ಅವಳ ಹೆಜ್ಜೆ ಮಹಿಳಾ ಕನ್ನಡ ಕಿರುಚಿತ್ರೋತ್ಸವದ ₹1 ಲಕ್ಷ ರೂ ಗೆದ್ದ 'ರೊಟ್ಟಿ'; ಯಾವ್ಯಾವ ಸಿನಿಮಾಗೆ ಬಂದು ಪ್ರಶಸ್ತಿ
ಕನ್ನಡದಲ್ಲಿ ಕಿರು ಚಿತ್ರೋತ್ಸವದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿನಿಮಾ ಮೇಲೆ ಆಸಕ್ತಿವುಳ್ಳವರು ಕಿರು ಚಿತ್ರದ ಕಡೆಗೆ ವಾಲುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಫಿಲ್ಮ್ ಮೇಕಿಂಗ್ನಲ್ಲಿ ತೊಡಗಿಸಿಕೊಂಡಿದ್ದು ಗಮನಿಸಬಹುದಾಗಿದೆ. ಇವರನ್ನು ಉತ್ತೇಜಿಸುವ ಸಲುವಾಗಿ ಮಹಿಳಾ ಕಿರು ಚಿತ್ರೋತ್ಸವವನ್ನು ಇತ್ತೀಚೆಗೆ ಆಯೋಜನೆ ಮಾಡಲಾಗಿತ್ತು. ಈ ಕಾಂಪಿಟೇಷನ್ನಲ್ಲಿ ಒಂದು ಸಿನಿಮಾಗೆ ಒಂದು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗಿದೆ.
ಗುಬ್ಬಿವಾಣಿ ಟ್ರಸ್ಟ್ 'ಅವಳ ಹೆಜ್ಜೆ' ಮಹಿಳಾ ಕನ್ನಡ ಕಿರುಚಿತ್ರೋತ್ಸವ 2026 ಅನ್ನು ಆಯೋಜಿಸಿತ್ತು. ಈ ಕಿರುಚಿತ್ರೋತ್ಸವದಲ್ಲಿ ಸುಪ್ರಿಯಾ ಶಂಕರ ನಿಪ್ಪಾಣಿ ನಿರ್ದೇಶಿಸಿದ 'ರೊಟ್ಟಿ' ಸಿನಿಮಾ 1 ಲಕ್ಷ ಬಹುಮಾನದ 'ಅವಳ ಹೆಜ್ಜೆ' ಕಿರು ಚಿತ್ರೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದು ಮಹಿಳಾ ಫಿಲ್ಮ್ ಮೇಕರ್ಸ್ಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಪ್ರಶಸ್ತಿ ಗೆದ್ದ 'ರೊಟ್ಟಿ' ಸಿನಿಮಾದ ನಿರ್ದೇಶಕಿ ಸುಪ್ರಿಯಾ ಶಂಕರ ನಿಪ್ಪಾಣಿ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಷ್ಟೇ ಅಲ್ಲದೆ, ಕಲಾವಿದೆಯಾಗಿ, ಸಾಮಾಜಿಕ ಕಾರ್ಯಕರ್ತೆ ಆಗಿಯೂ ಜನಪ್ರಿಯರಾಗಿದ್ದಾರೆ. 'ರೊಟ್ಟಿ'ಗೂ ಮುನ್ನ 'ಅಪ್ಪ ಬೆಳ್ಳಿ ಅಲ್ಲ' ಮತ್ತು 'ರಾಜಿ' ಅಂತ ಕಿರುಚಿತ್ರಗಳು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದವು. ಇಷ್ಟೇ ಅಲ್ಲದೇ, ವಿವಿಧ ಭಾಷೆಗಳಲ್ಲಿಯೂ ಸಹ-ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಮೇಕಿಂಗ್ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಸುಪ್ರಿಯಾ ತಮ್ಮದೇ ಬ್ಯಾನರ್ನಲ್ಲಿ 'ಚುರುಮುರಿಯಾ' ಎಂಬ ಕಲಾತ್ಮಕ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
'ಅವಳ ಹೆಜ್ಜೆ' ಪ್ರಶಸ್ತಿಯ ಜೊತೆಗೆ ಇನ್ನೂ ಕೆಲವು ವಿವಿಧ ವಿಭಾಗಗಳಲ್ಲಿಯೂ ಪ್ರಶಸ್ತಿಯನ್ನು ನೀಡಲಾಗಿದೆ. ತಲಾ 10,000 ರೂಪಾಯಿ ಬಹುಮಾನವನ್ನು ನಾಲ್ಕು ಕಿರುಚಿತ್ರಗಳಿಗೆ ನೀಡಲಾಗಿದೆ. ಜನಪ್ರಿಯ ಪತ್ರಕರ್ತೆ, ಕಾಸ್ಟಿಂಗ್ ಡೈರೆಕ್ಟರ್ ಹಾಗೂ ಸ್ಕ್ರಿಪ್ಟ್ ಮೆಂಟರ್ ಆಗಿರುವ ಸುನೈನಾ ಸುರೇಶ್ ನಿರ್ದೇಶಿಸಿದ ಚೊಚ್ಚಲ ಸಿನಿಮಾ 'ಮೌನ ರಾಗ'ಗೆ 'ಗೂಡಿನಿಂದ ಗಗನದಡೆಗೆ' ವಿಶೇಷ ವಿಭಾಗದ ಬಹುಮಾನ ಲಭಿಸಿದೆ. ಹಾಗೇ ಶ್ರೇಯಾ ಸುನಿಲ್ ಸಿನಿಮಾ 'ಆ ಮಾಡಿ'ಗೆ 'ಹಾಸ್ಯ ಮತ್ತು ವಿಡಂಬನೆ' ವಿಭಾಗದಿಂದ ಬಹುಮಾನವನ್ನು ನೀಡಿ ಗೌರವಿಸಲಾಗಿದೆ.
ಇನ್ನು 'ಸಾಮಾಜಿಕ ಬದಲಾವಣೆಯ ಕಥಾವಸ್ತು' ವಿಶೇಷ ವಿಭಾಗದಲ್ಲಿ ವನು ಪಾಟೀಲ್ ಅವರ 'ನಿತ್ಯ' ಚಿತ್ರಕ್ಕೆ ನೀಡಲಾಗಿದೆ. ಇದು ಬಾಲ್ಯದ ಆಘಾತವನ್ನು ಮೆಟ್ಟಿ ನಿಲ್ಲುವ ಕಥಾಹಂದರ ಹೊಂದಿದೆ. ಹಾಗೇ ಮಾನವ-ವನ್ಯಜೀವಿ ಸಹಬಾಳ್ವೆಯನ್ನು ಬಿಂಬಿಸುವ ಸೌರಭ ರಾವ್ ಅವರ 'ಹುಲಿಯಪ್ಪ' ಸಾಕ್ಷ್ಯ ಚಿತ್ರಕ್ಕೂ ಬಹುಮಾನ ನೀಡಲಾಗಿದೆ. 'ಹುಲಿಯಪ್ಪ' ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿಯನ್ನು ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿಗೆ ಮೀಸಲಾಗಿರುವ ಸಂಸ್ಥೆ 'ಏವಿಯನ್ ಮತ್ತು ರೆಪ್ಟೈಲ್ ಪುನರ್ವಸತಿ ಕೇಂದ್ರ' ಪ್ರಾಯೋಜಿಸಿತ್ತು.

ಹಾಗಂತ ಕೇವಲ ಕಿರು ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನೇ ನೀಡಿಲ್ಲ. ಸಿನಿಮಾ ಪ್ರದರ್ಶನದ ಬಳಿಕ 'ಸಿನೆಮಾದಲ್ಲಿ ಅವಳ ಹೆಜ್ಜೆ: ಅ - ಅಃ ವರೆಗೆ' ಎಂಬ ವಿಷಯದ ಕುರಿತು ಗಂಭೀರ ಚರ್ಚಾಗೋಷ್ಠಿ ನಡೆಯಿತು. ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲೆ ಅವರು ನಡೆಸಿಕೊಟ್ಟ ಈ ಗೋಷ್ಠಿಯಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟಿಯರಾದ ನೀತು ಶೆಟ್ಟಿ (ಗಾಳಿಪಟ), ಗ್ರೀಷ್ಮಾ ಶ್ರೀಧರ್ (ನಾನು ಕುಸುಮ) ಚಿತ್ರ ನಿರ್ದೇಶಕಿ ಸಂಜೋತಾ ಭಂಡಾರಿ (ಪೆನ್ ಟು ಪ್ರೀಮಿಯರ್) ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ಸಂಗೀತಾ ನಂಜುಂಡಸ್ವಾಮಿ (ಬೆಳಗುತಿರಲಿ ಬೆಳ್ಳಿತೆರೆ ವೇದಿಕೆ) ಪಾಲ್ಗೊಂಡಿದ್ದರು. ಕಳೆದ 15 ವರ್ಷಗಳಲ್ಲಿ ಉದ್ಯಮದಲ್ಲಿ ಮಹಿಳೆಯರ ಪಾತ್ರಗಳ ಬೆಳವಣಿಗೆಯ ಬಗ್ಗೆ ಸದಸ್ಯರು ಚರ್ಚಿಸಿದರು. ಭವಿಷ್ಯದ ಬೆಳವಣಿಗೆಗೆ ಮಾರ್ಗದರ್ಶನ ಮತ್ತು ಮಹಿಳಾ ಒಗ್ಗಟ್ಟು ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು. ತಮ್ಮ ಸ್ವಂತ ಅನುಭವಗಳನ್ನು ಆಧರಿಸಿ, ಅವರು ಆಕಾಂಕ್ಷಿ ವೃತ್ತಿಪರರಿಗೆ ತಾಳ್ಮೆ, ಶಿಸ್ತು ಮತ್ತು ಸಂಪೂರ್ಣ ದೃಢನಿಶ್ಚಯದಿಂದ ಉದ್ಯಮವನ್ನು ಪ್ರವೇಶಿಸಲು ಸಲಹೆ ನೀಡಿದರು.
ಅವಳ ಹೆಜ್ಜೆ ಮಹಿಳಾ ಕನ್ನಡ ಕಿರುಚಿತ್ರೋತ್ಸವದ ಮೂಲ ಆಶಯದ ಕುರಿತು ಗುಬ್ಬಿವಾಣಿ ಟ್ರಸ್ಟ್ನ ಸ್ಥಾಪಕ ಟ್ರಸ್ಟಿ ಮಾಲವಿಕ ಗುಬ್ಬಿವಾಣಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಇದು ಕೇವಲ ಒಂದು ಕಿರುಚಿತ್ರೋತ್ಸವವಲ್ಲ - ಇದು ಮಹಿಳೆಯರ ಅನುಭವಗಳು ಮತ್ತು ದೃಷ್ಟಿಕೋನಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಒಂದು ಚಳುವಳಿಯಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ ನಮಗೆ ಮರುಪ್ರದರ್ಶನಕ್ಕಾಗಿ ವಿನಂತಿಗಳು ಬರುತ್ತಿವೆ" ಎಂದು ಹೇಳಿದ್ದಾರೆ.


Click it and Unblock the Notifications
