ಆಯ್ಕೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಶ್ರೀನಗರ ಕಿಟ್ಟಿ ವಾಕ್ ಔಟ್

ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಚಿತ್ರ ಸೇರಿ ಮೂರು ಭಾಷೆಯ ಚಿತ್ರಗಳು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದವು.
ಕೂರ್ಮಾವತಾರ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದ್ದು ಸಂಜೆ, ಆದರೆ ಮಧ್ಯಾಹ್ನವೇ ಚಿತ್ರ 'ಅತ್ಯುತ್ತಮ ಕನ್ನಡ ಚಿತ್ರ' ಪ್ರಶಸ್ತಿಗೆ ಆಯ್ಕೆಯಾಗಿದೆ ಎನ್ನುವ ಸುದ್ದಿ ಸೋರಿಕೆಯಾಗಿತ್ತು.
ಕೂರ್ಮಾವತಾರ ಚಿತ್ರದ ನಿರ್ಮಾಪಕರು ಬಸಂತ್ ಕುಮಾರ್ ಪಾಟೀಲ್. ಚಿತ್ರ ನಿರ್ಮಾಪಕರ ಮಗಳು ಅಮೃತಾ ಪಾಟೀಲ್ ಅವರಿಂದ ಈ ವಿಷಯ ಸೋರಿಕೆಯಾಗಿತ್ತು. ಪ್ರಶಸ್ತಿ ಘೋಷಣೆಯಾಗುವುದಕ್ಕಿಂತ ಮುಂಚೆ ವಿಷಯ ಸೋರಿಕೆಯಾಗಿದ್ದು ಹೇಗೆ ಎನ್ನುವುದು ಶ್ರೀನಗರ ಕಿಟ್ಟಿ ಕೋಪಕ್ಕೆ ಕಾರಣವಾಗಿತ್ತು.
'ಕೂರ್ಮಾವತಾರ' ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪ್ರಶಸ್ತಿ ಸ್ವೀಕರಿಸಿ ಮಾತಾಡಲು ಶುರು ಮಾಡಿದಾಗ, ಸಭಾಂಗಣದಲ್ಲಿದ್ದ ' ಬಾಲ್ಪೆನ್ ' ಚಿತ್ರದ ನಿರ್ಮಾಪಕರೂ ಆಗಿರುವ ಶ್ರೀನಗರ ಕಿಟ್ಟಿ ಮತ್ತು ಅವರ ಸ್ನೇಹಿತರು ಪ್ರಶಸ್ತಿ ಆಯ್ಕೆಯಲ್ಲಿ ಮ್ಯಾಚ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್' ಎಂದು ಘೋಷಣೆ ಕೂಗುತ್ತಾ ಸಭಾಂಗಣದಿಂದ ಹೊರ ನಡೆದರು.
ಈ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ನಟ ಪ್ರಭುದೇವ್, ಅಂಬರೀಶ್, ಗಿರೀಶ್ ಕಾಸರವಳ್ಳಿ, ಜಯಮಾಲ, ನಿರ್ಮಾಪಕ ಮುನಿರತ್ನ ಮುಂತಾದವರು ಭಾಗವಹಿಸಿದ್ದರು.
ಶ್ರೀನಗರ ಕಿಟ್ಟಿ ನಟಿಸಿ ನಿರ್ಮಿಸಿದ್ದ ಬಾಲ್ ಪೆನ್ ಚಿತ್ರ ಕೂಡಾ ಪ್ರಶಸ್ತಿ ರೇಸಿನಲ್ಲಿತ್ತು. ನನ್ನ ಚಿತ್ರಕ್ಕೆ ಪ್ರಶಸ್ತಿ ಬಂದಿಲ್ಲ ಎಂದು ನನಗೆ ಬೇಸರವಿಲ್ಲ. ಪ್ರಶಸ್ತಿ ಆಯ್ಕೆಗೆ ಮಾಡುವ ಮಾನದಂಡವೇನು? ಪ್ರಶಸ್ತಿ ಘೋಷಣೆಯಾಗುವುದಕ್ಕಿಂತ ಮುನ್ನವೇ ಆ ನಿರ್ಮಾಪಕರ ಮಗಳಿಗೆ ಗೊತ್ತಾಗಿದ್ದು ಹೇಗೆ ಎಂದು ಶ್ರೀನಗರ ಕಿಟ್ಟಿ ಬೇಸರ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











