ಶ್ರೀಮುರಳಿ 'ಮದಗಜ' ಸಿನಿಮಾ ಗೆದ್ದಿದೆಯಾ..? ಸೋತಿದ್ಯಾ?: ಏನ್ ಹೇಳುತ್ತೆ ಬಾಕ್ಸಾಫೀಸ್ ರಿಪೋರ್ಟ್?
ಭರ್ಜರಿ ಸಿನಿಮಾ ಬಳಿಕ ರೋರಿಂಗ್ ಶ್ರೀಮುರಳಿಯ ಮತ್ತೊಂದು ಮಾಸ್ ಎಂಟರ್ಟೈನರ್ ಸಿನಿಮಾ 'ಮದಗಜ' ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ಕೆಲವರಿಗೆ ಈ ಮಾಸ್ ಸ್ಟೋರಿ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಅಂದರೆ, ಮದಗಜ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಮೊದಲ ದಿನವೇ ವ್ಯಕ್ತವಾಗಿತ್ತು. ಹೀಗಾಗಿ ಮದಗಜ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಸಹಜವಾಗಿ ಸಿನಿಪ್ರಿಯರಲ್ಲಿ ಕುತೂಹಲವಿದೆ.
ಒಬ್ಬ ಸ್ಟಾರ್ ಹೀರೋ ಸಿನಿಮಾ ಬಾಕ್ಸಾಫೀಸ್ನಲ್ಲಿ ಎಷ್ಟು ಗಳಿಕೆ ಮಾಡುತ್ತೆ ಅನ್ನುವುದು ಪ್ರತಿಷ್ಟೆಯ ವಿಷಯ. ಸಿನಿಮಾ ಬಗ್ಗೆ ಯಾರು ಏನೇ ಅಂದರೂ, ಮೊದಲ ಮೂರು ದಿನ ದಾಖಲೆ ಗಳಿಕೆ ಮಾಡಿದರೆ, ಆ ಹೀರೊ ಗೆದ್ದಂತೆ. ಶ್ರೀಮುರಳಿ ಸಿನಿಮಾ 'ಮದಗಜ' ಕೂಡ ಬಾಕ್ಸಾಫೀಸ್ನಲ್ಲಿ ಚಮತ್ಕಾರ ಮಾಡುತ್ತಿದೆಯಾ? ನಿರ್ಮಾಪಕ ಜೇಬು ತುಂಬಿಸಿ ಸೇಫ್ ಮಾಡಿದೆಯಾ? ಅನ್ನುವ ಕುತೂಹಲಕ್ಕೆ ಚಿತ್ರತಂಡವೇ ತೆರೆ ಎಳೆದಿದೆ.

'ಮದಗಜ' ಎರಡನೇ ದಿನ ಗಳಿಕೆ ಎಷ್ಟು?
ರೋರಿಂಗ್ ಸ್ಟಾರ್ ಶ್ರೀಮುರಳಿ 'ಮದಗಜ' ಸಿನಿಮಾ ಮಾಸ್ ಪ್ರಿಯರಿಗೆ ಇಷ್ಟ ಆಗಿದೆ. ರೊಮ್ಯಾಂಟಿಕ್ ಸಿನಿಮಾ ಇಷ್ಟ ಪಡುವವರಿಗೆ 'ಮದಗಜ' ಅಷ್ಟಾಗಿ ಇಷ್ಟ ಆಗಿಲ್ಲ. ಹಾಗಂತ ಬಾಕ್ಸಾಫೀಸ್ನಲ್ಲಿ 'ಮದಗಜ' ಸೈಲೆಂಟ್ ಆಗಿಲ್ಲ. ಎರಡನೇ ದಿನವೂ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಫಸ್ಟ್ ಡೇ ಕಲೆಕ್ಷನ್ಗಿಂತ ಕೊಂಚ ಕಡಿಮೆ ಗಳಿಕೆ ಕಂಡಿದ್ದರೂ, ಎರಡನೇ ದಿನದ ಗಳಿಕೆ ಚೆನ್ನಾಗೇ ಇದೆ. 'ಮದಗಜ' ಕರ್ನಾಟಕದ ಗಳಿಕೆ ಸುಮಾರು 5.64 ಕೋಟಿ ರೂಪಾಯಿ ಎಂದು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.

'ಮದಗಜ' ಮೂರನೇ ದಿನದ ಗಳಿಕೆ ಹೇಗಿದೆ?
ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ಮೂರು ದಿನದ ಗಳಿಕೆ ನಿರ್ಣಾಯಕವಾಗಿರುತ್ತೆ. ಶ್ರೀಮುರಳಿಯ 'ಮದಗಜ' ಮೊದಲ ಎರಡು ದಿನ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡು ದಿನಕ್ಕೆ ಹಾಕಿದ ಅರ್ಧ ಬಂಡವಾಳ ವಾಪಸ್ ಬಂದಿದೆ. ಚಿತ್ರತಂಡ ಕೊಟ್ಟಿರುವ ಲೆಕ್ಕಾಚಾರದ ಪ್ರಕಾರ, ಸಿನಿಮಾ ಎರಡು ದಿನಗಳಲ್ಲಿ 13.46 ಕೋಟಿ ರೂಪಾಯಿ ಲೂಟಿ ಮಾಡಿದೆ. ಹೀಗಾಗಿ ಮೂರನೇ ದಿನ ಭಾನುವಾರ ಆಗಿರುವುದರಿಂದ ಸಿನಿಮಾ ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸುತ್ತೆ ಎಂದು ಅಂದಾಜಿಸಲಾಗಿದೆ. " ಎರಡು ದಿನ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೂರನೇ ದಿನ ಮೈಸೂರು, ಮಂಡ್ಯ, ಚಿತ್ರದುರ್ಗ, ಹುಬ್ಬಳ್ಳಿ, ಹರಿಹರದಲ್ಲಿ ಎಲ್ಲಾ ಶೋಗಳು ಹೌಸ್ಫುಲ್ ಆಗಿವೆ. ಹೀಗಾಗಿ ಭಾನುವಾರ ಕಲೆಕ್ಷನ್ 6 ಕೋಟಿ ರೂಪಾಯಿ ದಾಟಬಹುದು ಅಂದ್ಕೊಂಡಿದ್ದೇವೆ. ಈ ವಾರದಲ್ಲಿ ಹಾಕಿದೆ ಬಂಡವಾಳ ವಾಪಸ್ ಬರುತ್ತೆ." ಎಂದು ನಿರ್ದೇಶಕ ಎಸ್ ಮಹೇಶ್ ಕುಮಾರ್ ಫಿಲ್ಮಿ ಬೀಟ್ಗೆ ತಿಳಿಸಿದ್ದಾರೆ.

ಶ್ರೀ ಮುರಳಿ 'ಮದಗಜ' ಮೊದಲ ದಿನ ಗಳಿಕೆ ಎಷ್ಟು?
'ಮದಗಜ' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 7.82 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. 'ಮದಗಜ' ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿರುವ ಖಾತ್ರಿಯಾಗಿದೆ. ಅಲ್ಲದೆ ಈಗಾಗಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಲಾಭದಲ್ಲಿದ್ದಾರೆ ಎಂದು ಚಿತ್ರತಂಡ ಹೇಳುತ್ತಿದೆ.

ನಿರ್ಮಾಪಕರ ಜೇಬು ತುಂಬಿಸಿದೆ 'ಮದಗಜ'
'ಮದಗಜ' ನಿರ್ಮಾಪಕ ಉಮಾಪತಿ ಬಿಡುಗಡೆಗೂ ಮುನ್ನವೇ ಲಾಭದಲ್ಲಿದ್ದಾರೆ. ಡಬ್ಬಿಂಗ್ ಹಕ್ಕುಗಳು ಹಾಗೂ ಸ್ಯಾಟಲೈಟ್ ರೈಟ್ಸ್ ನಿಂದಲೇ ನಿರ್ಮಾಪಕರು ಹಾಕಿದ ಬಂಡವಾಳ ಬಂದಿದೆ. ಹೀಗಾಗಿ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಸೇಫ್ ಆಗಿದ್ದಾರೆ ಅಂತ ಚಿತ್ರತಂಡ ಹೇಳುತ್ತಿದೆ. ಇನ್ನು ಸೋಮವಾರದಿಂದ ಮದಗಜನಿಗೆ ಅಸಲಿ ಪರೀಕ್ಷೆ ಎದುರಾಗಲಿದೆ. ಮುಂದಿನ ವಾರ ಸಿನಿಮಾ ಥಿಯೇಟರ್ನಲ್ಲಿ ಕಚ್ಚಿಕೊಂಡರೆ, ಮಿಶ್ರಪ್ರತಿಕ್ರಿಯೆ ಹೊರತಾಗಿಯೂ ಸಿನಿಮಾ ಗೆದ್ದಂತೆ. ಸದ್ಯಕ್ಕೆ 'ಮದಗಜ' ಬಾಕ್ಸಾಫೀಸ್ನಲ್ಲಿ ಸ್ಟಡಿಯಾಗಿದ್ದು, ಮುಂದಿನ ಭವಿಷ್ಯ ಹೇಗಿರುತ್ತೆ? ಅನ್ನುವುದು ನೋಡಬೇಕಿದೆ.


Click it and Unblock the Notifications











