"ತಂದೆಯ ಗೆಳೆಯ ಯಶ್ ಮೇಲೆ ಹೇಗೆ ಕ್ರಶ್ ಆಗುತ್ತೆ? ನನಗೆ ಅಲ್ಲು ಅರ್ಜುನ್ ಅಂದ್ರೆ ಇಷ್ಟ"; ಸುದೀಪ್ ಪುತ್ರಿ ಸಾನ್ವಿ
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಇತ್ತೀಚೆಗೆ ಹೆಚ್ಚಾಗಿ ಸಂದರ್ಶನಗಳಲ್ಲಿ, ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆಯೊಂದಿಗೆ ಸಿನಿಮಾದ ಚಟುವಟಿಕೆಗಳನ್ನೂ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾಗೆ ಒಂದು ಹಾಡನ್ನು ಹಾಡಿದ್ದಾರೆ. ಇಲ್ಲಿವರೆಗೂ ನಟನೆಗಿಂತ ಹೆಚ್ಚಾಗಿ ಸಿಂಗಿಂಗ್ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಸಾನ್ವಿ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಅನ್ನೋ ಸುದ್ದಿನೂ ಹಬ್ಬಿತ್ತು.
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅಪ್ಪನಂತೆ ನೇರವಾಗಿ ಮಾತಾಡುವ ಸ್ವಭಾವ. ಇತ್ತೀಚೆಗೆ ನೀಡಿದ ಸಾನ್ವಿ ನೀಡಿದ ಸಂದರ್ಶನಗಳು ಅದಕ್ಕೆ ಸಾಕ್ಷಿ ಎಂಬಂತಿವೆ. ಜಿನಲ್ ಮೋದಿ ಎಂಬ ಯುಟ್ಯೂಬ್ ಚಾನೆಲ್ಗೆ ಸಾನ್ವಿ ಸುದೀಪ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಚಿತ್ರರಂಗದ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಲ್ಲು ಅರ್ಜುನ್ ಬಗ್ಗೆನೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಾನ್ವಿಗೆ ನಿರೂಪಕಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ ಬಳಿಕ ಯಶ್ ಮೇಲೆ ಕ್ರಶ್ ಆಗಿತ್ತಾ? ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ತಂದೆ ಸ್ನೇಹಿತನೊಂದಿಗೆ ಹೇಗೆ ಕ್ರಶ್ ಆಗುತ್ತೆ ಎಂದಿದ್ದಾರೆ. ಹಾಗೇ ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಗಿದ್ದರೆ ಸಾನ್ವಿ ಈ ಸಂದರ್ಶನದಲ್ಲಿ ಯಶ್ ಹಾಗೂ ಅಲ್ಲು ಅರ್ಜುನ್ ಬಗ್ಗೆ ಏನು ಹೇಳಿದ್ದಾರೆ ತಿಳಿಯುವುದಕ್ಕೆ ಮುಂದೆ ಓದಿ.
ನಿರೂಪಕಿ ಸಾನ್ವಿ ಸುದೀಪ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದರ ಹಿಂದೆನೇ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಏನಂತಿರಾ? ಎಂದು ಪ್ರಶ್ನೆ ಮಾಡಿದ್ದರು. ಆಗ ಸಾನ್ವಿ ಬಾಲ್ಯದಲ್ಲಿ ರಾಕಿ ಭಾಯ್ ಯಶ್ ಜೊತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. "ನನ್ನ ಬಾಲ್ಯದ ದಿನಗಳಲ್ಲಿ ಹಲವು ವರ್ಷಗಳು ಅವರೊಂದಿಗೆ ಆಟಗಳನ್ನು ಆಡಿದ ನೆನಪಿದೆ. ಅವರು ನನ್ನ ಬರ್ತ್ಡೇ ಪಾರ್ಟಿಗಳಿಗೆ ಬಂದಿದ್ದಾರೆ. ಅವರಿಗೆ ತೆರೆಮೇಲೆ ಹೇಗೆ ಕಾಣಿಸಿಕೊಳ್ಳಬೇಕು. ಜನರನ್ನು ಇಂಪ್ರೆಸ್ ಮಾಡುವುದಕ್ಕೆ ಏನು ಮಾಡಬೇಕು ಅನ್ನೋದು ಅವರಿಗೆ ಗೊತ್ತಿದೆ. ಕೆಜಿಎಫ್ ಹಾಗೂ ಅವರ ಮುಂದಿನ ಸಿನಿಮಾ ಬಗ್ಗೆ ಗ್ಯಾಪ್ ಇದ್ದರೂ ಚಿತ್ರರಂಗದಲ್ಲಿ ತನ್ನ ಖದರ್ ಅನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿದೆ." ಎಂದು ಹೇಳಿದ್ದಾರೆ.
ಇಲ್ಲಿಗೆ ಸುಮ್ಮನಿರದ ನಿರೂಪಕಿ ಯಾವತ್ತಾದರೂ ಯಶ್ ಅವರೊಂದಿಗೆ ಕ್ರಶ್ ಆಗಿತ್ತಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಾನ್ವಿ ಕೊಟ್ಟ ಉತ್ತರ ನೆಟ್ಟಿಗರ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. "ನನ್ನ ತಂದೆಯ ಸ್ನೇಹಿತನ ಮೇಲೆ ಹೇಗೆ ಕ್ರಶ್ ಆಗುತ್ತೆ? ನೀವು ಒಂಥರಾ ಮುಜುಗರದ ಪ್ರಶ್ನೆ ಕೇಳುತ್ತಿದ್ದೀರ. ನನಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅಲ್ಲು ಅರ್ಜುನ್ ಇಬ್ಬರ ಮೇಲೆ ಮಾತ್ರ ಕ್ರಶ್ ಆಗಿತ್ತು." ಎಂದು ಸಾನ್ವಿ ಸುದೀಪ್ ಹೇಳಿದ್ದಾರೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಅಲ್ಲು ಅರ್ಜುನ್ ಇಬ್ಬರು ತನ್ನ ಕ್ರಶ್ ಎಂದು ಸಂದರ್ಶನದಲ್ಲಿ ಸಾನ್ವಿ ಸುದೀಪ್ ರಿವೀಲ್ ಮಾಡಿದ್ದಾರೆ. ಅದರಲ್ಲೂ ಇತ್ತೀಚೆಗೆ ತೆರೆಕಂಡು ಮೆಗಾ ಬ್ಲಾಕ್ಬಸ್ಟರ್ ಲಿಸ್ಟ್ ಸೇರಿದ್ದ ಅಲ್ಲು ಅರ್ಜುನ್ 'ಪುಷ್ಪ 2' ಬಗ್ಗೆನೂ ಮಾತಾಡಿದ್ದಾರೆ. ಆ ಸಿನಿಮಾ ನೋಡುವುದಕ್ಕೆ ವೈಲ್ಡ್ ಲುಕ್ ಕೊಟ್ಟಿದ್ದ ಅರ್ಜುನ್ ಅರ್ಜುನ್ ಟೀ ಶರ್ಟ್ ಧರಿಸಿ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.
"ಅಲ್ಲು ಅರ್ಜುನ್ ಮೇಲೆ ಅದೆಷ್ಟು ಕ್ರಶ್ ಅಂದರೆ, ನಾನು ಪುಷ್ಪ 2 ಸಿನಿಮಾ ನೋಡುವುದಕ್ಕೆ ವೈಲ್ಡ್ ಫೈಯರ್ ಅಲ್ಲು ಅರ್ಜುನ್ ಪೋಟೋ ಇರುವ ಟೀ-ಶರ್ಟ್ ಅನ್ನು ಧರಿಸಿ ವೆಗಾ ಸಿಟಿ ಮಾಲ್ಗೆ ಹೋಗಿದ್ದೆ." ಎಂದು ಅಲ್ಲು ಅರ್ಜುನ್ ಅಂದರೆ ತನಗೆಷ್ಟು ಇಷ್ಟ ಅಂತ ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸಾನ್ವಿ ಸುದೀಪ್ ಹೇಳಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ನಿರೂಪಕಿ ನೀವು ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಾನ್ವಿ ಇಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. "ನಾನು ಅವರನ್ನು ಇನ್ನೂ ಭೇಟಿ ಮಾಡಿಲ್ಲ ಅಂತ ಪ್ರತಿದಿನ ಬೇಜಾರು ಮಾಡಿಕೊಳ್ಳುತ್ತೇನೆ. ನಾನು ಅವರನ್ನು ಯಾವಾಗ ಭೇಟಿ ಮಾಡಬೇಕು ಅಂದರೆ, ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಅದನ್ನು ಅವರು ಗುರುತು ಹಿಡಿಯಬೇಕು. ಆಗ ಭೇಟಿ ಮಾಡುತ್ತೇನೆ" ಎಂದು ಸಾನ್ವಿ ಹೇಳಿದ್ದಾರೆ.
ಆದರೆ, ಈ ಹಿಂದೆ ಸಾನ್ವಿ ಸುದೀಪ್ ಒಮ್ಮೆ ಅಲ್ಲು ಅರ್ಜುನ್ ಜೊತೆ ವಿಡಿಯೋ ಕಾಲ್ನಲ್ಲಿ ಮಾತಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ನಾನು ಒಮ್ಮೆ ಅವರೊಂದಿಗೆ ಮಾತಾಡಿದ್ದೇವೆ. ನನ್ನ 20ನೇ ಬರ್ತ್ಡೇಗೆ ನನ್ನ ತಂದೆ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತಾಡಿಸಿದ್ದರು." ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ನೆಪೋಟಿಸಂ ಬಗ್ಗೆನೂ ಸಾನ್ವಿ ಮಾತಾಡಿದ್ದಾರೆ. "ನೆಪೋಟಿಸಂ ಅನ್ನು ದೊಡ್ಡ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಎಲ್ಲಾ ಕಡೆಗೂ ಸೇಮ್. ನಿಮ್ಮ ತಂದೆ ಇಂಜಿನಿಯರ್ ಆಗಿದ್ದರೆ, ಇಲ್ಲ ಬ್ಯುಸಿನೆಸ್ ಮಾಡುತ್ತಿದ್ದರೆ ಅದನ್ನು ತಮ್ಮ ಮುಂದಿನ ಪೀಳಿಗೆಯೂ ಮಾಡಬೇಕು ಅಂತ ಬಯಸುತ್ತಾರೆ. ತಾವು ಮಾಡಿದ್ದನ್ನೇ ತಮ್ಮ ಮಕ್ಕಳು ಮಾಡಬೇಕು ಅಂತ ಬಯಸುತ್ತಾರೆ. ಅದು ಕೂಡ ನೆಪೋಟಿಸಂ. ಇಲ್ಲಿ ಚಿತ್ರರಂಗವನ್ನು ತುಂಬಾನೇ ಹೈಲೈಟ್ ಮಾಡಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಅನುಕೂಲ ಹಾಗೂ ಅನಾನುಕೂಲ ಅನ್ನೋದು ಇದ್ದೇ ಇರುತ್ತೆ" ಎಂದು ಸಾನ್ವಿ ಸುದೀಪ್ ಹೇಳಿಕೊಂಡಿದ್ದಾರೆ.
ಸಾನ್ವಿ ಸುದೀಪ್ ತಂದೆಯಂತೆಯೇ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಾಡುವುದರಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಸಾನ್ವಿ ಮುಂದಿನ ಗುರಿ ಇರೋದು ನಟನೆಯ ಕಡೆಗೆ. ಅದಕ್ಕಾಗಿ ಈಗಾಗಲೇ ತರಬೇತಿಯನ್ನು ಪಡೆದು ಬಂದಿದ್ದಾರೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಲ್ಕು ತಿಂಗಳುಗಳ ಕಾಲ ನಟನೆಯಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿದ್ದಾರೆ.
ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ತಂದೆ ಸುದೀಪ್ ಅವರೊಂದಿಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಸಿಂಗಿಂಗ್, ಸ್ಕ್ರಿಪ್ಟ್, ಡೈರೆಕ್ಷನ್ಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಸಿನಿಮಾನೇ ವೃತ್ತಿಯಾಗಿ ಮಾಡಿಕೊಳ್ಳಬೇಕು ಅಂದಾಗ ಸಾಕಷ್ಟು ಬಾರಿ ಯೋಚನೆ ಮಾಡಬೇಕು. ವೃತ್ತಿ ಬದುಕನ್ನು ಹೇಗೆ ಆರಂಭ ಮಾಡಬೇಕು ಅನ್ನೋದನ್ನು ಸಾಕಷ್ಟು ಬಾರಿ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡಬೇಕು ಎಂದು ಹೇಳಿಕೊಂಡಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಪುತ್ರಿ ಸಾನ್ವಿ 'ಮ್ಯಾಕ್ಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ತಂದೆಯ ಸಿನಿಮಾಗಾಗಿ ಒಂದು ಹಾಡನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಆ ಹಾಡನ್ನು ಈಗಾಗಲೇ ವೇದಿಕೆ ಮೇಲೆ ಸಾನ್ವಿ ಹಾಡಿದ್ದಾರೆ. ಸಿನಿಮಾದಲ್ಲಿಯೇ ಬದುಕು ಕಟ್ಟಿಕೊಳ್ಳುವುದಕ್ಕೆ ನಿರ್ಧರಿಸಿರುವುದರಿಂದ ಸಾನ್ವಿಯ ಮುಂದಿನ ಹೆಜ್ಜೆ ಹೇಗಿರುತ್ತೆ ಅನ್ನೋದು ಕುತೂಹಲವನ್ನು ಮೂಡಿಸುತ್ತಿದೆ. ಸಾನ್ವಿ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಾರಾ? ಇಲ್ಲ ಫಿಮೇಲ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರಾ? ಅಥವಾ ತಂದೆಯಂತೆ ನಟನೆ ಹಾಗೂ ನಿರ್ದೇಶನ ಎರಡರಲ್ಲೂ ತಮ್ಮ ಕೈ ಚಳಕ ತೋರಿಸುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











