'ಜುಗಾರಿ ಕ್ರಾಸ್'ಗೆ ರಾಜ್ ಬಿ ಶೆಟ್ಟಿ ಹೀರೋ; ತೇಜಸ್ವಿಯ ಕೆಂಪು ರತ್ನಗಳ ಹಿಂದೆ ಬಿದ್ದ 'ಸು ಫ್ರಮ್ ಸೋ' ಗುರೂಜಿ
ಕನ್ನಡದಲ್ಲಿ ಸಿನಿಮಾ ಮಾಡಬಹುದಾದ ಹಲವು ಕಾದಂಬರಿಗಳು ಇವೆ. ಕನ್ನಡ ಸಾಹಿತಿಗಳು ರಚಿಸಿದ ಅದೆಷ್ಟೋ ಕಾದಂಬರಿಗಳು ಓದುಗರ ಮನಗೆದ್ದಿವೆ. ಇಂತಹ ಕೃತಿಗಳನ್ನು ಇಟ್ಕೊಂಡು ಯಾಕೆ ಸಿನಿಮಾ ಮಾಡುತ್ತಿಲ್ಲ? ಎಂಬ ಪ್ರಶ್ನೆ ಪ್ರೇಕ್ಷಕರಿಂದ ಕೇಳಿ ಬರುತ್ತಲೇ ಇದೆ. ಕನ್ನಡ ಚಿತ್ರರಂಗದಲ್ಲಿ ಕಾದಂಬರಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದ ಕಾಲವಿತ್ತು. ಅದೀಗ ಮರೆಯಾಗಿದ್ದರೂ ಅಲ್ಲೊಂದು ಇಲ್ಲೊಂದು ಇಂತಹ ಪ್ರಯತ್ನಗಳನ್ನು ಆಗುತ್ತಿವೆ.
ಇತ್ತೀಚೆಗೆ ಕನ್ನಡದ ಜನಪ್ರಿಯ ಲೇಖಕ ದಿವಂಗತ ಪೂರ್ಣಚಂದ್ರ ತೇಜಸ್ವಿ ಬರೆದ ಕಾದಂಬರಿ, ಕಥೆಗಳು ಸಿನಿಮಾಗಳಾಗಿವೆ. 'ಕಿರುಗೂರಿನ ಗಯ್ಯಾಳಿಗಳು','ಡೇರ್ ಡೆವಿಲ್ ಮುಸ್ತಫಾ' ಸಿನಿಮಾಗಳಾಗಿವೆ. ಈಗ ಅವರ ಮತ್ತೊಂದು ಕೃತಿ 'ಜುಗಾರಿ ಕ್ರಾಸ್' ಸಿನಿಮಾ ಆಗುತ್ತಿದೆ. ಕನ್ನಡ ನಿರ್ದೇಶಕ ಗುರುದತ್ ಗಾಣಿಗ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸದ್ಯ ಈ ಸಿನಿಮಾದ ಅನೌನ್ಸ್ಮೆಂಟ್ ಟೀಸರ್ ಪೂರ್ಣಚಂದ್ರ ತೇಜಸ್ವಿ ಹಾಗೂ ಸಿನಿಪ್ರಿಯರ ಗಮನ ಸೆಳೆದಿದೆ.

ಈಗಾಗಲೇ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟಿಸುತ್ತಿರುವ 'ಕರಾವಳಿ' ಸಿನಿಮಾದ ಮೂಲಕ ಗುರುದತ್ ಗಾಣಿಗ ಗಮನ ಸೆಳೆದಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಇನ್ನೊಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಶೂಟಿಂಗ್ಗೆ ರೆಡಿಯಾಗುತ್ತಿದ್ದಾರೆ. ವಿಶೇಷ ಅಂದರೆ, 'ಜುಗಾರಿ ಕ್ರಾಸ್' ಸಿನಿಮಾಗೂ ರಾಜ್ ಬಿ ಶೆಟ್ಟಿ ನಾಯಕನಾಗಿರೋದು ಮತ್ತೊಂದು ವಿಶೇಷ.
'ಜುಗಾರಿ ಕ್ರಾಸ್' ಕನ್ನಡದ ಜನಪ್ರಿಯ ಕಾದಂಬರಿ. ಇದಕ್ಕೆ ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ಅಭಿಮಾನಿಗಳು. ಈ ಜನಪ್ರಿಯ ಕಾದಂಬರಿ ಈಗ ಬೆಳ್ಳಿ ಪರದೆ ಮೇಲೆ ಮೂಡಿ ಬರಲಿದೆ. ಗುರುದತ್ ಗಾಣಿಗ ಈ ಹಿಂದೆನೇ 'ಜುಗಾರಿ ಕ್ರಾಸ್' ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಅದಕ್ಕೆ ತಕ್ಕಂತೆ ಟೀಸರ್ ರಿಲೀಸ್ ಮಾಡಿ ಕುತೂಹಲವನ್ನು ದುಪ್ಪಟ್ಟು ಮಾಡಿದ್ದಾರೆ. ಹಾಗೇ 'ಸು ಫ್ರಮ್ ಸೋ' ಗುರೂಜಿ ಈ ಸಿನಿಮಾಗೆ ಹೀರೋ ಅಂದಾಗಲಂತೂ ಆ ಕುತೂಹಲ ದುಪ್ಪಟ್ಟಾಗಿದೆ.

'ಜುಗಾರಿ ಕ್ರಾಸ್' ಟೀಸರ್ನಲ್ಲಿ ತಲೆಬುರಡೆ, ನೆತ್ತರು, ಕೆಂಪು ರತ್ನಗಳನ್ನು ತೋರಿಸಲಾಗಿದೆ. ಹಾಗೇ ಟೀಸರ್ನ ಹಿನ್ನೆಲೆ ಸಂಗೀತ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ. ಪವರ್ ಪ್ಯಾಕ್ಡ್ ಟೀಸರ್ ನಿರೀಕ್ಷೆಯನ್ನಂತೂ ಹುಟ್ಟಾಕಿದೆ. ಸಿನಿಮಾ ಹೇಗೆ ಮೂಡಿಬರಬಹುದು ಎನ್ನುವ ಕುತೂಹಲವಿದೆ. ಈಗಾಗಲೇ ನಿರೀಕ್ಷೆ ಮೂಡಿಸಿರುವ 'ಕರಾವಳಿ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿರೋ ನಿರ್ದೇಶಕ ಗುರುದತ್ ಮತ್ತು ರಾಜ್ ಬಿ ಶೆಟ್ಟಿ 'ಜುಗಾರಿ ಕ್ರಾಸ್' ಮೂಲಕ ಮತ್ತೆ ಒಂದಾಗಿದ್ದಾರೆ.
'ಸು ಫ್ರಮ್ ಸೋ' ಮೆಗಾ ಸಕ್ಸಸ್ ಕಂಡ ಬಳಿಕ ರಾಜ್ ಬಿ ಶೆಟ್ಟಿ ಮತ್ತೊಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಜ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಚ್ಯೂಸಿ. ವಿಭಿನ್ನ, ವಿನೂತನ ಪಾತ್ರಗಳನ್ನು ಹುಡುಕುವ ಶೆಟ್ರು 'ಕರಾವಳಿ' ಸಿನಿಮಾದಲ್ಲಿ ಕೋಣಗಳ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಜುಗಾರಿ ಕ್ರಾಸ್ ಅಂತ ಪವರ್ ಫುಲ್ ಸ್ಟೋರಿ ಆಯ್ಕೆ ಮಾಡಿಕೊಂಡಿರೋದು ವಿಶೇಷ.
ಗುರುದತ್ ಗಾಣಿಗ ಹಾಗೂ ಅವರ ಟೀಂ ಮೇಲೆ ರಾಜ್ ಬಿ ಶೆಟ್ಟಿ ನಂಬಿಕೆ ಇಟ್ಟು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಶೀಘ್ರದಲ್ಲಿಯೇ ಚಿತ್ರೀಕರಣ ಶುರುವಾಗಲಿದೆ. ಕರಾವಳಿ ಸಿನಿಮಾದ ಶೂಟಿಂಗ್ ಮುಗಿಸಿರೋ ಗುರುದತ್ ಪೋಸ್ಟ್ ಪ್ರೊಡಕ್ಷನ್ ಬ್ಯುಸಿಯಾಗಿದ್ದಾರೆ. ಇದರ ಜೊತೆನೇ 'ಜುಗಾರಿ ಕ್ರಾಸ್'ನಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಗಾಣಿಗ ಫಿಲ್ಮಂಸ್ ಅಡಿಯಲ್ಲಿ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದನ್ ಈ ಸಿನಿಮಾಗೂ ಛಾಯಾಗ್ರಹಣ ಮಾಡುತ್ತಿದ್ದು, ಸಚಿನ್ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











