Chiranjeevi Sarja: 2 ಬಾರಿ ಕುಸಿದುಬಿದ್ದಿದ್ದ ಚಿರು.. ಅಗಲುವ ಕೊನೆಯ 3 ದಿನ ಏನೆಲ್ಲಾ ಆಯ್ತು?
ಸರ್ಜಾ ಕುಟುಂಬದ ಹೀರೊ ಚಿರಂಜೀವಿ ಸರ್ಜಾ ಅಗಲಿಕೆಯ ಶಾಕ್ನಿಂದ ಇನ್ನೂ ಅವರ ಅಭಿಮಾನಿಗಳು ಹಾಗೂ ಕುಟುಂಬ ಹೊರಬಂದಿಲ್ಲ. ಇಂದಿಗೂ ಅಣ್ಣ ನೆನಪಿನಲ್ಲಿಯೇ ಧ್ರುವ ಸರ್ಜಾ ಇದ್ದಾರೆ. ಅತ್ತ ಮೇಘನಾ ತಮ್ಮ ಮಗನಲ್ಲಿಯೇ ಚಿರುವನ್ನು ಕಾಣುತ್ತಿದ್ದಾರೆ.
2020, ಜೂನ್ 7 ಸರ್ಜಾ ಕುಟುಂಬದ ಪಾಲಿಗೆ ಕಹಿ ಘಟನೆ. ಈ ದಿನವನ್ನು ಅವರೆಂದಿಗೂ ಮರೆಯೋದಕ್ಕೆ ಸಾಧ್ಯವೇ ಇಲ್ಲ. ಚಿರಂಜೀವಿ ಸರ್ಜಾ ದಿಢೀರನೇ ಇದ್ದಕ್ಕಿದ್ದ ಹಾಗೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇಡೀ ಸರ್ಜಾ ಕುಟುಂಬದ ಅಭಿಮಾನಿಗಳು ಕಣ್ಣೀರು ಹಾಕಿದ್ದರು.

ಚಿರಂಜೀವಿ ಸರ್ಜಾ ಅಗಲುವ ಮುನ್ನ ಏನಾಯ್ತು? ಚಿರಂಜೀವಿ ಸರ್ಜಾ ಅವರ ಕೊನೆಯ ಮೂರು ದಿನಗಳು ಹೇಗಿದ್ದವು? ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಸಿಕ್ಕಿರಲಿಲ್ಲ. ಅವರ ಅಭಿಮಾನಿಗಳಿಗೆ ಸವಿಸ್ತಾರವಾಗಿ ಹೇಳಿರಲಿಲ್ಲ. ಆದ್ರೀಗ ಸುಂದರ್ ರಾಜ್ ತಮಿಳಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿರಂಜೀವಿ ಸರ್ಜಾ ಅವರ ಕೊನೆಯ ಮೂರು ದಿನಗಳು ಹೇಗಿತ್ತು? ಅನ್ನೋದನ್ನು ವಿವರಿಸಿದ್ದಾರೆ.
"ಚಿರುಗೆ ಆರೋಗ್ಯ ಸಮಸ್ಯೆ ಇರಲಿಲ್ಲ"
ಚಿರಂಜೀವಿ ಸರ್ಜಾ ಹೊಸ ಸಿನಿಮಾಗೆ ತಯಾರಿ ನಡೆಸುತ್ತಿದ್ದರು. ಇದಕ್ಕಾಗಿ ಹೆವೀ ವರ್ಕ್ಔಟ್ ಮಾಡುತ್ತಿದ್ದರು. ಅದರದ್ದೇ ಏನೋ ಸಮಸ್ಯೆ ಆಗಿದೆ ಎಂದೆಲ್ಲ ಸುದ್ದಿ ಹಬ್ಬಿದ್ದವು. ಆದರೆ, ಚಿರುಗೆ ಯಾಕೆ ಹೀಗಾಯ್ತು? ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಅದಕ್ಕೀಗ ಹಿರಿಯ ನಟ ಸುಂದರ್ ರಾಜ್ ಪಿನ್ ಟು ಪಿನ್ ಡಿಟೈಲ್ಸ್ ಕೊಟ್ಟಿದ್ದಾರೆ. "ಚಿರಂಜೀವಿ ಸರ್ಜಾ ತುಂಬಾ ಆರೋಗ್ಯವಾಗಿದ್ದರು. ಅವರಿಗೆ ಆರೋಗ್ಯ ಸಮಸ್ಯೆ ಏನೂ ಇರಲಿಲ್ಲ. 2020, ಜೂನ್ 7ನೇ ತಾರೀಕು ಅವರು ನಮ್ಮನ್ನೆಲ್ಲ ಅಗಲಿದ್ದರು. ಜೂನ್ 4ನೇ ತಾರೀಕಿನಂದು ನಾನು ಚಿರು ಕಾರ್ಡ್ಸ್ ಆಡಿದ್ದೆವು. ಆ ಮೇಲೆ ಸ್ಟೋರಿ ಕೇಳುವುದು ಇದೆ ಎಂದು ಹೋದರು. ಜೂನ್ 5ನೇ ತಾರೀಕು ಕಿಶೋರ್ ಸರ್ಜಾ ಅವರ ಬರ್ತ್ಡೇ ಇತ್ತು. ಬರಬೇಕು ಅಂತ ಹೇಳಿದರು. ನಾವೆಲ್ಲ ಭೇಟಿಯಾಗಿದ್ದೆವು." ಎಂದು ಚಿರು ಅಗಲುವುದಕ್ಕೂ 3 ದಿನಗಳ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ.
ಬರ್ತ್ಡೇ ಪಾರ್ಟಿಯಲ್ಲಿ ಗ್ರೂಪ್ ಫೋಟೊ
"ಈ ಪಾರ್ಟಿಯಲ್ಲಿ ಚಿರಂಜೀವಿ ಸರ್ಜಾ ಗ್ರೂಪ್ ಫೋಟೊ ತೆಗಿಸಿಕೊಂಡಿದ್ದರು. ಅದನ್ನು ಅಂದೇ ಯಾಕೆ ತೆಗೆಸಿಕೊಂಡರು ಅನ್ನೋದು ಅಂದು ಗೊತ್ತಾಗಿಲ್ಲ. ಈಗ ಇಂತಹದ್ದೊಂದು ಘಟನೆ ನಡೀತಾ ಅಂತ ಈಗ ಅನಿಸುತ್ತಿದೆ. ಕಿಶೋರ್ ಸರ್ಜಾ ಪುತ್ರ ಹಾಗೂ ಇವರಿಬ್ಬರು ಪಕ್ಕದಲ್ಲಿಯೇ ನಿಂತು ಫೋಟೊ ತೆಗೆಸಿಕೊಂಡಿದ್ದರು. ಬರ್ತ್ಡೇ ಪಾರ್ಟಿ ಎಲ್ಲಾ ಆಯ್ತು. ನಾವು ವಾಪಾಸ್ ಬಂದೆವು" ಎಂದು ಬರ್ತ್ಡೇ ಪಾರ್ಟಿಯಲ್ಲಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ.

"ಒಂದು ದಿನ ಮುನ್ನ ಕುಸಿದು ಬಿದ್ದಿದ್ದರು"
ಚಿರು ಅಗಲುವ ಒಂದು ದಿನ ಮುನ್ನ ಮನೆಯಲ್ಲಿಯೇ ಕುಸಿದು ಬಿದ್ದಿದ್ದರು. "ಜೂನ್ 6ನೇ ತಾರೀಕು ವಾಟರ್ ಟ್ಯಾಂಕ್ನಲ್ಲಿ ಏನೋ ಸಮಸ್ಯೆ ಇತ್ತು. ಅಂದು ಕಡಿಮೆ ನಿದ್ದೆ ಮಾಡಿದ್ದರೋ ಏನೋ ಗೊತ್ತಿಲ್ಲ. ಅವರು ಟಾಪ್ ಫ್ಲೋರ್ಗೆ ಹತ್ತಿದ್ದರು. ಅಲ್ಲಿಂದ ವಾಪಸ್ ಇಳಿದು ಬಂದ ಕೂಡಲೇ ಕುಸಿದು ಬಿದ್ದಿದ್ದರು. ತಕ್ಷಣ ಮತ್ತೆ ಎದ್ದು ನಿಂತಿದ್ದರು. ಕೂಡಲೇ ಅವರಿಗೆ ಪರೀಕ್ಷೆ ಮಾಡಿಸಲಾಯ್ತು. ರಕ್ತ ಪರೀಕ್ಷೆ, ಇಸಿಜಿ ಎಲ್ಲ ಮಾಡಲಾಯ್ತು. ಆಗ ನಮಗೆ ಓವರ್ ವರ್ಕ್ಔಟ್ ಮಾಡಿದ್ದಕ್ಕೆ ಹೀಗಾಗಿರಬಹುದು ಅಂತ ಅನಿಸಿತ್ತು." ಎಂದು ಹಿಂದಿನ ಏನು ನಡೀತು ಅನ್ನೋದನ್ನು ಹೇಳಿದ್ದಾರೆ.
"ಚಿರುಗೆ ಫುಲ್ ಬಾಡಿ ಸ್ಕ್ಯಾನ್"
"ನಾನು ಚಿರುಗೆ ಇಡೀ ಬಾಡಿ ಸ್ಕ್ಯಾನ್ ಮಾಡಿಸಿಕೊಳ್ಳುವಂತೆ ಹೇಳಿದ್ದೆ. ಅವರು ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದರು. ಆಗ ಗೊತ್ತಾಗಿದ್ದು ಏನಂದ್ರೆ, ಮೆದುಳಿನಲ್ಲಿ ಸಣ್ಣದಾಗಿ ರಕ್ತ ಹೆಪ್ಪುಗಟ್ಟಿತ್ತು. ವೈದ್ಯರು ವಾಹನ ಚಲಾವಣೆ ಮಾಡಬೇಡಿ. ವಿಶ್ರಾಂತಿ ಪಡೆಯಿರಿ ಎಂದು ಹೇಳಿದ್ದರು. ನಾವು ಬಳಿಕ ವಾಪಸ್ ಬಂದು ಬಿಟ್ಟೆವು." ಚಿರು ಅಗಲುವ ಹಿಂದಿನ ದಿನದ ಬಾಡಿ ಸ್ಕ್ಯಾನ್ ಮಾಡಿಸಿದ್ದೆವು ಎಂದು ಹೇಳಿದ್ದಾರೆ.
2020, ಜೂನ್ 7ರಂದು ನಡೆದಿದ್ದೇನು?
"ಭಾನುವಾರ ಮಧ್ಯಾಹ್ನ 1 ಗಂಟೆಗೆ ಅವರ ಮನೆಗೆ ನನ್ನ ನಾಯಿ ಕರೆದುಕೊಂಡು ಹೋದೆ. ಅವರೆಲ್ಲ ಊಟ ಮಾಡುತ್ತಿದ್ದರು. ಅಲ್ಲಿ ಚಿರು ಇರಲಿಲ್ಲ. ಏಲ್ಲಿ ಎಂದು ಮಗಳನ್ನು ಕೇಳಿದೆ. ಆಗ ಅವಳು ಮಲಗಿದ್ದಾರೆ ಎಂದಳು. ಹಾಗಾಗಿ ವಾಪಸ್ ಬಂದುಬಿಟ್ಟೆ. ನಾನು ಬಂದ್ಮೇಲೆ ಚಿರು ಎದ್ದು ಬಂದು ಫ್ಯಾನ್ ಹಾಕುವಂತೆ ಹೇಳಿದ್ದರಂತೆ. ಫ್ಯಾನ್ ಹಾಕಿದ ಒಂದೇ ಸೆಕೆಂಡ್ನಲ್ಲಿ ಕುಸಿದು ಬಿದ್ದರು. ಮನೆಗೆ ಬಂದು 10 ನಿಮಿಷ ಆಗಿರಲಿಲ್ಲ. ಅವರ ಸಹಾಯಕರು ಫೋನ್ ಮಾಡಿ ಅಣ್ಣ ಸೀರಿಯಸ್ ಎಂದು ಹೇಳಿದ್ರು. ಓಡಿ ಹೋಗಿ ನೋಡಿದರೆ, ಚಿರು ನೋ ಮೋರ್ ಅಂದರು." ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಸುಂದರ್ ರಾಜ್ ಭಾವುಕರಾಗಿದ್ದಾರೆ.


Click it and Unblock the Notifications











