"ಏ ಏನಮ್ಮ ಬೇಜಾರು ಮಾಡಿಕೊಳ್ಳುತ್ತೀಯಾ? ಆರಾಮಾಗಿ ಇರೋಣ" ಎಂದಿದ್ದ ಸೌಂದರ್ಯ ಜಗದೀಶ್
ಕನ್ನಡದ ನಿರ್ಮಾಪಕ ಹಾಗೂ ಬಿಲ್ಡರ್ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಏಪ್ರಿಲ್ 14) ಬೆಳಗ್ಗೆ ನೇಣಿಗೆ ಶರಣಾಗಿದ್ದು, ಕನ್ನಡ ಚಿತ್ರರಂಗಕ್ಕೆ ಈ ಸುದ್ದಿ ಅಘಾತ ತಂದಿದೆ. ಸೌಂದರ್ಯ ಜಗದೀಶ್ ಇತ್ತೀಚೆಗೆ ಸಿನಿಮಾ ನಿರ್ಮಾಣ ಮಾಡದೇ ಇದ್ದರೂ, ಚಿತ್ರರಂಗದ ಜೊತೆ ನಿರಂತರ ಒಡನಾಟವನ್ನು ಇಟ್ಟುಕೊಂಡಿದ್ದರು.
ಬಿಲ್ಡಡ್ ಆಗಿದ್ದರೂ ಸಿನಿಮಾಗಳ ಮೇಲೆ ಹೆಚ್ಚು ಒಲವು ಇತ್ತು. ತಮ್ಮ ಪುತ್ರನನ್ನು ಸಿನಿಮಾರಂಗದಲ್ಲಿ ಬೆಳೆಸುವುದಕ್ಕೆ ಪ್ರಯತ್ನ ಪಟ್ಟಿದ್ದರು. ಹೀಗಾಗಿ ಮಗನಿಗಾಗಿಯೇ 'ಅಪ್ಪು ಪಪ್ಪು' ಅಂತಹ ಸಿನಿಮಾ ಕೂಡ ಮಾಡಿದ್ದರು. ಜೊತೆಗೆ 'ಮಸ್ತ್ ಮಜಾ ಮಾಡಿ' ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದರು. ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವಿದ್ದರೂ ಸಿನಿಮಾ ಮಂದಿ ಜೊತೆ ಸಂಪರ್ಕದಲ್ಲಿದ್ದರು.

ಉಪೇಂದ್ರ, ದರ್ಶನ್, ಅಮೂಲ್ಯ ಕುಟುಂಬ ಸೇರಿದಂತೆ ಚಿತ್ರರಂಗದ ಹಲವು ಗಣ್ಯರೊಂದಿಗೆ ಸೌಂದರ್ಯ ಜಗದೀಶ್ ಉತ್ತಮ ಬಾಂಧವ್ಯ ಹೊಂದಿದ್ದರು. ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿ ಕೇಳಿ ನಟಿ ಅಮೂಲ್ಯ ಭಾವುಕರಾಗಿದ್ದಾರೆ. ತಮ್ಮ ಸಿನಿಮಾದ ನಿರ್ಮಾಪಕ ಹಾಗೂ ಆತ್ಮೀಯರಾಗಿದ್ದ ಸೌಂದರ್ಯ ಜಗದೀಶ್ ಬಗ್ಗೆ ಅಮೂಲ್ಯ ಭಾವುಕರಾಗಿದ್ದಾರೆ.
ಇತ್ತೀಚೆಗಷ್ಟೇ ಸೌಂದರ್ಯ ಜಗದೀಶ್ ಮಗಳ ಮದುವೆ ಮಾಡಿದ್ದರು. ಆ ಮದುವೆಯಲ್ಲಿ ಅಮೂಲ್ಯ ಹಾಗೂ ಪತಿ ಜಗದೀಶ್ ಅವರೊಂದಿಗೆ ಕೂತು ಎರಡು ಮೂರು ಗಂಟೆ ಮಾತಾಡಿದ್ದರು. ಆ ಘಳಿಗೆಯನ್ನು ಅಮೂಲ್ಯ ನೆನಪಿಸಿಕೊಂಡಿದ್ದಾರೆ. "ಮೊನ್ನೆ ತಾನೇ ಬೀಗರ ಊಟದಲ್ಲಿ ಸುಮಾರು ಎರಡರಿಂದ ಮೂರು ಗಂಟೆ ನಾವು ಕೂತು ಮಾತಾಡಿದ್ದೇವು. ಅವರು ನಗಾಡುತ್ತಾ ಏ ಏನಮ್ಮ ಬೇಜಾರು ಮಾಡಿಕೊಳ್ಳುತ್ತೀಯಾ? ಆರಾಮಾಗಿ ಇರೋಣ. ಆತರ ಸ್ಪೋಟಿವ್ ಆಗಿ ಇದ್ದರು. ನನಗೆ ಅಂಕಲ್ ಇಲ್ಲ ಅಂತ ಯೋಚನೆ ಸಹ ಮಾಡೋಕೆ ಆಗುತ್ತಿಲ್ಲ." ಎಂದು ಅಮೂಲ್ಯ ಹೇಳಿದ್ದಾರೆ.

ಸೌಂದರ್ಯ ಜಗದೀಶ್ ಯಾವಾಗಲೂ ಪಾಸಿಟಿವ್ ಆಗಿ ಇರುತ್ತಿದ್ದ ವಿಷಯವನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ತನಗೆ ಅಣ್ಣನ ಸ್ಥಾನದಲ್ಲಿ ಇದ್ದರು ಎಂದೂ ಹೇಳಿಕೊಂಡಿದ್ದಾರೆ. "ನನಗೆ ಅವರು ಅಣ್ಣನ ಸ್ಥಾನದಲ್ಲೇ ಇದ್ದಿದ್ದು. ನಾನು ಜಗ್ಗಿ ಮದುವೆ ಆದ್ಮೇಲೆ ಊಟಕ್ಕೆ ಇಟ್ಟುಕೊಂಡಾಗ ಅದನ್ನೇ ಹೇಳುತ್ತಿದ್ದರು. ನಾನೊಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ. ನೀನು ತುಂಬಾ ಚೆನ್ನಾಗಿ ಇರಬೇಕು. ಖುಷಿಯಾಗಿ ಇರಬೇಕು ಅಂತ ಹೇಳುತ್ತಿದ್ದರು. ನನಗೆ ಉದಯ್ ಮೆಹ್ತಾ ಸರ್ ಅವರೇ ಜಗದೀಶ್ ಅಂಕಲ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು." ಎಂದಿದ್ದಾರೆ.
ಅಮೂಲ್ಯ ವಿವಾಹದ ವೇಳೆ ಸೌಂದರ್ಯ ಜಗದೀಶ್ ಇಬ್ಬರನ್ನು ಹರಸಿದ್ದರು. ತುಂಬಾ ಒಳ್ಳೆಯ ಹುಡುಗಿ ನೀನು ಚೆನ್ನಾಗಿರಬೇಕು ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. "ನಾನು, ಜಗದೀಶ್, ಅಂಕಲ್ ಮೂರೇ ಜನ ಇದ್ದಿದ್ದು, ನೀನು ಚೆನ್ನಾಗಿ ಇರಬೇಕಮ್ಮ. ತುಂಬಾ ಒಳ್ಳೆಯ ಹುಡುಗಿ ನೀನು. ನೀವು ತುಂಬಾ ಖುಷಿಯಾಗಿ ಇರಬೇಕೆಂದು ಹಾರೈಸಿದ್ದರು. ಅದು ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಅವರು ನಮ್ಮ ಜೊತೆಗೆ ಇದ್ದಿದ್ದನ್ನು ನಾನು ಎಂದಿಗೂ ಮರೆಯೋದಿಲ್ಲ. ನಮ್ಮ ಫ್ಯಾಮಿಲಿಯಲ್ಲಿ ಒಬ್ಬರಾಗಿದ್ದರು. ನಮ್ಮ ಕಷ್ಟ ಸುಖಕ್ಕೆ ಒಬ್ಬರಾಗಿದ್ದಾರೆ. " ಎಂದು ಅಮೂಲ್ಯ ಹೇಳಿದ್ದಾರೆ.


Click it and Unblock the Notifications











