ನಟಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸರ್ಜರಿ: ಜಾಲಿರೈಡ್ ರಹಸ್ಯ ಇನ್ನೂ ನಿಗೂಢ
ಲಾಕ್ಡೌನ್ ಉಲ್ಲಂಘಿಸಿ ಮಧ್ಯರಾತ್ರಿ ಜಾಲಿರೈಡ್ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಾಯ ಮಾಡಿಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಸರ್ಜರಿ ಮಾಡಲಾಗಿದೆ. ಹೊಟ್ಟೆನೋವು ಉಂಟಾಗಿದ್ದರಿಂದ ಮಾತ್ರೆ ಖರೀದಿಸಿದಲು ಸ್ನೇಹಿತರ ಸಹಾಯ ಕೇಳಿದ್ದೆ. ಅವರು ಕಾರ್ ತಂದಿದ್ದರಿಂದ ಅವರ ಜತೆಗೆ ತೆರಳಿದ್ದೆ. ಅದು ಜಾಲಿ ರೈಡ್ ಆಗಿರಲಿಲ್ಲ ಎಂದು ಶರ್ಮಿಳಾ ಮಾಂಡ್ರೆ ವಿವರಣೆ ನೀಡಿದ್ದರು ಎನ್ನಲಾಗಿದೆ. ಆದರೆ ಶರ್ಮಿಳಾ ಅವರಿಂದ ಇನ್ನೂ ಸಂಪೂರ್ಣ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ.
ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರಿದ್ದ ಕಾರು ವಸಂತನಗರ ಸಮೀಪದ ಅಂಡರ್ ಪಾಸ್ನಲ್ಲಿ ಪಿಲ್ಲರ್ಗೆ ಡಿಕ್ಕಿ ಹೊಡೆದಿತ್ತು. ಏಪ್ರಿಲ್ 3ರ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಅದರ ಹಿಂದಿನ ಅನೇಕ ಸಂಗತಿಗಳು ಇನ್ನೂ ಬಹಿರಂಗವಾಗಿಲ್ಲ. ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲು ಶರ್ಮಿಳಾ ಅವರೇ ಖುದ್ದಾಗಿ ಠಾಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

ಮುಖಕ್ಕೆ ಸರ್ಜರಿ
ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಗಂಭೀರ ಗಾಯವಾಗಿತ್ತು. ಅವರ ಗಲ್ಲ, ಮೂಗು ಹಾಗೂ ಎಡಭಾಗದ ಕೆನ್ನೆಯ ಬಳಿ ಪೆಟ್ಟಾಗಿತ್ತು. ಹೆಬ್ಬಾಳ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ಮಾಡಲಾಗಿದೆ ಎನ್ನಲಾಗಿದೆ.

ಗುಣಮುಖರಾದ ಬಳಿಕ ಹೇಳಿಕೆ
ಹೈಗ್ರೌಂಡ್ಸ್ ಸಂಚಾರ ಠಾಣೆಗೆ ಶರ್ಮಿಳಾ ಪರವಾಗಿ ಹಾಜರಾಗಿದ್ದ ಅವರ ಸಹೋದರ ಅಮಿತ್ ಮಾಂಡ್ರೆ, ಪೊಲೀಸರಿಗೆ ವಿವರಣೆ ನೀಡಲು ಮುಂದಾಗಿದ್ದರು. ಆದರೆ ಶರ್ಮಿಳಾ ಅವರೇ ಬಂದು ಹೇಳಿಕೆ ನೀಡಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಹೀಗಾಗಿ ಶರ್ಮಿಳಾ ಅವರು ಗುಣಮುಖರಾದ ನಂತರ ಬಂದು ಹೇಳಿಕೆ ದಾಖಲು ಮಾಡಲಿದ್ದಾರೆ ಎಂಬುದಾಗಿ ಅಮಿತ್ ಮಾಂಡ್ರೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣ ದಾಖಲಿಸಲು ವಕೀಲೆ ಮನವಿ
ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರಿಂದ ಪಡೆದುಕೊಂಡಿದ್ದ ಪಾಸ್ಅನ್ನು ಶರ್ಮಿಳಾ ಮತ್ತು ಅವರ ಸ್ನೇಹಿತರು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು ಎಂದು ವಕೀಲೆ ಗೀತಾ ಮಿಶ್ರಾ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.

ವರದಿ ಆಧಾರದಲ್ಲಿ ಎಫ್ಐಆರ್
ಅಪಘಾತಕ್ಕೀಡಾದ ಜಾಗ್ವಾರ್ ಕಾರಿನಲ್ಲಿ ನಿಷೇಧಾಜ್ಞೆ ವಿನಾಯಿತಿ ಪಾಸ್ ಸಿಕ್ಕಿತ್ತು. ಅದನ್ನು ಕಾರು ಮಾಲೀಕ ಡಾನ್ ಥಾಮಸ್ ಪಡೆದುಕೊಂಡಿದ್ದರು. ಈ ಪಾಸ್ ದುರುಪಯೋಗಪಡಿಸಿಕೊಂಡು ಓಡಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದರೂ ಈ ಬಗ್ಗೆ ಸಂಚಾರ ಠಾಣೆ ಪೊಲೀಸರು ಸಿವಿಲ್ ಠಾಣೆಗೆ ವರದಿ ನೀಡಿಲ್ಲ. ತನಿಖಾಧಿಕಾರಿ ನೀಡುವ ವರದಿ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ. ಚೇತನ್ ಸಿಂಗ್ ಹೇಳಿದ್ದಾರೆ.

ಪ್ರಕರಣ ಮುಚ್ಚಿಹಾಕಲು ಪ್ರಯತ್ನ
ತನಿಖೆ ವೇಳೆ ಎಲ್ಲರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಅವರು ಸತ್ಯ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ. ಹಾಗೆಯೇ ಈ ಪ್ರಕರಣವನ್ನು ಮುಚ್ಚಿಹಾಕಲು ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಅಪಘಾತ ಪ್ರಕರಣದ ಕೆಲವು ಮಾಹಿತಿಗಳನ್ನು ಕಲೆಹಾಕಲು ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳು, ಮೊಬೈಲ್ ಕರೆಗಳ ವಿವರಗಳನ್ನು ಕಲೆಹಾಕಲು ಮುಂದಾಗಿದ್ದಾರೆ.


Click it and Unblock the Notifications











