Sudeep Vs MN Kumar:ಕಿಚ್ಚ-ಕುಮಾರ್ ಸಂಧಾನ ಯಶಸ್ವಿ ಆಯ್ತಾ? ಕ್ರೇಜಿಸ್ಟಾರ್ ಮಾತಿಗೆ ತಲೆಬಾಗಿದ್ರಾ?
ಕಳೆದ 15 ದಿನಗಳಿಂದ ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ಕಿತ್ತಾಟ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ದೇಶಾದ್ಯಂತ ಈ ವಿವಾದ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಸುದೀಪ್ ಹಣ ಪಡೆದು ಕಾಲ್ಶೀಟ್ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಕಿಚ್ಚ ನಿರ್ಮಾಪಕ ಕುಮಾರ್ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದರು.
10 ಕೋಟಿ ರೂ. ಮಾನಹಾನಿ ಕೇಸ್ ದಾಖಲಿಸುತ್ತಿದ್ದಂತೆ ನಿರ್ಮಾಪಕ ಎಂಎನ್ ಕುಮಾರ್ ಫಿಲ್ಮ್ ಚೇಂಬರ್ ಪರಿಧಿಯೊಳಗೆ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಅದಕ್ಕೆ ನಿರ್ಮಾಪಕರೆಲ್ಲರೂ ಒಗ್ಗಟ್ಟಾಗಿ ಎಂಎನ್ ಕುಮಾರ್ಗೆ ಸಾಥ್ ನೀಡಿದ್ದರು.

ಈ ಸಮಸ್ಯೆ ಬಗೆಹರಿಸಲು ರವಿಚಂದ್ರನ್ ಹಾಗೂ ಶಿವರಾಜ್ಕುಮಾರ್ ಮಧ್ಯೆಸ್ಥಿಕೆ ವಹಿಸಬೇಕು ಎಂದು ನಿರ್ಮಾಪಕರು ಹಠ ಹಿಡಿದಿದ್ದರು. ಅದರಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರನ್ನೂ ಸಂಧಾನ ಮಾಡಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ನಿನ್ನೆ (ಜುಲೈ 21) ರವಿಚಂದ್ರನ್ ಅವರ ಹೊಸಕೆರೆ ನಿವಾಸದಲ್ಲಿ ಸಂಧಾನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಏನಾಯ್ತು? ಅನ್ನೋ ಡಿಟೈಲ್ಸ್ ಇಲ್ಲಿದೆ.
ಕ್ರೇಜಿ ಸಂಧಾನ ಸಭೆ ಏನಾಯ್ತು?
ನಿನ್ನೆ (ಜುಲೈ 21) ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ಸಂಧಾನ ಸಭೆ ಆರಂಭ ಆಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ನಿವಾಸದಲ್ಲಿ ಶುರುವಾಗಿದ್ದ ಈ ಸಂಧಾನ ಸಭೆ ರಾತ್ರಿ 10 ಗಂಟೆಗೆ ವರೆಗೂ ಮುಂದುವರೆದಿತ್ತು. ಇಬ್ಬರ ವಾದ-ವಿವಾದಗಳನ್ನು ಆಲಿಸಲಾಯ್ತು.

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಾಕ್ಲೈನ್ ವೆಂಕಟೇಶ್, ಜಾಕ್ ಮಂಜು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್, ಉಮೇಶ್ ಬಣಕಾರ್ ಸೇರಿದಂತೆ ಹಲವು ಪ್ರಮುಖ ಭಾಗಿಯಾಗಿದ್ದರು. ಸುಮಾರು ಏಳು ಗಂಟೆಗಳ ಕಾಲ ಇಬ್ಬರ ನಡುವೆ ಸಂಧಾನ ಸಭೆ ನಡೆಸಲಾಯಿತು. ಆದರೂ, ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಎರಡನೇ ದಿನಕ್ಕೆ ಕಾಲಿಟ್ಟ ಸಂಧಾನ ಸಭೆ
ಮೊದಲ ದಿನ ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ಸಂಧಾನದಿಂದ ಒಮ್ಮತದ ನಿರ್ಣಯಕ್ಕೆ ಬಾರದ ಹಿನ್ನೆಲೆಯಲ್ಲಿ ಇಂದಿಗೆ (ಜುಲೈ 22) ಮುಂದೂಡಲಾಗಿದೆ ಎನ್ನಲಾಗಿದೆ. ಆದರೆ, ಸಂಧಾನ ಯಶಸ್ವಿಯಾಗುವ ಹಂತದಲ್ಲಿದೆ ಎಂದೂ ಹೇಳಲಾಗುತ್ತಿದೆ. ಇದೇ ಸದಸ್ಯರೆಲ್ಲರೂ ಎರಡನೇ ದಿನವೂ ಒಟ್ಟಿಗೆ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ಪರಸ್ಪರ ಇಬ್ಬರೂ ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಆದರೂ, ಕೆಲವು ವಿಚಾರಗಳಿಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಹೀಗಾಗಿ ಇಂದು (ಜುಲೈ 22) ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆ ಬಳಿಕವೇ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ.
ಶಿವರಾಜ್ಕುಮಾರ್ ಭಾಗಿಯಾಗಿಲ್ಲ
ನಿರ್ಮಾಪಕರು ಈ ವಿವಾದವನ್ನು ಬಗೆಹರಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಶಿವರಾಜ್ಕುಮಾರ್ ಬಳಿ ಮನವಿ ಮಾಡಿಕೊಂಡಿದ್ದರು. ಅದರಂತೆ ಶಿವಣ್ಣನನ್ನು ಭೇಟಿ ಕೂಡ ಮಾಡಿದ್ದರು. ಆದರೆ, ಈ ಸಂಧಾನ ಸಭೆಯಲ್ಲಿ ಶಿವರಾಜ್ಕುಮಾರ್ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ.
ಶಿವರಾಜ್ಕುಮಾರ್ ಹೈದರಾಬಾದ್ನಲ್ಲಿ ಇದ್ದಿದ್ದರಿಂದ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ರವಿಚಂದ್ರನ್ ಮುಂದಾಳತ್ವದಲ್ಲಿಯೇ ಸಭೆ ನಡೆಸಲಾಗುತ್ತಿದೆ. ಇಂದು ಈ ಸಮಸ್ಯೆ ಇತ್ಯರ್ಥ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.


Click it and Unblock the Notifications











