"ಸಿಎಂ ಬೊಮ್ಮಾಯಿಗೋಸ್ಕರ ಪ್ರಚಾರ.. ಅವರು ಹೇಳಿದವರ ಪರ ಕ್ಯಾಂಪೇನ್": ಕಿಚ್ಚನ ಅಸಲಿ ನಿಲುವೇನು?
ಸ್ಯಾಂಡಲ್ವುಡ್ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಜಂಟಿಯಾಗಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಸುದ್ದಿಗಳಿಗೆ ಪತ್ರಿಕಾಗೋಷ್ಠಿಗೂ ಮೊದಲೇ ಸುದೀಪ್ ಸ್ಪಷ್ಟನೆ ನೀಡಿದ್ದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಸಿ ಎಂ ಬಸರಾಜ್ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದು ನೇರವಾಗಿ ಹೇಳಿದ್ದಾರೆ. ಅಲ್ಲದೆ ಸಿ ಎಂ ಸೂಚಿಸುವ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಅಂತಾನೂ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ತನ್ನ ಕಷ್ಟದ ಸಮಯದಲ್ಲಿ ನೆರವಿಗೆ ಬಂದಿದ್ದರು. ಹೀಗಾಗಿ ಈಗ ಅವರೊಂದಿಗೆ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಕೆಲವು ಕ್ಷೇತ್ರಗಳಿಗೆ ಮಾತ್ರ ಹೋಗಿ ಪ್ರಚಾರ ಮಾಡುತ್ತೇನೆ ಎಂದೂ ಸುದೀಪ್ ಹೇಳಿದ್ದಾರೆ. ಈ ಮೂಲಕ ಸುದೀಪ್ ಬಿಜೆಪಿ ಪಕ್ಷದ ಪರ ಅಲ್ಲ. ಕೇವಲ ಸಿ ಎಂ ಬಸವರಾಜ್ ಬೊಮ್ಮಾಯಿ ಹೇಳಿದವರ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ಬಿಜೆಪಿ ಪಕ್ಷ ಸೇರುತ್ತಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಅನ್ನೋದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಹೇಳಿಕೆಗಳ ಹೈಲೈಟ್ಸ್ ಹೀಗಿದೆ.
"ನನ್ನ ನಿಲುವು ಏನಿಲ್ಲ.. ಬೊಮ್ಮಾಯಿ ಮಾಮಾ ಪರ ಪ್ರಚಾರ"
"ಚಿತ್ರರಂಗದಲ್ಲಿ ಕೆಲವೇ ಕೆಲವರು ನನ್ನೊಟ್ಟಿಗೆ ನಿಂತಿದ್ದವರು. ನನ್ನ ಪ್ರೀತಿಯ ಬಸವರಾಜ್ ಬೊಮ್ಮಾಯಿ ಮಾಮಾ ಅಂದರೆ ತಪ್ಪಾಗಲ್ಲ. ಇವತ್ತು ನನ್ನ ನಿಲುವು ಅಂತೇನು ಇಲ್ಲ. ಇವತ್ತು ಅವರಿಗೆ ನಿಮ್ಮ ಪರ ನಿಲ್ಲುತ್ತೇನೆ ಅಂತ ಹೇಳುವುದಕ್ಕೆ ಬಂದೆ. ಇದನ್ನು ಇಷ್ಟು ಕ್ಯಾಮರಾಗಳ ಮುಂದೆ ಹೇಳುತ್ತೇನೆ ಅಂತ ಗೊತ್ತಿರಲಿಲ್ಲ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
"ಬೊಮ್ಮಾಯಿ ಮಾಮಾ ಹೇಳಿದವರ ಪರ ಪ್ರಚಾರ"
" ಎಲ್ಲಾ ಕ್ಷೇತ್ರಗಳಿಗೂ ಪ್ರಚಾರ ಮಾಡುವುದಕ್ಕೆ ಸಾಧ್ಯವಿಲ್ಲ. ಸಿ ಎಂ ಬಸವರಾಜ ಬೊಮ್ಮಾಯಿ ಅವರ ಯಾರು ಯಾರಿಗೆ ಪ್ರಚಾರ ಮಾಡು ಅಂತಾರೋ ಮಾಡುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ನನ್ನ ಕೈಯಲ್ಲ ಬೆರಳು ಹಿಡಿದು ಕರೆದುಕೊಂಡು ಬಂದವರ ಪರ ನಿಲ್ಲುತ್ತೇನೆ. ಯಾವುದೇ ಪಕ್ಷದಲ್ಲಿ ಇದ್ದರೂ ಬೆಂಬಲ ನೀಡುತ್ತೇನೆ." ಸುದೀಪ್ ಸ್ಪಷ್ಟಪಡಿಸಿದ್ದಾರೆ.

"ಹಣ ತೆಗೆದುಕೊಂಡು ಪ್ರಚಾರ ಮಾಡುವ ಅಗತ್ಯವಿಲ್ಲ"
"ಹಣ ತೆಗೆದುಕೊಂಡು ಇಲ್ಲಿಗೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನನಗೆ ಸಿನಿಮಾದಲ್ಲೇ ಹಣ ಕೊಡುವವರು ಬಹಳಷ್ಟು ಮಂದಿ ಇದ್ದಾರೆ. ಅದನ್ನು ಕೊಡಿಸಿಬಿಡಿ. ನನಗೆ ದುಡಿಯುವ ಆಗುವುದೇ ಇಲ್ಲ ಅಂತಾನಾ?" ಎಂದು ಕಿಚ್ಚ ಸ್ಪಷ್ಟಪಡಿಸಿದ್ದಾರೆ.
"ಎಲ್ಲರಿಗೂ ಹೇಳಿ ಚುನಾವಣೆಗೆ ನಿಲ್ಲುತ್ತೇನೆ"
"ಅನಿವಾರ್ಯ ಕಾರಣಗಳಿಗೆ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ಚುನಾವಣೆಗೆ ನಿಲ್ಲಬೇಕು ಅಂತ ನಿರ್ಧಾರ ಮಾಡಿದ್ರೆ, ಸರಿಯಾಗಿ ತಯಾರಿ ಮಾಡಿಕೊಂಡು, ಎಲ್ಲರಿಗೂ ಹೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ." ಎಂದು ಚುನಾವಣೆಗೆ ನಿಲ್ಲುವ ಬಗ್ಗೆ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.
"ಪ್ರಕಾಶ್ ರಾಜ್ ಒಳ್ಳೆಯ ನಟ"
"ಪ್ರಕಾಶ್ ರಾಜ್ ಅವರೊಂದಿಗೆ ರನ್ನ ಅನ್ನೋ ಸಿನಿಮಾ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯ ನಟ. ಮುಂದೆ ಅವರೊಂದಿಗೆ ಯಾವಾಗ ನಟಿಸುತ್ತೇನೆ ಅಂತ ಎದುರು ನೋಡುತ್ತಿದ್ದೇನೆ." ಎಂದು ಪ್ರಕಾಶ್ ರಾಜ್ ಟ್ವೀಟ್ ಬಗ್ಗೆ ಮಾತಾಡದೇ ಕಿಚ್ಚ ಸುದೀಪ್ ನುಣುಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಿಚ್ಚ ಸುದೀಪ್ ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಅಂತ ಹೇಳಿದ್ದಾರೆ. ಆದರೆ ಎಲ್ಲೂ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಅಂತ ಹೇಳಿಲ್ಲ. ಆದರೂ, ಸಿಎಂ ಪರ ಅಂದರೆ, ಪರೋಕ್ಷವಾಗಿ ಬಿಜೆಪಿ ಪರ ಪ್ರಚಾರ ಮಾಡಿದಂತೆ ಆಗುತ್ತೆ. ಈ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ ಕೊಡದೆ ನುಣುಚಿಕೊಂಡಿದ್ದಾರೆ.


Click it and Unblock the Notifications











