿದ್ದು ಶಿವಮೊಗ್ಗ ಲೋಕಸಭೆ ಕ್ಷೇತ್ರ.
ಶಿವಮೊಗ್ಗ ಲೋಕಸಭೆ ಕ್ಷೇತ್ರ ಈ ಬಾರಿ ಎಲ್ಲರ ಗಮನ ಸೆಳೆದಿದೆ. ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ನಿಂದ ಗೀತಾ ಶಿವರಾಜ್ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕೆ. ಎಸ್. ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ಇಂಟ್ರೆಸ್ಟಿಂಗ್ ಅನಿಸುತ್ತಿದೆ.

ಮತ್ತೊಂದು ಕಡೆ ಶಿವರಾಜ್ಕುಮಾರ್ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಪತ್ನಿಯನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ. ಈ ಕಾರಣಕ್ಕೆ ಈಗಾಗಲೇ ಶಿವಮೊಗ್ಗ ಸುತ್ತುವುದಕ್ಕೆ ಶುರು ಮಾಡಿದ್ದಾರೆ. ಇಂದು (ಮಾರ್ಚ್ 24) ಕೂಡ ಶಿವರಾಜ್ಕುಮಾರ್ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಅಭಿಮಾನಿಗಳು ಡೈಲಾಗ್ ಹೇಳುವಂತೆ ದುಂಬಾಲು ಬಿದ್ದರು. ಆಗ ಶಿವಣ್ಣ ಶಿವಮೊಗ್ಗ ನಂದು ಅಂತ ಡೈಲಾಗ್ ಹೊಡೆದಿದ್ದಾರೆ.
ಗೀತಾ ಶಿವರಾಜ್ಕುಮಾರ್ ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ಗೆಲ್ಲಲೇಬೇಕು ಅಂತ ನಿರ್ಧರಿಸಿದ್ದು, ಬಿರುಸಿನ ಪ್ರಚಾರ ನಡೆಯುತ್ತಿದೆ. ಇಂದು ಶಿವರಾಜ್ಕುಮಾರ್ ಬೈಕ್ ಏರಿ ಪತ್ನಿ ಪ್ರಚಾರ ಮಾಡಿದ್ದರು. ಈ ವೇಳೆ ಪತ್ನಿಯನ್ನು ಗೆಲ್ಲಿಸಿ, ಉಡುಗೊರ ನೀಡುವಂತೆ ಶಿವಣ್ಣ ಮನವಿ ಮಾಡಿಕೊಂಡಿರು.

"ಹೆಣ್ಣು ಮಕ್ಕಳು ಮನೆಗೆ ಬಂದರೆ ಏನಾದರೂ ಒಂದು ಉಡುಗೊರೆ ಕೊಡುತ್ತಾರೆ. ಸರಿ ಗೀತಾ ನಿಮ್ಮ ತವರು ಮನೆಗೆ ಬಂದಿದ್ದಾರೆ. ಯಾಕೆ ಎಂಪಿಯಾಗಿ ಗೆಲ್ಲಿಸಿ ಒಂದು ಉಡುಗೊರೆ ಕೊಡಬಾರದು. ಆಮೇಲೆ ಹೇಗಿರುತ್ತೆ ಅಂತ ನೋಡಿ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ ಅಷ್ಟೇನೆ. ಖಂಡಿತಾ ಕೆಲಸ ಮಾಡುತ್ತಾರೆ ಅನ್ನೋ ಭರವಸೆಯನ್ನು ನಾನು ಕೊಡುತ್ತೇನೆ." ಎಂದು ಶಿವಣ್ಣ ಹೇಳಿದ್ದಾರೆ.
ಶಿವಣ್ಣ ಮಾತಿಗೆ ಇಳಿಯುತ್ತಿದ್ದಂತೆ ಹಾಡು ಹೇಳುವಂತೆ ಜನರು ದುಂಬಾಲು ಬಿದ್ದಿದರು ಆದರೆ, ಶಿವಣ್ಣ ಇದು ಹಾಡು ಹೇಳುವ ಸಮಯ ಅಲ್ಲ ಎಂದು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. "ಹಾಡು ಹಾಡುವಂತಹ ಪ್ರೋಗ್ರಾಂ ಅಲ್ಲ ಕಣಮ್ಮ ಇದು. ಅದಕ್ಕೆ ಮೊದಲು ಗೆಲ್ಲಿಸಿ, ಆಮೇಲೆ ಎಷ್ಟು ಹಾಡುಗಳು ಬೇಕು. 24 ಗಂಟೆ ಹಾಡು ಹಾಡುತ್ತೇನೆ ಬೇಕಿದ್ದರೆ. 26 ಗಂಟೆ ಕುಣಿಯುತ್ತೇನೆ ಬೇಕಿದ್ದರೆ. ಅದಕ್ಕೋಸ್ಕರ ಕೇಳುತ್ತಿಲ್ಲ. ಯಾಕಂದ್ರೆ, ಬೇರೆ ಸಮಾರಂಭಕ್ಕೆ ಬಂದಾಗ ಹಾಡೇ ಹಾಡುತ್ತೇನೆ. ಆದರೆ, ಇಂತಹ ಸಮಾರಂಭದಲ್ಲಿ ಬೇಡ" ಎಂದು ಶಿವಣ್ಣ ಹೇಳಿದ್ದಾರೆ.
ಆದರೂ ಡೈಲಾಗ್ ಹೇಳುವಂತೆ ಒತ್ತಾಯಿಸಿದ್ದರು. ಆಗ, "ಯೋ.. ಬರ್ಕಯ್ಯ.. ಮುಂದಾಗೋದು ಪೇಪರ್ನಲ್ಲಿ ಬರ್ಕೋ.. ಶಿವಮೊಗ್ಗ ನಂದು. ಇಲ್ಲಿ ಇರೋರೆಲ್ಲ ಶಿವಮೊಗ್ಗ ಹುಲಿಗಳು.. ನ್ಯಾಪಕ ಇರಲಿ." ಎಂದು ಶಿವರಾಜ್ಕುಮಾರ್ ಡೈಲಾಗ್ ಹೊಡೆದಿದ್ದಾರೆ.


Click it and Unblock the Notifications











