ಸಾಹಿತ್ಯಲೋಕದ ಮಹಾ'ಪರ್ವ' ಪದ್ಮಭೂಷಣ ಎಲ್.ಎಲ್.ಭೈರಪ್ಪ ನಿಧನ: ಸಿನಿಮಾ ಆಗಿದ ಕೃತಿಗಳಿವು
ಕನ್ನಡ ಸಾಹಿತ್ಯ ಲೋಕದ ಮಹಾ'ಪರ್ವ' ಹಿರಿಯ ಸಾಹಿತಿ, ಪದ್ಮಭೂಷಣ ಡಾ.ಎಸ್.ಎಲ್ ಭೈರಪ್ಪ ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕಾದಂಬರಿಕಾರ, ತತ್ವಜ್ಞಾನಿ, ಲೇಖಕರಾಗಿ ಅಪಾರ ಅಭಿಮಾನಿ ಬಳಗವನ್ನು ಸಂಪಾಸಿದ್ದರು.
ಕಳೆದ ಮೂರು ತಿಂಗಳಿನಿಂದ ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಮರೆವಿನ ಕಾಯಿಲೆ ಕೂಡ ಇತ್ತು ಎಂದು ವರದಿಯಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು (ಸೆಪ್ಟೆಂಬರ್ 24) ಮಧ್ಯಾಹ್ನ 2.38ಕ್ಕೆ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದು, ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಅಲ್ಲದೇ ಇವರ ಕೆಲವು ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ಇವರು ಕೃತಿಗಳು ಸಿನಿಮಾಗಳಾಗಿವೆ. ಕೆಲವು ಧಾರಾವಾಹಿಗಳಾಗಿ ರೂಪುಗೊಂಡಿವೆ.

'ವಂಶವೃಕ್ಷ' - 1971
ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪ ಅವರು ಬರೆದ ಜನಪ್ರಿಯ ಕಾದಂಬರಿಗಳಲ್ಲಿ 'ವಂಶವೃಕ್ಷ' ಕೂಡ ಒಂದು. ಈ ಕಾದಂಬರಿಗೆ ಇಂದಿಗೂ ಅಭಿಮಾನಿಗಳು ಇದ್ದಾರೆ. ಈ ಕಾದಂಬರಿಯನ್ನು ಆಧರಿಸಿ, ಬಿ.ವಿ ಕಾರಂತ್ ಹಾಗೂ ಗಿರೀಶ್ ಕಾರ್ನಾಡ್ ಇದೇ ಹೆಸರನ್ನು ಇಟ್ಟುಕೊಂಡು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದು ವಿಷ್ಣುದಾದ ಅವರ ಚೊಚ್ಚಲ ಸಿನಿಮಾ ಕೂಡ ಹೌದು. ಈ ಸಿನಿಮಾ 1971ರಲ್ಲಿ ತೆರೆಕಂಡಿತ್ತು
'ತಬ್ಬಲಿಯು ನೀನಾದೆ ಮಗನೆ'-1977
ಕನ್ನಡ ಚಿತ್ರರಂಗಕ್ಕೆ 'ತಬ್ಬಲಿಯು ನೀನಾದೆ ಮಗನೆ' ಒಂದು ವಿಶಿಷ್ಟ ಪ್ರಯತ್ನ ಆಗಿತ್ತು. ಬಿ.ವಿ. ಕಾರಂತ್ ಹಾಗೂ ಗಿರೀಶ್ ಕಾರ್ನಾಡ್ ಇಬ್ಬರೂ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ನ ಜನಪ್ರಿಯ ನಟರು ನಟಿಸಿದ್ದು ವಿಶೇಷ. ಬಾಲಿವುಡ್ ನಟರಾದ ನಸೀರುದ್ಧೀನ್ ಷಾ, ಓಂ ಪುರಿ, ಕುಲ್ಭೂಷನ್ ಖರಬಂಧ, ಮನು ಸೇರಿದಂತೆ ಹಲವು ನಟಿಸಿದ್ದರು. ಈ ಸಿನಿಮಾ ಕೂಡ ಡಾ.ಎಸ್.ಎಲ್.ಭೈರಪ್ಪ ಅವರ 'ತಬ್ಬಲಿಯು ನೀನಾದೆ ಮಗನೆ' ಕೃತಿಯನ್ನು ಆಧರಿಸಿ ನಿರ್ಮಾಣ ಮಾಡಲಾಗಿತ್ತು. ಇದು 1977ರಲ್ಲಿ ತೆರೆಕಂಡಿತ್ತು.

'ಮತದಾನ'- 2001
ಡಾ.ಎಸ್.ಎಲ್.ಭೈರಪ್ಪ ಅವರು ರಚಿತ ಕೃತಿಗಳಲ್ಲಿ ಗಮನ ಸೆಳೆದ ಕೃತಿ 'ಮತದಾನ'. ಇದೂ ಸಿನಿಮಾ ಆಗಿ ನಿರ್ಮಾಣ ಮಾಡಲಾಗಿದೆ. ಟಿ.ಎನ್.ಸೀತಾರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. 2001ರಲ್ಲಿ ತೆರೆಕಂಡಿದ್ದ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಂತ್ನಾಗ್, ದೇವರಾಜ್ ಹಾಗೂ ತಾರಾ ಅನುರಾಧ ಕಾಣಿಸಿಕೊಂಡಿದ್ದರು.
ನಾಯಿ ನೆರಳು
ಕನ್ನಡ ಚಿತ್ರರಂಗದ ಮತ್ತೊಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ನಾಯಿ ನೆರಳು' ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾ 2006ರಲ್ಲಿ ಬಿಡುಗಡೆ ಆಗಿತ್ತು. ಇದು ಕೂಡ ಡಾ.ಎಸ್.ಎಲ್.ಭೈರಪ್ಪ ಅವರು ಬರೆದ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿ ನಿರ್ಮಾಣ ಮಾಡಲಾಗಿತ್ತು.
ಡಾ.ಎಸ್.ಎಲ್.ಭೈರಪ್ಪ ಅವರ ಕೃತಿಗಳು ಕೇವಲ ಸಿನಿಮಾ ಅಷ್ಟೇ ಅಲ್ಲ, ಧಾರಾವಾಹಿಗಳಾಗಿಯೂ ಬದಲಾಗಿದೆ. 'ಗೃಹಭಂಗ', 'ದಾಟು' ಕಾದಂಬರಿಗಳನ್ನು ಸೀರಿಯಲ್ಗಳಾಗಿ ನಿರ್ಮಾಣ ಮಾಡಲಾಗಿದೆ. ಹಾಗೇ 'ಪರ್ವ' ಕಾದಂಬರಿಯನ್ನು ನಾಟಕವನ್ನಾಗಿ ಪರಿವರ್ತಿಸಿ ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದಾರೆ. ಡಾ.ಎಸ್.ಎಲ್.ಭೈರಪ್ಪ ಅವರ ನಿಧನ ಕೇವಲ ಸಾಹಿತ್ಯ ಲೋಕಕ್ಕೆ ಅಷ್ಟೇ ಅಲ್ಲ, ಸಿನಿಮಾರಂಗಕ್ಕೂ ದೊಡ್ಡ ನಷ್ಟವಾಗಿದೆ.


Click it and Unblock the Notifications











