"ಅವರು ಬಂದಿದ್ದಕ್ಕೆ ನಮ್ಮ ಬೆಂಗಳೂರು ಬೆಳೆದಿದ್ದಾ?" ಬೀದಿ ದೀಪಗಳ ಬಗ್ಗೆ ಹೇಳುತ್ತಾ ತಿರುಗೇಟು ಕೊಟ್ಟ ಕವಿರಾಜ್
ಬೆಂಗಳೂರಿನಲ್ಲಿ ಕನ್ನಡಿಗರು ಇರುವುದಕ್ಕಿಂತ ಹೆಚ್ಚಾಗಿ ಪರ ಭಾಷೆಯ ಜನರೇ ಹೆಚ್ಚಿದ್ದಾರೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯದ ಜನರು ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ ವಲಸೆ ಬರೋದು ಹೊಸದೇನು ಅಲ್ಲ. ಪ್ರತಿ ವರ್ಷ ಕೆಲಸಕ್ಕೆಂದು ಬೆಂಗಳೂರಿಗೆ ಬಂದರು ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಆದರೆ, ಕನ್ನಡ, ಸಂಸ್ಕೃತಿ, ಭಾಷೆ ಅಂತ ಬಂದಾಗ ತಗಾದೆ ಎತ್ತುತ್ತಾರೆ. ಕನ್ನಡಿಗರ ಜೊತೆ ಕಿತ್ತಾಟಕ್ಕೆ ಇಳಿಯುತ್ತಾರೆ.
ನಮ್ಮ ನೆಲದಲ್ಲಿ ಪರಭಾಷಿಗರೊಂದಿಗೆ ನಾವು ಹೋರಾಟ ಮಾಡಬೇಕಾದ ಪರಿಸ್ಥಿತಿಯಿದೆ. ಪರಭಾಷಿಗರ ಹಾಗೂ ಕನ್ನಡಿಗರ ನಡುವೆ ವಾಕ್ಸಮರ, ಕಿತ್ತಾಟ, ಹೊಡೆದಾಟಗಳು ನಡೆಯುತ್ತಿವೆ. ಹಲವು ಬಾರಿ ಬೆಂಗಳೂರಿನಲ್ಲಿ ಈ ಘಟನೆಗಳು ನಡೆದಾಗ ಕನ್ನಡ ಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ. ಇದು ಆಗಾಗ ನಡೆಯುತ್ತಲೇ ಇರುತ್ತೆ.

ಇತ್ತೀಚೆಗೆ ಪರಭಾಷಿಗರು ಬೆಂಗಳೂರಿಗೆ ಬಂದಿದ್ದರಿಂದಲೇ ಇಲ್ಲಿ ಡೆವೆಲಪ್ಮೆಂಟ್ ಆಗಿದೆ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ಪರಭಾಷಿಗಳು ಇಂತಹದ್ದೊಂದು ವಾದವನ್ನು ಮಂಡಿಸುತ್ತಿದ್ದಾರೆ. ಈ ಹೇಳಿಕೆಗಳ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದೂ ಕೂಡ ಇದೆ. ಈಗ ಸಿನಿ ಸಾಹಿತಿ ಕವಿರಾಜ್ ಕೂಡ ಇಂತಹ ವಾದವನ್ನು ಮಂಡಿಸುತ್ತಿರುವ ಪರಭಾಷಿಗರಿಗೆ ತಿರುಗೇಟು ಕೊಟ್ಟಿದ್ದಾರೆ.
ಕವಿರಾಜ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಾವು ಬಂದಿದ್ದರಿಂದಲೇ ಬೆಂಗಳೂರು ಬೆಳವಣಿಗೆಯಾಗಿದೆ ಎಂದು ಹೇಳುತ್ತಿರುವ ಪರಭಾಷಿಗರಿಗೆ ಕೆಲವು ಉದಾಹರಣೆಗಳ ಸಮೇತ ತಿರುಗೇಟು ಕೊಟ್ಟಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕೂಡ ಕಾಮೆಂಟ್ಗಳನ್ನು ಪಾಸ್ ಮಾಡುತ್ತಿದ್ದಾರೆ. ಆ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾರೇ,
"ಇತ್ತೀಚೆಗೆ ನಮ್ಮ ನಾಡಿಗೆ ಹೊರ ರಾಜ್ಯದಿಂದ ವಲಸೆ ಬಂದ ಕೆಲವು ಅವಿವೇಕಿಗಳು ಹೇಳ್ತಾರೆ, ಅವರು ಬಂದಿದ್ದಕ್ಕೆ ಬೆಂಗಳೂರು ಉದ್ದಾರ ಆಗಿರೋದು ಅಂತ. ಅಂತಹವರಿಗೆ ನಾವು ತಿರುಗೇಟು ಕೊಡಲೇಬೇಕು. ಅದೇನು ಅಂದರೆ, ನಮಗೆಲ್ಲರಿಗೂ ಗೊತ್ತಿರೋ ಹಾಗೆ ಅಭಿವೃದ್ಧಿಯ ಮೂಲ ವಿದ್ಯುತ್ ಶಕ್ತಿ. ಸುಮಾರು 120 ವರ್ಷಗಳ ಹಿಂದೆ 1905ರಲ್ಲಿ ಅವರ ಅಪ್ಪ-ಅಮ್ಮ ಅಲ್ಲ. ಅಜ್ಜಿ-ತಾತ ಕೂಡ ಹುಟ್ಟಿರಲಿಲ್ಲ. ಅಂತಹ ಕಾಲದಲ್ಲಿ ಇಡೀ ಏಷ್ಯಾದಲ್ಲಿಯೇ ಮೊಟ್ಟ ಮೊದಲ ಬಾರಿಗೆ, ಭಾರತದಲ್ಲಿ ಅಲ್ಲ, ಇಡೀ ಏಷ್ಯಾ ಖಂಡದಲ್ಲಿಯೇ ವಿದ್ಯುತ್ ಬೀದಿ ದೀಪವನ್ನು ಹೊಂದಿದ ನಗರ ನಮ್ಮ ಬೆಂಗಳೂರು." ಎಂದು ಕವಿರಾಜ್ ಹೇಳಿದ್ದಾರೆ.
ಹಾಗೇ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್, ಕೆಆರ್ ಮಾರುಕಟ್ಟೆಯ ಬೀದಿ ದೀಪಗಳು ಮೊದಲ ಬೆಳಗಿದ್ದರ ಬಗ್ಗೆನೂ ತಮ್ಮ ವಿಡಿಯೋದಲ್ಲಿ ಮಾತಾಡಿದ್ದಾರೆ. "ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹತ್ವಾಕಾಂಕ್ಷೆಯ ಶಿವನ ಸಮುದ್ರ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಮೂಲಕ ಬೆಳಗಿದ ಬೀದಿ ನಮ್ಮ ಕೆಆರ್ ಮಾರ್ಕೆಟ್. ಇಲ್ಲಿ ಅಭಿವೃದ್ಧಿ ನೂರಾರು ವರ್ಷಗಳ ಹಿಂದೇನೆ ಆರಂಭ ಆಗಿತ್ತು. ಅವರೆಲ್ಲ ಬಂದಿಕ್ಕೆ ಇಲ್ಲಿ ಅಭಿವೃದ್ಧಿ ಆಗಿದ್ದಲ್ಲ. ಇಲ್ಲಿ ಅಭಿವೃದ್ದಿ ಆಗಿದ್ದಕ್ಕೆ ಅವರೆಲ್ಲ ಬಂದಿದ್ದು." ಎಂದು ಕವಿರಾಜ್ ಉದಾಹರಣೆ ಸಮೇತ ತಿರುಗೇಟು ಕೊಟ್ಟಿದ್ದಾರೆ.


Click it and Unblock the Notifications











