ಕನ್ನಡಿಗರ ಆಕ್ರೋಶಕ್ಕೆ ಕೊನೆಗೂ ಮಣಿದ ಸೋನು ನಿಗಂ; ಗರಂ ಆಗಿದ್ದ ಗಾಯಕ ಥಂಡ ಥಂಡ.. ಕ್ಷಮೆ ಕೇಳಿದ ಸಿಂಗರ್
ಚಿನ್ನದ ಕಂಠದ ಗಾಯಕ ಸೋನು ನಿಗಂ ಇತ್ತೀಚೆಗೆ ಕನ್ನಡಿಗರನ್ನು ಕೆಣಕಿ ವಿವಾದಕ್ಕೆ ಸಿಲುಕಿದ್ದರು. ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡುವುದಕ್ಕೆ ಬಂದಿದ್ದ ಸೋನು ನಿಗಂಗೆ ಅದೇನಾಗಿತ್ತೋ ಏನೋ ಕನ್ನಡಿಗನ ಮನವಿ ಆಕ್ರೋಶಕ್ಕೆ ಕಾರಣವಾಗಿತ್ತು. ಇಷ್ಟು ವರ್ಷ ಕನ್ನಡಿಗರ ಪ್ರೀತಿಯಲ್ಲಿ ಮುಳುಗೆದ್ದಿದ್ದ ಈ ಗಾಯಕ ಒಂದೇ ಕ್ಷಣದಲ್ಲಿ ಎಲ್ಲವೂ ಕಳೆದುಕೊಂಡಿದ್ದಾರೆ.
ಮಾತಿನಲ್ಲಿ ಸ್ಥಿಮಿತ ಕಳೆದುಕೊಂಡು ವಿವಾದ ಸೃಷ್ಟಿಸಿದರೂ, ಕನ್ನಡಿಗರ ಮೇಲೆ ಆರೋಪ ಹೊರಿಸಿದ್ದರು. ಕನ್ನಡಿಗ ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್ ಭಯೋತ್ಪಾದಕರ ಕೃತ್ಯಕ್ಕೆ ಹೋಲಿಕೆ ಮಾಡಿದ್ದರು. ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸೋನು ನಿಗಂ ಅವರನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಕೆಲ ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದವು. ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದು ಕೂತಿದ್ದವು.

ಇಷ್ಟೆಲ್ಲ ಆದ್ಮೇಲೂ ಕನ್ನಡ ಹಾಡು ಕೇಳಿದ ಯುವಕರನ್ನು ಗೂಂಡಾಗಳು ಎಂದು ಕರೆದಿದ್ದರು. ಇನ್ನೂ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ಇಂದು (ಮೇ 5) ಫಿಲ್ಮ್ ಚೇಂಬರ್ನಲ್ಲಿ ಸೋನು ನಿಗಂ ಬ್ಯಾನ್ ಮಾಡುವ ಬಗ್ಗೆ ನಡೆದು, ಕೊನೆಗೆ ಅಸಹಕಾರ ನೀಡಲು ಒಕ್ಕೊರಲಿನಿಂದ ತೀರ್ಮಾನ ಮಾಡಲಾಗಿತ್ತು. ಇಷ್ಟೆಲ್ಲ ಬೆಳವಣಿಗಳಾದ್ಮೇಲೆ ಸೋನು ನಿಗಂ ಕೊನೆಗೂ ತಮ್ಮ ಅಹಂ ಅನ್ನು ಪಕ್ಕಕ್ಕೆ ಇಟ್ಟು ಕ್ಷಮೆಯನ್ನು ಕೇಳಿದ್ದಾರೆ.
ವಿಶ್ವದ ಮೂಲೆ ಮೂಲೆಯಲ್ಲಿ ಸಂಗೀತ ಸಂಜೆಗಳನ್ನು ನೀಡುವ ಸೋನು ನಿಗಂಗೆ ಅದೇನಾಗಿತ್ತೋ ಗೊತ್ತಿಲ್ಲ. ಪ್ರತಿ ಬಾರಿ ಕನ್ನಡಿಗರ ಬಗ್ಗೆ ಕನ್ನಡ ಹಾಡುಗಳ ಬಗ್ಗೆ ಒಳ್ಳೆಯದ್ದನ್ನೇ ಮಾತಾಡುತ್ತಿದ್ದ ಕನ್ನಡಿಗರ ನೆಚ್ಚಿನ ಗಾಯಕನ ಪಿತ್ತ ಅಂದು ನೆತ್ತಿಗೆ ಹತ್ತಿತ್ತು. ಕನ್ನಡಿಗರನ್ನು ಪಹಲ್ಗಾಮ್ ಉಗ್ರಂರ ಹೇಯ ಕೃತ್ಯಕ್ಕೆ ಹೋಲಿಸಿದರು. ಆ ವಿವಾದದಿಂದ ತಪ್ಪಿಸಿಕೊಳ್ಳುವುದಕ್ಕೆ ಅವರೆಲ್ಲರೂ ಗೂಂಡಾದವರಂತೆ ಕಾಣುತ್ತಿದ್ದರು ಎಂದರು. ಆಗ ಕನ್ನಡಿಗರ ವಿವಾದ ಇನ್ನೂ ತಾರಕ್ಕೇರಿತ್ತು.
ಕನ್ನಡ ಪರ ಹೋರಾಟಗಾರು ಸೋನು ನಿಗಂ ಕ್ಷಮೆಯೇ ಬೇಕಾಗಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಫಿಲ್ಮ್ ಚೇಂಬರ್ ಮೆಟ್ಟಿಲೇರಿ ಸೋನು ನಿಗಂರನ್ನು ಬ್ಯಾನ್ ಮಾಡಬೇಕು ಎಂದು ದೂರನ್ನು ನೀಡಿದ್ದರು. ಒಂದು ವೇಳೆ ನಿರ್ಮಾಪಕರು, ಸಂಗೀತ ನಿರ್ದೇಶಕರು ಅವರಿಗೆ ಕನ್ನಡದಲ್ಲಿ ಹಾಡುವುದಕ್ಕೆ ಅವಕಾಶ ನೀಡಿದರೆ, ಸಿನಿಮಾವನ್ನೇ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ಪತ್ರವನ್ನು ಫಿಲ್ಮ್ ಚೇಂಬರ್ಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಕೂಡ ಚರ್ಚೆ ಮಾಡಿ ಕ್ಷಮೆ ಕೇಳುವವರೆಗೂ ಅಸಹಕಾರ ನೀಡುವ ತೀರ್ಮಾನಕ್ಕೆ ಬಂದಿದ್ದರು.
ಇಷ್ಟೆಲ್ಲ ಬೆಳವಣಿಗಳ ಬಳಿಕ ಗಾಯಕ ಸೋನು ನಿಗಂ ಕೊನೆಗೂ ಕ್ಷಮೆ ಕೇಳಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಕನ್ನಡಿಗರನ್ನು ಕೋರಿ ಕ್ಷಮೆಯನ್ನು ಕೇಳಿದ್ದಾರೆ. ಕನ್ನಡಿಗರನ್ನು ಉದ್ದೇಶಿಸಿ ಮಾಡಿದ ಪೋಸ್ಟ್ಗೆ ಹೀಗಿದೆ " ಕ್ಷಮೆ ಇರಲಿ ಕರ್ನಾಟಕ. ನನ್ನ ಅಹಂಗಿಂತ ನಿಮ್ಮ ಮೇಲೆ ನಾನು ಇಟ್ಟಿರುವ ಪ್ರೀತಿಯೇ ದೊಡ್ಡದು. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಸೋನು ನಿಗಂ ಆ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕನ್ನಡಿಗರಿಗೆ ಕ್ಷಮೆಯನ್ನು ಕೇಳುವುದಕ್ಕೂ ಮುನ್ನ ಗಾಯಕ ಸೋನು ನಿಗಂ ಕನ್ನಡಿಗರಿಗೆ ಸುದೀರ್ಘವಾದ ಪತ್ರವನ್ನು ಬರೆದಿದ್ದರು. ನಾನು ಇನ್ನೂ ಹದಿಹರೆಯದ ಯುವಕನನ್ನಲ್ಲ. ನನಗೀಗ 51 ವರ್ಷ. ಜೀವನದ ದ್ವಿತೀಯಾರ್ಧಕ್ಕೆ ತಲುಪಿದ್ದೇನೆ. ಹೀಗಾಗಿ ಅವಮಾನವನ್ನು ಸಹಿಸಲಾರೆ ಎಂದು ಅಂದು ನಡೆದ ಘಟನೆಯನ್ನು ವಿವರಿಸಿದ್ದರು. ಮತ್ತೆ ಕನ್ನಡಿಗನ್ನದ್ದೇ ತಪ್ಪು. ಸಾವಿರಾರು ಜನರ ಮುಂದೆ ಬೆದರಿಕೆ ಹಾಕಿದಾಗ ಕೋಪ ಮಾಡಿಕೊಳ್ಳುವ ಹಕ್ಕು ನನಗಿದೆ ಎಂದು ಹೇಳಿದ್ದರು. ಹಾಗೇ ಕನ್ನಡಿಗರು ಯಾವುದೇ ತೀರ್ಮಾನ ತೆಗೆದುಕೊಂಡರೂ, ಯಾವುದೇ ದುರುದ್ದೇಶವಿಲ್ಲದೆ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.


Click it and Unblock the Notifications











