Spandana Vijay Raghavendra: ಅಗಲಿದ ಸ್ಪಂದನಾಗೆ ಉತ್ತರ ಕ್ರಿಯೆ.. 11ನೇ ದಿನ ಕಾರ್ಯದ ವಿಧಿವಿಧಾನಗಳೇನು?
ಸ್ಯಾಂಡಲ್ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. 11 ದಿನಗಳ ಹಿಂದಷ್ಟೇ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇದು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬ ಹಾಗೂ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು.
ಸ್ಪಂದನಾ ಸಂಬಂಧಿಗಳೊಂದಿಗೆ ಬ್ಯಾಂಕಾಕ್ಗೆ ತೆರಳಿದ್ದರು. ಕೆಲವು ದಿನಗಳ ಅಲ್ಲೇ ಆತ್ಮೀಯರೊಂದಿಗೆ ಸುತ್ತಾಟ ನಡೆಸಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗಬೇಕು ಅನ್ನುವಾಗಲೇ (ಆಗಸ್ಟ್ 6) ಹೃದಯಾಘಾತವಾಗಿತ್ತು. ಆಸ್ಪತ್ರೆ ದಾಖಲಿಸಿದರೂ ಸ್ಪಂದನಾ ಬದುಕಿ ಬರಲಿಲ್ಲ.

ಸ್ಪಂದನಾ ಅಗಲಿ ಇಂದಿಗೆ (ಆಗಸ್ಟ್ 16) 11 ದಿನಗಳಾಗಿವೆ. ಹೀಗಾಗಿ ಸ್ಪಂದನಾ ಕುಟುಂಬ ಉತ್ತರಕ್ರಿಯೆ ಕಾರ್ಯವನ್ನು ಮಾಡುತ್ತಿದೆ. ಬೆಳಗ್ಗೆಯಿಂದಲೇ ಕಾರ್ಯಗಳು ಆರಂಭ ಆಗಿವೆ. ಶಾಂತಿ ಹೋಮವನ್ನು ನಡೆಸಲಾಗುತ್ತಿದೆ. ಬಳಿಕ ಕೋದಂಡರಾಮಪುರದ ಯಂಗ್ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಮತ್ತೆ ಪೂಜೆಯನ್ನು ಸಲ್ಲಿಸಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಸ್ಪಂದನಾ ಉತ್ತರ ಕ್ರಿಯೆ ಬಗ್ಗೆ ಮಾವ ಶೇಖರ್ ಬಂಗೇರ ಮಾಧ್ಯಮಕ್ಕೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೊದಲ ಕಾಗೆಗೆ ಅನ್ನ ಇಡುವ ಕಾರ್ಯಕ್ರಮ ನಡೆಯಲಿದೆ. ತರಕಾರಿಯಲ್ಲೇ ಖಾದ್ಯವನ್ನು ಸಿದ್ದಪಡಿಸಲಾಗುತ್ತೆ. ಹಾಗೇ ಸ್ಪಂದನಾ ಇಷ್ಟ ಪಡುತ್ತಿದ್ದ ಖಾದ್ಯವನ್ನು ಮಾಡಲಾಗುತ್ತೆ. ಬಳಿಕ ಪ್ರಾರ್ಥನೆ ಮಾಡಿ, ಕಾಗೆ ಖಾದ್ಯವನ್ನು ಇಡಲಾಗುತ್ತೆ. ಮನೆಯಲ್ಲಿ ಪೂಜೆ ಮುಗಿದ ಬಳಿಕ ಮಧ್ಯಾಹ್ನ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೋದಂಡರಾಮಪುರದ ಆಟದ ಮೈದಾನದಲ್ಲೂ ಸ್ಪಂದನಾ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತೆ. ಸಾರ್ವಜನಿಕರು ಹಾಗೂ ವಿವಿಐಪಿಗಳಿಗೂ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಸ್ಪಂದನಾ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದ ಬಳಿಕ ಭೋಜನ ಸ್ವೀಕರಿಸಲು ಅವಕಾಶವನ್ನು ಮಾಡಿಕೊಡಲಾಗಿದೆ.
ಸಾರ್ವಜನಿಕರಿಗೆ ಹಾಗೂ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ಪಂದನಾ ತಂದೆ ಬಿಕೆ ಶಿವರಾಂ ಹಾಗೂ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಈ ವ್ಯವಸ್ಥೆಯನ್ನು ಮಾಡಿದ್ದಾರೆ.
ಮಧ್ಯಾಹ್ನದ ಭೋಜನದ ಬಳಿಕ ರಾತ್ರಿನೂ ಕಾರ್ಯವಿರುತ್ತೆ. ಸಂಪ್ರದಾಯದ ಪ್ರಕಾರ, ಕೋಳಿ ಖಾದ್ಯ ಮತ್ತು ಪುಂಡಿ ಇಡಲಾಗುತ್ತೆ. ಬಳಿಕ ಹೊರಗಡೆ ಇರುವ ಸ್ಪಂದನಾ ಆತ್ಮವನ್ನು ರಾತ್ರಿ ಮನೆಯೊಳಗೆ ಕರೆಸಲಾಗುತ್ತೆ. ಕೆಲವು ವಿಧಿ ವಿಧಾನವಿದ್ದು, ಆತ್ಮಕ್ಕೆ ಶಾಂತಿಯನ್ನು ಕೋರಲಾಗುತ್ತೆ. ಇಷ್ಟು ವಿಧಿ ವಿಧಾನಗಳು 11ನೇ ದಿನ ಕಾರ್ಯದಲ್ಲಿ ನಡೆಯಲಿದೆ.


Click it and Unblock the Notifications










