Niveditha Apology: ನವಿಲುಗರಿ ಕಟ್ಟಿ ಕುಣಿದಿದ್ದ ನಿವೇದಿತಾ ಗೌಡಗೆ ಸಂಕಷ್ಟ; "ತನಿಖೆಗೆ ಸಹಕರಿಸುತ್ತಿದ್ದೇವೆ" ಗೊಂಬೆ
ಸೋಶಿಯಲ್ ಮೀಡಿಯಾದ ಬಾರ್ಬಿ ಡಾಲ್ ನಿವೇದಿತಾ ಗೌಡ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ವಿಡಿಯೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆ ವಿಡಿಯೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡೋದು ಕಾಮನ್. ಕೆಲವೊಮ್ಮೆ ನೆಗೆಟಿವ್ ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಅವರ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡುತ್ತಿದ್ದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿವೇದಿತಾ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದರು.
ಕಳೆದ ಎರಡು ಮೂರು ದಿನಗಳ ಹಿಂದೆ ನಿವೇದಿತಾ ಗೌಡ ಡ್ಯಾನ್ಸರ್ ಕಿಶನ್ ಜೊತೆ ಸೇರಿ ಒಂದು ವಿಡಿಯೋ ಮಾಡಿದ್ದರು. ಕಲರ್ಫುಲ್ ಡ್ರೆಸ್ ಧರಿಸಿ, ಜೊತೆ ನವಿಲುಗರಿಯನ್ನು ಸಿಕ್ಕಿಸಿಕೊಂಡು ಇಬ್ಬರೂ ಹಜ್ಜೆ ಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದಕ್ಕೆ ತಿರುಗಿತ್ತು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಇವರ ವಿರುದ್ಧ ದೂರನ್ನು ನೀಡಿದ್ದರು.

ಈ ಬೆನ್ನಲ್ಲೇ ವಿಡಿಯೋವನ್ನು ಡಿಲೀಟ್ ಮಾಡಿ ನಿವೇದಿತಾ ಗೌಡ ಹಾಗೂ ಕಿಶನ್ ಬೆಳಗಲಿ ಕ್ಷಮೆಯನ್ನು ಕೇಳಿದ್ದಾರೆ. ನವಿಲುಗರಿಯನ್ನು ಬಳಸಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ತಪ್ಪು ಅನ್ನೋದು ಗೊತ್ತಿರಲಿಲ್ಲ ಎಂದು ಕ್ಷಮೆ ಕೇಳಿ ವಿಡಿಯೋ ಮಾಡಿದ್ದಾರೆ. ನಿವೇದಿತಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಡಿಲೀಟ್ ಮಾಡಿದ್ದು ಕ್ಷಮೆ ಕೇಳಿದ್ದಾರೆ.
"ನಮಗೆ ಅರಿವಿರಲಿಲ್ಲ"
ನಿವೇದಿತಾ ಗೌಡ ಹಾಗೂ ಕಿಶನ್ ಬೆಳಗಲಿ ಇಬ್ಬರೂ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದ 'ಕಲಾವಿದ' ಸಿನಿಮಾದ "ಹೇ ನವಿಲೇ.." ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವೇಳೆ ನವಿಲುಗರಿಯನ್ನು ತಂದು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಅದೇ ಅವರಿಗೆ ಈ ತಲೆ ನೋವಾಗಿದೆ. ಇವರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ನಿವೇದಿತಾ ಗೌಡ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಕ್ಷಮೆ ಕೇಳಿದ್ದಾರೆ.
"ಇತ್ತೀಚೆಗೆ ನಾನು ಮತ್ತು ಕಿಶನ್ ಒಂದು ವಿಡಿಯೋ ಮಾಡಿದ್ವಿ. ಅದು ವೈರಲ್ ಕೂಡ ಆಗಿತ್ತು. ಅಲ್ಲಿ ನಾವು ನವಿಲುಗರಿಯನ್ನು ಬಳಸಿದ್ವಿ. ಅದನ್ನು ಬಳಸುವಾಗ ನಮಗೆ ಗೊತ್ತಿರಲಿಲ್ಲ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ನವಿಲುಗರಿಯನ್ನು ಬಳಸುವುದು ಅಪರಾಧವೆಂದು ನಮ್ಮ ಅರಿವಿಗೆ ಇರಲಿಲ್ಲ. ನಾಲ್ಕೈದು ತಂಡಗಳು ಸೇರಿ ಈ ವಿಡಿಯೋವನ್ನು ಮಾಡಿದ್ವಿ. ಈಗ ನಮಗೆ ಅದು ತಪ್ಪು ಎಂದು ಗೊತ್ತಾಗಿದೆ." ಎಂದು ನಿವೇದಿತಾ ಗೌಡ ಕ್ಷಮೆ ಕೇಳಿದ್ದಾರೆ.
"ತನಿಖೆಗೆ ಸಹಕರಿಸುತ್ತಿದ್ದೇವೆ"
ಹಾಗೇ ಕ್ಷಮೆ ಕೇಳುವುದರ ಜೊತೆಗೆ ತನಿಖೆಗೂ ಸಹಕರಿಸುತ್ತಿದ್ದೇವೆ ಎಂದು ವಿಡಿಯೋದಲ್ಲಿ ನಿವೇದಿತಾ ಹೇಳಿದ್ದಾರೆ. "ನವಿಲು ನಮ್ಮ ರಾಷ್ಟ್ರ ಪಕ್ಷಿ. ಇದನ್ನು ವನ್ಯ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಹಾಗೇ ಇಂತಹ ವನ್ಯ ಜೀವಿಗಳನ್ನು, ಪ್ರಾಣಿಗಳ ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ. ನಾವೂ ಹೀಗೆ ಮಾಡಿದ್ದಕ್ಕೆ ಕ್ಷಮೆಯನ್ನು ಕೇಳುತ್ತೇವೆ. ನೀವು ಕೂಡ ಇಂತಹ ವನ್ಯಜೀವಿಗಳನ್ನು ಬಳಸಿಕೊಂಡು ವಿಡಿಯೋ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಹಾಗೇ ನಾವು ನಡೆಯುತ್ತಿರುವ ತನಿಖೆಗೆ ಸಹಕಾರವನ್ನು ನೀಡುತ್ತಿದ್ದೇವೆ." ಎಂದಿದ್ದಾರೆ ನಿವೇದಿಯಾ ಗೌಡ.
ಇನ್ನು ಕಿಶನ್ ಕೂಡ ಬಾಡಿಗೆಗೆ ತಂದ ನವಿಲುಗಿರಿಯೂ ವನ್ಯ ಜೀವಿ ಕಾಯ್ದೆ ಅಡಿ ಅಪರಾಧ ಅನ್ನೋದು ಗೊತ್ತಿರಲಿಲ್ಲವೆಂದು ಕ್ಷಮೆ ಹೇಳಿದ್ದಾರೆ. ಇನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದಲೇ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.


Click it and Unblock the Notifications
