ರನ್ನ ಚಿತ್ರಕ್ಕೆ ಅಡ್ಡಿ ಮಾಡುತ್ತಿರುವ ವಿಘ್ನ ಸಂತೋಷಿಗಳಾರು?
2015ರ ಬಹು ನಿರೀಕ್ಷಿತ ಮತ್ತು ಬಿಡುಗಡೆಗೆ ಸಿದ್ದವಾಗಿರುವ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ರಿಲೀಸ್ ಭಾಗ್ಯಕ್ಕೆ ತೊಂದರೆಯಾಗಿದೆಯೇ? ಹೀಗೊಂದು ಸುದ್ದಿ ಎರಡು ದಿನಗಳಿಂದ ಹರಿದಾಡುತ್ತಿದೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ 'ರನ್ನ' ಚಿತ್ರ ಬಿಡುಗಡೆಗೆ ಬೆಂಗಳೂರು ನಗರದ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹಾಗಾಗಿ, ಚಿತ್ರ ನಿಗದಿತ ದಿನಕ್ಕೆ ಬಿಡುಗಡೆಯಾಗುತ್ತಿಲ್ಲ ಎನ್ನುವ ಸುದ್ದಿ ಪ್ರಕಟವಾಗಿತ್ತು. (ರನ್ನ ಆಡಿಯೋ ವಿಮರ್ಶೆ)
ಈಗ ಈ ಎದ್ದಿರುವ ಗೊಂದಲಕ್ಕೆ ಚಿತ್ರದ ನಿರ್ಮಾಪಕರು ಬೇಸರದಿಂದಲೇ ತೆರೆ ಎಳಿದಿದ್ದಾರೆ. ಇದೆಲ್ಲಾ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ, ಅಭಿಮಾನಿಗಳು ಇದನ್ನು ನಂಬಬೇಡಿ ಎಂದು ನಿರ್ಮಾಪಕ ನಿಮಿಷಾಂಬ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಪಕ ಚಂದ್ರಶೇಖರ್ ಅವರು ನನ್ನಿಂದ 25 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ, ಇದುವರೆಗೂ ಅವರು ಅದನ್ನು ಮರುಪಾವತಿಸಲಿಲ್ಲ ಎಂದು ರನ್ನ ಚಿತ್ರದ ಸಹ ನಿರ್ಮಾಪಕರಾದ ನಾಗರಾಜ್ ಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ನಾಗರಾಜ್ ಅವರು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಪ್ರದೇಶದ ವಿತರಣೆ ಹಕ್ಕುಗಳಿಗಾಗಿ ಮುಂಗಡ ಹಣ ನೀಡಿದ್ದರಂತೆ ಎಂದು ಸುದ್ದಿಯಾಗಿತ್ತು.
ಆದರೆ, ಈ ಎಲ್ಲಾ ಸುದ್ದಿಗಳನ್ನು ನಿರ್ಮಾಪಕ ಚಂದ್ರಶೇಖರ್ ಸುಳ್ಳು ಎನ್ನುತ್ತಿದ್ದಾರೆ. ಚಂದ್ರಶೇಖರ್ ಅವರ ಸ್ಪಷ್ಟನೆ ನೀಡಿದ್ದು ಹೀಗೆ..

ಒಂದು ಒಳ್ಳೆ ಚಿತ್ರ ಮಾಡಿದ್ದೇವೆ
ಚಿತ್ರದ ಬಗೆಗಿನ ಅಪಪ್ರಚಾರಕ್ಕೆ ನಾನು ಭಯಪಡುವುದಿಲ್ಲ. ಒಳ್ಳೆ ಚಿತ್ರವನ್ನು ನಿರ್ಮಿಸಿದ್ದೇವೆ. ಉತ್ತಮ ಚಿತ್ರವನ್ನು ಯಾವತ್ತೂ ಕನ್ನಡಿಗರು ಕೈಬಿಟ್ಟಿಲ್ಲ. ರನ್ನ ಚಿತ್ರವನ್ನೂ ಜನ ಸ್ವೀಕರಿಸಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದೇವೆ ಎಂದು ನಿರ್ಮಾಪಕ ಚಂದ್ರಶೇಖರ್ ಆತ್ಮವಿಶ್ವಾಸದ ಮಾತನ್ನಾಡಿದ್ದಾರೆ.

ಮೇ ಮೊದಲ ವಾರದಲ್ಲಿ ಬಿಡುಗಡೆ
ಚಿತ್ರ ರಾಜ್ಯಾದ್ಯಂತ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗುವುದು ನಿಶ್ಚಿತ. ಈ ಬಗ್ಗೆ ಅಭಿಮಾನಿಗಳಿಗೆ ಯಾವುದೇ ಆತಂಕ, ಗೊಂದಲ ಬೇಡ. ಕೋರ್ಟ್ ತಡೆಯಾಜ್ಞೆ ನೀಡಿರುವುದೆಲ್ಲಾ ಸತ್ಯಕ್ಕೆ ದೂರವಾದ ವಿಷಯ - ನಿರ್ಮಾಪಕ ಚಂದ್ರಶೇಖರ್.

ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ
ನನ್ನ ಮತ್ತು ನಾಗರಾಜ್ ನಡುವೆ ಯಾವುದೇ ಹಣಕಾಸಿನ ಗೊಂದಲವಿಲ್ಲ. ನನ್ನ ಬ್ಯಾನರಿನ ಚಿತ್ರಕ್ಕೆ ತೊಂದರೆ ಮಸಿ ಬಳಿಯಬೇಕೆನ್ನುವ ಉದ್ದೇಶದಿಂದ ಈ ರೀತಿಯ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇದಕ್ಕೆಲ್ಲಾ ನಾನು ಕ್ಯಾರೇ ಮಾಡೊಲ್ಲ - ನಿರ್ಮಾಪಕ ಚಂದ್ರಶೇಖರ್.

ರನ್ನ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ
ಯುಟ್ಯೂಬ್ ಬಲ್ಲಿ ರನ್ನ ಚಿತ್ರದ ಸೀರೆ ಮತ್ತು ಬಬ್ಬರ್ ಹಾಡುಗಳು ಸೂಪರ್ ಹಿಟ್ ಆಗಿವೆ. ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಚಿತ್ರ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗುವುದು ಖಂಡಿತ. ಥಿಯೇಟರ್ ಲಿಸ್ಟ್ ಫೈನಲ್ ಮಾಡುತ್ತಿದ್ದೇವೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ನಂದಕಿಶೋರ್ ನಿರ್ದೇಶನದ ಚಿತ್ರ
ವಿಕ್ಟರಿ, ಅಧ್ಯಕ್ಷ ಚಿತ್ರದ ನಂತರ ನಂದಕಿಶೋರ್ ನಿರ್ದೇಶಿಸುತ್ತಿರುವ ಮೂರನೇ ಚಿತ್ರವಿದು. ಬಹುತಾರಾಗಣದ ಈ ಚಿತ್ರದಲ್ಲಿ ಸುದೀಪ್, ಪ್ರಕಾಶ್ ರೈ, ರಚಿತಾ ರಾಮ್, ಹರಿಪ್ರಿಯ, ದೇವರಾಜ್, ಮಧು, ಸಾಧುಕೋಕಿಲ, ಚಿಕ್ಕಣ್ಣ, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.


Click it and Unblock the Notifications











