ತಮಿಳು ನಟ ವಿಜಯ್ 'ಸಿಎಂ' ಆದ್ರೆ 'ಸರ್ಕಾರ' ಹೀಗಿರುತ್ತಂತೆ.!
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಸ್ಟಾರ್ ನಟರು ಸ್ಪರ್ಧೆ ಮಾಡಲಿದ್ದು, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದು ವಾಸ್ತವ.
ಆದ್ರೆ, ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರನ್ನ ಸೈಡಿಗೆ ತಳ್ಳಿ ತಮಿಳು ನಟ ವಿಜಯ್ ಸರ್ಕಾರ ನಡೆಸಲಿದ್ದಾರೆ ಎಂಬ ಮಾತು ಈಗ ತಮಿಳುನಾಡಿನಲ್ಲಿ ಹೆಚ್ಚು ಚರ್ಚೆಯಾಗ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ವಿಜಯ್ ಅವರ ಸಿನಿಮಾಗಳು, ಅವರ ಭಾಷಣಗಳು ಕಂಡು ಬರುತ್ತಿದೆ.
ರಜನಿಕಾಂತ್ ರೀತಿಯಲ್ಲೇ ಅತಿ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿರುವ ನಟ ವಿಜಯ್, ತಮ್ಮ ಹೊಸ ಸಿನಿಮಾ 'ಸರ್ಕಾರ್' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿದ ಒಂದೊಂದು ಮಾತು ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ನೀಡಿದೆ. ಒಂದು ವೇಳೆ ನಾನು ಸಿಎಂ ಆದ್ರೆ ಏನು ಮಾಡುತ್ತೇನೆ ಎಂದು ಕೂಡ ಹೇಳಿಕೊಂಡಿರುವುದು ನಿಜಕ್ಕೂ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ, ವಿಜಯ್ ಏನಂದ್ರು.? ಮುಂದೆ ಓದಿ....

ನಾನು ಸಿಎಂ ಅಲ್ಲಾ...
ವಿಜಯ್ ಅಭಿನಯದ 'ಸರ್ಕಾರ್' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಈಗಾಗಲೇ ಈ ಚಿತ್ರದ ಟೈಟಲ್ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಈ ಸಿನಿಮಾದಲ್ಲಿ ವಿಜಯ್ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾಗಿತ್ತು. ಆದ್ರೆ, ಅದು ಸುಳ್ಳು ಎಂದು ಸ್ವತಃ ವಿಜಯ್ ಸ್ಪಷ್ಟ ಪಡಿಸಿದ್ದಾರೆ. ''ಮೆರ್ಸಲ್ ಚಿತ್ರದಲ್ಲಿ ಸ್ವಲ್ಪ ರಾಜಕೀಯವಿತ್ತು. ಇದರಲ್ಲಿ ರಾಜಕೀಯವನ್ನೇ ಮೆರ್ಸಲ್ ಮಾಡಿದ್ದಾರೆ'' ಎಂದು ಸಿನಿಮಾ ಬಗ್ಗೆ ತಿಳಿಸಿದರು.

ನಿಜ ಜೀವನದಲ್ಲಿ ಸಿಎಂ ಆದ್ರೆ.?
ಇನ್ನು ಕಾರ್ಯಕ್ರಮದ ನಿರೂಪಕ ಪ್ರಸನ್ನ ವಿಜಯ್ ಅವರ ಬಳಿ, ಸರ್ ನೀವು ನಿಜ ಜೀವನದಲ್ಲಿ ಸಿಎಂ ಆದ್ರೆ ನೀವು ಮಾಡುವ ಮೊದಲ ಕೆಲಸವೇನು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್ 'ನಿಜ ಜೀವನದಲ್ಲಿ ಸಿಎಂ ಆದ್ರೆ, ಸಿಎಂ ರೀತಿ ನಟಿಸಲ್ಲ. ನಿಜವಾಗಲೂ ಸಿಎಂ ಆಗಿರುತ್ತೇನೆ' ಎಂದು ಹೇಳಿಕೊಂಡರು.

ಬದಲಾಯಿಸಬೇಕಾಗಿರುವುದು ಏನು.?
ಸಿಎಂ ಆದ ಬಳಿಕ ಮಾಡುವ ಮೊದಲ ಕೆಲಸ ಎಲ್ಲರೂ ಹೇಳುವುದೇ ಭ್ರಷ್ಟಚಾರ ಮುಕ್ತ ಮಾಡಬೇಕು. ಅದು ಹೇಗೆ ಅಂದ್ರೆ, ಅಧಿಕಾರದಲ್ಲಿರೋರು ಮತ್ತು ನಾಯಕರು ಚೆನ್ನಾಗಿದ್ರೆ, ಜನ ಸಾಮಾನ್ಯರು ಮತ್ತು ಕೆಳ ಹಂತದ ಜನರು ಎಲ್ಲರೂ ಉತ್ತಮವಾಗಿರ್ತಾರೆ. ಆದ್ರೆ, ಈಗ ಎಲ್ಲದಕ್ಕೂ ಲಂಚ ಕೊಡಬೇಕು. ಹುಟ್ಟಿದ ಪ್ರಮಾಣಪತ್ರಕ್ಕೂ ಲಂಚ ಜನನ ಪ್ರಮಾಣಪತ್ರಕ್ಕೂ ಲಂಚ ಕೊಡಬೇಕು'' ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು.

ರಾಜ ಉತ್ತಮವಾಗಿದ್ರೆ ಮಾತ್ರ ರಾಜ್ಯಹಿತ
''ಒಬ್ಬ ನಾಯಕ ಉತ್ತಮವಾಗಿದ್ರೆ, ಒಬ್ಬ ರಾಜ ಉತ್ತಮವಾಗಿದ್ರೆ ಸಹಜವಾಗಿ ಸಮಾಜನೂ ಚೆನ್ನಾಗಿರುತ್ತೆ. ಯಾವತ್ತಿದ್ರೂ ಧರ್ಮ ಮತ್ತು ನ್ಯಾಯವೇ ಗೆಲ್ಲುತ್ತೆ. ಆದ್ರೆ, ಸ್ವಲ್ಪ ಲೇಟ್ ಆಗುತ್ತೆ ಅಷ್ಟೇ. ಕಷ್ಟ-ನಷ್ಟಗಳನ್ನ ನೋವು ಅನುಭವಿಸಿದ್ದವನೇ ನಾಯಕನಾಗಿ ಬೆಳೆಯುತ್ತಾನೆ. ಅವನ ಆಡಳಿತದಲ್ಲಿ ನಡೆಯುವುದೇ ನಿಜವಾದ ಸರ್ಕಾರ'' ಎಂದು ವಿಜಯ್ ಹೇಳಿದರು.

ಸದ್ಯಕ್ಕೆ ಸ್ಪಷ್ಟತೆ ಇಲ್ಲ...
ಅಂದ್ಹಾಗೆ, ವಿಜಯ್ ಅವರು ಮಾತನಾಡಿದ ಈ ಮಾತುಗಳನ್ನ ಕೇಳಿದ್ರೆ, ರಾಜಕೀಯದ ಬಗ್ಗೆ ಅವರಿಗೆ ಆಸಕ್ತಿ ಇರುವುದು ಗೊತ್ತಾಗುತ್ತೆ. ಆದ್ರೆ, ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬುದು ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಇಷ್ಟೆಲ್ಲಾ ಹೇಳುವಾಗಲೂ ಕೂಡ ವಿಜಯ್ ಅವರು ''ನಾನು ಯಾರನ್ನ ಉದ್ದೇಶವಾಗಿಟ್ಟುಕೊಂಡು ಹೇಳುತ್ತಿಲ್ಲ. ಯಾವ ಪಕ್ಷವನ್ನ ಟಾರ್ಗೆಟ್ ಮಾಡ್ತಿಲ್ಲ'' ಎಂದು ಪದೇ ಪದೇ ಹೇಳಿದ್ದು ಗಮನಿಸಬೇಕು.


Click it and Unblock the Notifications











