"ದರ್ಶನ್ಗೆ ಒಂದು ತಪ್ಪು ಮಾಡಿದ್ದೀಯ ಅಂತ ಅವತ್ತೇ ಹೇಳಿದ್ದೆ" ಸ್ನೇಹ್ ಶ್ಯಾಮ್
ಉರಗ ತಜ್ಞ ಸ್ನೇಕ್ ಶ್ಯಾಮ್ ಯಾರಿಗೆ ಗೊತ್ತಿಲ್ಲ. ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿರೋ ಇವರ ಇಡೀ ಕರ್ನಾಟಕಕ್ಕೆ ಗೊತ್ತು. ಮೂಲತ: ಮೈಸೂರಿನವರಾದ ಇವರು ಜನಪ್ರಿಯ ವ್ಯಕ್ತಿ. ಹಾಗಂತ ಕೇವಲ ಹಾವು ಹಿಡಿಯೋದರಲ್ಲಿ ಅಷ್ಟೇ ಅಲ್ಲ. ಆಧ್ಯಾತ್ಮದಲ್ಲಿಯೂ ನಂಬಿಕೆ ಇಟ್ಟವರು. ಹೀಗಾಗಿ ಇವರಿಗೆ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು ಸಂಪರ್ಕದಲ್ಲಿ ಇದ್ದಾರೆ.
ಇತ್ತೀಚೆಗೆ ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸ್ನೇಕ್ ಶ್ಯಾಮ್ ದರ್ಶನ್ ಅವರ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಮಾಡಿರುವ ಒಂದು ತಪ್ಪನ್ನು ಅವರ ಅರಿವಿಗೆ ತಂದಿದ್ದೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ, ವಿಷ್ಣುವರ್ಧನ್, ಜಗ್ಗೇಶ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಹಾಗಿದ್ದರೆ, ದರ್ಶನ್ ಬಗ್ಗೆ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

"ನಮ್ಮ ಧ್ರುವ್ ಕುಮಾರ್ ಅವರು ಹಾಲು ಕರೆಯುವ ಸ್ಪರ್ಧೆಗೆ ದರ್ಶನ್ ಅವರನ್ನು ಕರೆಸುತ್ತಿದ್ದರು. ಆಗ ವೇದಿಕೆ ಮೇಲೆ ಭೇಟಿ ಆದ್ವಿ. ಆಮೇಲೆ ದರ್ಶನ್ ಅವರಿಗೆ ಆಕ್ಸಿಡೆಂಟ್ ಆಯ್ತು. ಆಗ ಕೊಲಂಬಿಯಾ ಏಷ್ಯಾಗೆ ಅಡ್ಮಿಟ್ ಆಗಿರುತ್ತಾರೆ. ನಾನು ನೋಡುವುದಕ್ಕೆ ಹೋಗಿದ್ದೆ. ಆಗ ಅವರು ಕೈ ಮುರಿದುಕೊಂಡು ಮಲಗಿದ್ದರು. ಆಗ ನಾನು ಒಂದೇ ಮಾತು ಹೇಳುತ್ತೇನೆ. ಅಣ್ಣ ಏನೂ ತಲೆ ಕೆಡಿಸಿಕೊಳ್ಳಬೇಡ. ದೇವರು ಇದ್ದಾನೆ. ಒಂದು ತಪ್ಪು ಮಾಡಿದ್ದೀಯ ಅಂತ ಹೇಳಿದೆ. ದಯವಿಟ್ಟು ಶಿರಡಿಗೆ ಹೋಗಿ ಬನ್ನಿ ಅಂತ ಹೇಳಿದೆ. ಹೊರ ಬಂದಾಗ ವಿಜಯಲಕ್ಷ್ಮಿ ಮೇಡಂ ಕೂತಿದ್ದರು. ಅವರಿಗೂ ಹೇಳಿದೆ. ಮೇಡಂ ದಯವಿಟ್ಟು ಶಿರಡಿ ಹೋಗಿ ಬನ್ನಿ ಎಲ್ಲಾ ಒಳ್ಳೆಯದಾಗುತ್ತೆ ಅಂತ ಹೇಳಿದೆ. ಅದು ಅವರಿಗೆ ಗೊತ್ತಾಯ್ತೋ ಇಲ್ವೋ.. ಶಿರಡಿಗೆ ಹೋಗಿಯೇ ಇಲ್ಲ. ನನ್ನ ಪ್ರಕಾರ ವಿಜಯಲಕ್ಷ್ಮಿ ಅವರು ಹೋಗಿರಲ್ಲ. ದರ್ಶನ್ ಅವರೂ ಹೋಗಿರಲ್ಲ."
"ಶಿರಡಿಗೆ ಹೋಗಿ ಬಂದರೆ, ಮಂತ್ರಾಲಯಕ್ಕೆ ಹೋಗಿ ಬಂದರೆ ಒಳ್ಳೆಯದಾಗುತ್ತೆ. ಯಾಕಂದ್ರೆ, ಯಾರು ಕೈ ಬಿಟ್ಟರು ಗುರುಗಳು ಕೈ ಬಿಡೋದಿಲ್ಲ. ಅದಕ್ಕೆ ಗುರುವಾರದ ದಿನ ಯಾರೇ ಗುರುಗಳು ಸಿಕ್ಕರೂ ಕಾಲಿಗೆ ನಮಸ್ಕಾರ ಮಾಡುತ್ತೇನೆ. ಹೋಗಿರದೆ ಇದ್ದರೆ, ಈಗ ಹೋಗಿ ಬಂದರೆ ಒಳ್ಳೆಯದಾಗುತ್ತೆ." ಎಂದು ಸ್ನೇಕ್ ಶ್ಯಾಮ್ ಹೇಳಿದ್ದಾರೆ.
"ನಿಶ್ಯಬ್ದ ಸಿನಿಮಾದ ಶೂಟಿಂಗ್ ನಡೀತಾ ಇರುತ್ತೆ. ನಾನೊಂದು ಹಾವು ಹಿಡಿಯುವುದಕ್ಕೆ ಹೋಗುತ್ತಿರುತ್ತೇನೆ. ಅಲ್ಲಿ ಶಿವ ಅಂತ ಸೈಡ್ ಆಕ್ಟರ್ಗಳನ್ನೆಲ್ಲ ಕಳಿಸುತ್ತಾನೆ. ಅವನು ಶ್ಯಾಮ್ ಬಾಯ್ ಬಾಸ್ ಬರುತ್ತಿದ್ದಾರೆ ಅಂದ. ನಾನು ಗಾಡಿಯನ್ನು ಸೈಡ್ಗೆ ಹಾಕಿ ನಿಂತುಕೊಳ್ಳುತ್ತೇನೆ. ಒಂದು ಆಟೋ ನಿಂತಿರುತ್ತೆ. ಎಲ್ಲರೂ ಬರುತ್ತಾರೆ. ಒಂದು ಜೀಪ್ ಬರುತ್ತೆ. ಅಣ್ಣ ಇಳಿಯುತ್ತಾರೆ. ಗ್ರೀನ್ ಅಂಡ್ ಗ್ರೀನ್ ಡ್ರೆಸ್. ಕೂಲಿಂಗ್ ಗ್ಲಾಸ್ ಹಾಕಿರುತ್ತಾರೆ. ಬಾಬು ಏನಿದು ತುಂಬಾ ಜನರಿದ್ದಾರೆ ಎಂದು ದಿನೇಶ್ ಬಾಬುಗೆ ಕೇಳ್ತಾರೆ. ಸರ್ ಸ್ನೇಕ್ ಶ್ಯಾಮ್ ಬಂದಿದ್ದಾರೆ ಅಂದರು. ಅದಕ್ಕೆ ಅವರು ಕರಿಯಿರಿ ಎಂದರು. ಹೆಗಲ ಮೇಲೆ ಕೈ ಹಾಕಿ, ನಿಮ್ಮ ಬಗ್ಗೆ ತುಂಬಾ ಓದಿದ್ದೀನಿ. ಬಾರಿ ಖುಷಿ ಆಯ್ತು ನನಗೆ ಅಂದರು. ಕಾಲಿಗೆ ನಮಸ್ಕಾರ ಮಾಡುವುದಕ್ಕೆ ಹೋದೆ. ಕಾಲಿಗೆಲ್ಲ ನಮಸ್ಕಾರ ಮಾಡಬೇಡಿ ಅಂದರು. ಬೇಜಾರು ಇಲ್ಲ ಅಂದ್ರೆ ಫೋನ್ ನಂಬರ್ ಕೊಡುತ್ತೀರಾ ಅಂತ ಕೇಳಿದೆ. ಅಲ್ಲೇ ಬರೆದು ಕೊಡುತ್ತಾರೆ. ನಾನು ಅವರಿಗೆ ಫೋನ್ ಮಾಡುವುದಿಲ್ಲ. ಅವರು ಹುಟ್ಟಿದ ಹಬ್ಬದ ದಿನ ಫೋನ್ ಮಾಡುತ್ತೇನೆ. ಆಗ ಭಾರತಿ ಅಮ್ಮ ಫೋನ್ ಎತ್ತಿದರು. ಪೂಜೆಯಲ್ಲಿ ಇದ್ದಾರೆ. ಆಮೇಲೆ ಪೋನ್ ಮಾಡಿಸಲೇ ಎಂದರು. ಆಮೇಲೆ ಅವರೇ ಫೋನ್ ಮಾಡಿದರು. ಹುಟ್ಟುಹಬ್ಬದ ಶುಭಾಶಯ ಹೇಳಿದೆ." ಎಂದು ಸ್ನೇಕ್ ಶ್ಯಾಮ್ ನೆನಪಿಸಿಕೊಂಡಿದ್ದಾರೆ.
"ಜಗ್ಗೇಶ್ ಅವರು ಪ್ರತಿವರ್ಷ ಅವರ ಚೌಟ್ರಿಯಲ್ಲಿ ದುರ್ಗ ಹೋಮ ಮಾಡಿಸುತ್ತಾರೆ. ಪ್ರತಿವರ್ಷ ಕರೆಸುತ್ತಾರೆ. ಪೂಜೆ ಮಾಡಿಸುತ್ತಾರೆ. ಜಗ್ಗೇಶ್ ಅಣ್ಣ ಬಂದಾಗ ಏನು ಕೆಲಸ ಆಗಬೇಕು ಅಂದರು. ದನದ ಕೊಟ್ಟಿಗೆ ಆಗಬೇಕು ಅಂದರೆ, ಎಷ್ಟಾಗುತ್ತೆ ಅಂದರು? ಗೊತ್ತಿಲ್ಲ ಕಾಂಟ್ರ್ಯಾಕ್ಟರ್ ಕೇಳಿ ಹೇಳುತ್ತೇನೆ ಅಂದೆ, ಅವರು 80 ಸಾವಿರ ಅಂದರು. ತಕ್ಷಣ ಹಾಕಿದರು. ದನದ ಕೊಟ್ಟಿಗೆ ನೆಲ ಮಾಡಿಸಿಕೊಟ್ಟಿದ್ದು ಅವರು" ಎನ್ನುತ್ತಾರೆ ಸ್ನೇಕ್ ಶ್ಯಾಮ್.


Click it and Unblock the Notifications