'ನಾನು ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ': ಪೂಜಾ ಹೆಗ್ಡೆ
ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ಅಂದರೆ ಅಲ್ಲೊಂದು ಸಂಭ್ರಮವಿರುತ್ತೆ. ಬರೀ ಪ್ರಶಸ್ತಿ ನೀಡುವುದಷ್ಟೇ ಅಲ್ಲ. ಇತ್ತ ಪಡೆದುಕೊಳ್ಳುವುದೂ ಅಲ್ಲ. ಸಿನಿಪ್ರಿಯರನ್ನು ನಗೆಗಡಲಲ್ಲಿ ತೇಲಿಸುವ ಮನರಂಜನೆ ಕಾರ್ಯಕ್ರಮವೂ ಇರುತ್ತೆ. ವರ್ಷಕ್ಕೊಮ್ಮೆ ದಕ್ಷಿಣ ಭಾರತದ ದಿಗ್ಗಜರೆಲ್ಲ ಒಟ್ಟಿಗೆ ಸೇರುವ ಅಪರೂಪದ ವೇದಿಕೆ ಇದು. ಇಂತಹ ಅದ್ಧೂರಿ ಸಮಾರಂಭ 66 ವರ್ಷದ ಬಳಿಕ ಬೆಂಗಳೂರಿನಲ್ಲಿ ಜರುಗಲಿದೆ.
ಪ್ರತಿಷ್ಟಿತ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ಆರೂವರೆ ದಶಕದ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದೇ ಮಾರ್ಚ್ ತಿಂಗಳಲ್ಲಿ ಎರಡು ದಿನಗಳ ಕಾಲ 67ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ಸಮಾರಂಭ ನಡೆಯಲಿದೆ. ಫಿಲ್ಮ್ ಫೇರ್ ಜೊತೆ ಕಮರ್ ಫಿಲಂ ಫ್ಯಾಕ್ಟರಿ ಸೇರಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ಕಾರ್ಯಕ್ರಮದ ರಾಯಭಾರಿಯಾಗಿ ಸೌತ್ ಬ್ಯೂಟಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ಬೆಂಗಳೂರಿಗೆ ಆಗಮಿಸಿ, ಕರ್ನಾಟಕದ ಜೊತೆಗಿನ ನಂಟಿನ ಬಗ್ಗೆ ಮಾತಾಡಿದ್ದಾರೆ.
'ನನಗೆ ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತೆ'
2022 ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸೌತ್ ಫಿಲಂ ಫೇರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭರಪೂರ ಮನರಂಜನೆ ಇರಲಿದೆ. ಇದೇ ವೇಳೆ ದಕ್ಷಿಣದ ತಾರೆಯರ ಮಹಾ ಸಂಗಮವೇ ಆಗಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಫಿಲಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಪೂಜಾ ಹೆಗ್ಡೆ ಭಾಗವಹಿಸಲಿದ್ದು, ಬೆಂಗಳೂರಿನಲ್ಲಿ ಫಿಲಂಫೇರ್ ಸೌತ್ ಸಮಾರಂಭ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

"ಈಗ ಎಲ್ಲರೂ ನನ್ನನ್ನು ಪೂಜಾ ಅಂತ ಕರೆಯುವುದಕ್ಕಿಂತ ಹೆಚ್ಚಾಗಿ ಪುಟ್ಟಬೊಮ್ಮ ಎಂದು ಕರೆಯುತ್ತಿದ್ದಾರೆ. ನಾನು ಈ ಫಿಲಂ ಫೇರ್ನಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಮಂಗಳೂರಿನವಳು. ಆದರೆ ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ನಾನು ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ." ಎಂದು ಈ ಸಂದರ್ಭದಲ್ಲಿ ಪೂಜಾ ಹೆಗ್ಡೆ ಹೇಳಿದ್ದಾರೆ.

"ಫಿಲಂಫೇರ್ ಕಲಾವಿದರ ಹಾಗೂ ತಂತ್ರಜ್ಞರ ಪ್ರತಿಭೆಗಳನ್ನು ಗುರುತಿಸುವ ಉತ್ತಮ ವೇದಿಕೆ. ನಾನು ಚಿಕ್ಕವಳಿದ್ದಾಗ ನನ್ನ ತಂದೆ, ತಾಯಿಯೊಂದಿಗೆ ಫಿಲಂಫೇರ್ ನೋಡಲು ಹೋಗಿದ್ದೆ. ಹೈದರಾಬಾದ್ನ ನಮ್ಮ ಕುಟುಂಬದ ಸ್ನೇಹಿತರೊಬ್ಬರು ಪಾಸ್ ವ್ಯವಸ್ಥೆ ಮಾಡಿದ್ದರು. ಈಗ ಅದೇ ಫಿಲಂಫೇರ್ನಲ್ಲಿ ನಾನು ಭಾಗವಹಿಸುತ್ತಿರುವುದಕ್ಕೆ ಅತೀವ ಸಂತೋಷ ಆಗುತ್ತಿದೆ." ಎಂದು ಬೆಂಗಳೂರಿನಲ್ಲಿ ನಡೆಯಲಿರುವ ಫಿಲಂಫೇರ್ ಸಮಾರಂಭಕ್ಕೆ ಪೂಜಾ ಹೆಗ್ಡೆ ಶುಭ ಹಾರೈಸಿದ್ದಾರೆ.
ಫಿಲ್ಮ್ ಫೇರ್ ಸಂಪಾದಕ ಜಿತೇಶ್ ಪಿಳ್ಳೈ, ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಈ ಸಂಬಂಧ ಪತ್ರಿಕಾಗೋಷ್ಟಿಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟಿ ತಾರಾ ಅನುರಾಧ ಭಾಗವಹಿಸಿದ್ದರು. "ಪ್ರತಿಭಾವಂತ ಕಲಾವಿದರ ಹಾಗೂ ತಂತ್ರಜ್ಞರ ಮಹಾ ಸಮ್ಮಿಲನವಾಗುವ ವೇದಿಕೆಯೇ ಈ ಫಿಲಂ ಫೇರ್ ಪ್ರಶಸ್ತಿ ಸಮಾರಂಭ. 66 ವರ್ಷಗಳ ಬಳಿಕ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರೋದು ಸಂತೋಷ ತಂದಿದೆ." ನಟಿ ತಾರಾ ಅನುರಾಧ ಹಾರೈಸಿದ್ದಾರೆ.
ಫಿಲಂಫೇರ್ ಪ್ರಶಸ್ತಿ ಆರಂಭ ಆದಲ್ಲಿಂದ ಬೆಂಗಳೂರಿನಲ್ಲಿ ಈ ಪ್ರಶಸ್ತಿ ಸಮಾರಂಭ ನಡೆದಿಲ್ಲ. ಕಳೆದ ಬಾರಿ ಈ ಸಮಾರಂಭ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಸಲ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸಿನಿಪ್ರಿಯರಿಗೆ ಸಂತಸ ತಂದಿದೆ. 2022ರ ಮಾರ್ಚ್ನಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ಈ ಸಮಾರಂಭ ನಡೆಯಲಿದೆ. ದಕ್ಷಿಣ ಭಾರತದ ದಿಗ್ಗಜರೆಲ್ಲರೂ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಹೊಸ ವರ್ಷದಲ್ಲಿ ಫಿಲಂಫೇರ್ ಪ್ರಶಸ್ತಿ ಹೊಸ ಮೆರುಗು ನೀಡಲಿದೆ.


Click it and Unblock the Notifications











