"ಸೃಜಾ ನನಗೆ ಯಾಕೋ ಭಯ ಆಗುತ್ತಿದೆ" ಅಂತ ಅಪರ್ಣ ಹೇಳಿದ್ದಿದ್ದೇಕೆ?; ಏನದು ಘಟನೆ?
ಕನ್ನಡದ ಖ್ಯಾತ ನಿರೂಪಕಿ ಅಪರ್ಣ ನಿನ್ನೆ (ಜುಲೈ 11) ವಿಧಿವಶರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ನಿಂದ ಅಪರ್ಣ ಬಳಲುತ್ತಿದ್ದರು. ಈ ನೋವನ್ನು ತಮ್ಮೊಳಗೆ ಇಟ್ಟುಕೊಂಡು ಬದುಕಿದ್ದ ಛಲಗಾರ್ತಿ ಅರ್ಪಣ ಕೊನೆಯಲ್ಲಿ ವಿಧಿಯಾಟದ ಮುಂದೆ ಸೋಲು ಒಪ್ಪಿಕೊಂಡಿದ್ದಾರೆ. ಮೃದು ಸ್ವಭಾವದ ಅಪರ್ಣ ತನ್ನ ಅಪಾರ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ಅಪರ್ಣಗೆ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾದಾಗ ನಾಲ್ಕನೇ ಹಂತದಲ್ಲಿ ಇತ್ತು. ಆ ವೇಳೆ ವೈದ್ಯರು ಅಪರ್ಣ ಪತಿಯ ಬಳಿಕ ಇನ್ನು ಆರು ತಿಂಗಳು ಬದುಕಿದ್ರೆ ಹೆಚ್ಚು ಅಂತ ಹೇಳಿದ್ದರು. ಅದರ ಹೊರತಾಗಿಯೂ ಒಂದೂವರೆ ವರ್ಷ ಬದುಕನ್ನು ಅಪರ್ಣ ಮುಂದೂಡಿದ್ದರು. ಆದರೆ, ಅಪರ್ಣ ಅವರಲ್ಲಿದ್ದ ಧೈರ್ಯ ಹಾಗೂ ಛಲ ಅವರನ್ನು ಹೆಚ್ಚು ದಿನ ಬದುಕಿಸಿದ್ದರೆ, ಇನ್ನೊಂದು ಕಡೆ ಅವರೇ ನಟಿಸಿದ ಒಂದು ಶೋ ಜೀವಂತವಾಗಿರಿಸಿತ್ತು. ಅದುವೇ 'ಮಜಾ ಟಾಕೀಸ್'.

ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ 'ಮಜಾ ಟಾಕೀಸ್' ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿತ್ತು. ಇದೆರಲ್ಲಿ ಅಪರ್ಣ ಕಾಮಿಡಿ ಪಾತ್ರದಲ್ಲಿ ನಟಿಸುತ್ತಿದ್ದರು. 'ಒನ್ ಅಂಡ್ ಓನ್ಲೀ ವರಲಕ್ಷ್ಮಿ' ಯಾಗಿ ನಿರೂಪಕಿ ಅಪರ್ಣ ಕಿರುತೆರೆ ವೀಕ್ಷಕರನ್ನು ನಗಿಸಿದ್ದರು. ಕೊನೆಗೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಅದೇ ಶೋ ಒಂದಷ್ಟು ದಿನ ಜೀವಂತವಾಗಿ ಇರಿಸುವಂತೆ ಮಾಡಿತ್ತು. ಈ ವಿಷಯವನ್ನು ಸ್ವತ: ಸೃಜನ್ ಲೋಕೇಶ್ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಹುರುಪು ಕೊಟ್ಟಿದ್ದೇ 'ಮಜಾ ಟಾಕೀಸ್'
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಗೆ 'ಮಜಾ ಟಾಕೀಸ್' ಬದುಕುವ ಚೈತನ್ಯ ಕೊಟ್ಟಿತ್ತು. ಆ ಮಾತನ್ನು ಸ್ವತ: ಅಪರ್ಣ, ಸೃಜನ್ ಲೋಕೇಶ್ ಬಳಿಕ ಹೇಳಿಕೊಂಡಿದ್ದರು. "ಕೆಲವೇ ದಿನಗಳ ಹಿಂದಷ್ಟೇ ಅವರೊಂದಿಗೆ ಮಾತಾಡಿದ್ದೆ. ಅವರು ಕೂಡ ಅದನ್ನೇ ಹೇಳುತ್ತಿದ್ದರು. ಡಾಕ್ಟರ್ ಕೂಡ ಹೇಳುತ್ತಿದ್ದರಂತೆ. ನೀವು ಮಜಾ ಟಾಕೀಸ್ ನೋಡಿದಾಗ ಜೀವನದಲ್ಲಿ ಹೊಸ ಹುರುಪು ಬರುತ್ತಿದೆ. ಅದನ್ನು ರೆಗ್ಯೂಲರ್ ಆಗಿ ನೋಡಿ ಅಂತ. ಅಪರ್ಣ ಅವರು ಥ್ಯಾಂಕ್ಯೂ ಸೃಜಾ ನನಗೆ ಒಂದು ಅವಕಾಶ ಕೊಟ್ಟಿದ್ದಕ್ಕೆ ಅಂದಿದ್ರು,. ನಾನು ನಿಮ್ಮಂತಹ ಕಲಾವಿದರೊಂದಿಗೆ ನಟನೆ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಥ್ಯಾಂಕ್ಯೂ ಎಂದಿದ್ದೆ." ಎಂದು ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.

"ಅವರು ತುಂಬಾನೇ ಹೆದರಿದ್ದರು"
'ಮಜಾ ಟಾಕೀಸ್'ನಲ್ಲಿ ನಟಿಸುವುದಕ್ಕೆ ಅಪರ್ಣ ಮೊದಲು ಹೆದರಿದ್ದರು ಅಂತ ಸೃಜನ್ ಲೋಕೇಶ್ ಹೇಳಿದ್ದಾರೆ. "ಮಜಾ ಟಾಕೀಸ್ಗೆ ಫೋನ್ ಮಾಡಿದಾಗ ಅವರು ತುಂಬಾನೇ ಹೆದರಿಕೊಂಡಿದ್ದರು. ಯಾಕಂದ್ರೆ ಅವರ ಇಮೇಜ್ ಬೇರೆ. ಅವರು ತುಂಬಾ ಸೀರಿಯಸ್ ನಿರೂಪಕಿ ಕಾಮಿಡಿ ಹೇಗೆ ಮಾಡೋದು ಅಂತಿದ್ರು. ಆಮೇಲೆ ಫೋನ್ ಮಾಡಿ ಸೃಜಾ ನನಗೆ ಯಾಕೋ ಭಯ ಆಗುತ್ತಿದೆ ಬೇಡ ಅಂತ ಅಂದ್ರು. ನನ್ನನ್ನು ನಂಬಿ. ನನ್ನ ಮೇಲೆ ನಂಬಿಕೆ ಇಲ್ಲಾ ಅಂದರೆ, ನಾನು ಮಾಡಿದ್ದು ತಪ್ಪು ಅಂತ ನೀವು ಹೇಳಲ್ಲ ಅಂದೆ. "
ಆ ಫೋನ್ ಕಾಲ್ ಬಗ್ಗೆ ಏನಂದಿದ್ರು
ಮಜಾ ಟಾಕೀಸ್ ಆರಂಭ ಆದಾಗ ಭಯ ಬಿದ್ದಿದ್ದ ಅರ್ಪಣ ಮತ್ತೊಂದು ದಿನ ಸೃಜನ್ ಲೋಕೇಶ್ಗೆ ಥ್ಯಾಂಕ್ಸ್ ಹೇಳಿದ್ದರು. ನಾವು ಆಸ್ಟ್ರೇಲಿಯಾಗೆ ಹೋಗಬೇಕಾದರೆ, ಫ್ಲೈಟ್ನಲ್ಲಿ ಕೂತು ಹೇಳಿದರು. ಆ ಒಂದು ಫೋನ್ ಕಾಲ್ ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗುತ್ತಿದೆ ಅಂತ. ಅಷ್ಟು ಖುಷಿ ಪಟ್ಟಂತಹ ಒಬ್ಬ ವ್ಯಕ್ತಿ. ಮತ್ತೆ ಅವರಿಗೆ ಯಾವಾಗಲೂ ತಿನ್ನುವ ಚಟ. ಅದಕ್ಕೆ ಹಸು ಅಂತ ಕರೆಯುತ್ತಿದೆ. ಏನಮ್ಮ ಯಾವಾಗಲೂ ಹಸು ತರ ಮೆಲುಕು ಹಾಕುತ್ತಿದ್ದೀಯಾ ಅಂತ ಹೇಳಿದ್ದೆ." ಎಂದು ಹೇಳಿದ್ದಾರೆ.
ಅಪರ್ಣ ಕಳೆದುಕೊಂಡಿದ್ದು ಬೇಸರ
"ಅವರೊಬ್ಬರು ಸೀನಿಯರ್ ಆರ್ಟಿಸ್ಟ್, ಹಿರಿಯ ನಿರೂಪಕಿ, ಅಷ್ಟು ಹೆಸರು ಮಾಡಿರುವಂತಹ ಕಲಾವಿದೆ. ಎಲ್ಲೇ ನೋಡಿ ಸರ್ಕಾರಿ ಕಾರ್ಯಕ್ರಮದಿಂದ ಹಿಡಿದು ಮೆಟ್ರೋವರೆಗೂ ಅಪರ್ಣ ಕಾಣುತ್ತಾರೆ. ಅಪರ್ಣ ಕೇಳಿಸುತ್ತಾರೆ. ಅವರು ದೂರದರ್ಶನ ಶುರುವಾದ ದಿನದಿಂದಲೂ ನಮ್ಮನ್ನು ರಂಜಿಸಿರುವವರು. ಅವರು ಒಂದು ಅದ್ಭುತವಾದ ಪ್ರತಿಭೆ. ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ಬೇಸರ." ಎಂದು ಹೇಳುತ್ತಾ ಸೃಜನ್ ಲೋಕೇಶ್ ಭಾವುಕರಾಗಿದ್ದಾರೆ.


Click it and Unblock the Notifications











