ದಕ್ಷಿಣದ ರಾಜಕಾರಣದಲ್ಲಿ ಹೊಸ ಅಧ್ಯಾಯ: ಸಿಎಂ ಡಿಕೆ ಶಿವಕುಮಾರ್ಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಭಾಶಯ
ದಕ್ಷಿಣ ಭಾರತದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಅದರಲ್ಲೂ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಕೇರಳದಲ್ಲಿ ಹೊಸ ಸಿಎಂ ನೇಮಕವಾಗಿದ್ದಾರೆ. ತಮಿಳುನಾಡಿನಲ್ಲಿ ಜೋಸೆಫ್ ವಿಜಯ್ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ, ಇತ್ತ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿ ರಾಜ್ಯವನ್ನು ಇಂದಿನಿಂದ (ಜೂನ್ 3) ಮುನ್ನಡೆಸುತ್ತಿದ್ದಾರೆ.
ಕನಕಪುರ ಬಂಡೆ ಎಂದೇ ಜನಪ್ರಿಯರಾಗಿರುವ ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಭಾಶಯಗಳು ಹರಿದು ಬರುತ್ತಿವೆ. ರಾಜಕೀಯ ಮುಖಂಡರು ಸಿಎಂ ಡಿಕೆ ಶಿವಕುಮಾರ್ಗೆ ವಿಶ್ ಮಾಡುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕರ್ನಾಟಕದ ಸಾರಥ್ಯ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ಗೆ ಎಕ್ಸ್ ಖಾತೆಯ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.

ಇತ್ತೀಚೆಗೆ ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆಗೆ ತಮಿಳು ಸಿನಿಮಾ ಸಿಎಂ ವಿಜಯ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲೇ ಮೋದಿಯನ್ನು ಭೇಟಿ ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟಲು ಭೂಮಿ ಪೂಜೆ ಮಾಡಲು ಮುಂದಾಗಿರುವ ಕರ್ನಾಟಕದ ನಡೆಯ ವಿರುದ್ಧ ದೂರನ್ನು ನೀಡಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು ವಿಜಯ್ ಸರ್ಕಾರಕ್ಕೆ ಕಠಿಣ ಸವಾಲು ಆಗಬಹುದು.
ಸಿಎಂ ಡಿಕೆಶಿಗೆ ಶುಭಕೋರಿದ ಸಿಎಂ ವಿಜಯ್
ಈ ಬೆನ್ನಲ್ಲೇ ಜೋಸೆಫ್ ವಿಜಯ್ ತಮಿಳುನಾಡು ಸಿಎಂಒ ಎಕ್ಸ್ ಖಾತೆಯ ಮೂಲಕ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಮಿಳು ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲೂ ಶುಭ ಕೋರಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಹಾಗೂ ವಿಜಯ್ ನಡುವಿನ ಬಾಂಧವ್ಯ ಹೇಗಿರುತ್ತೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
"ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಗೌರವಾನ್ವಿತ ಡಿ.ಕೆ. ಶಿವಕುಮಾರ್ ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು" ಎಂದು ವಿಜಯ್ ತಮಿಳುನಾಡು ಸಿಎಂಒ ಎಕ್ಸ್ ಖಾತೆಯ ಮೂಲಕ ಶುಭ ಕೋರಿದ್ದಾರೆ.


Click it and Unblock the Notifications