ತೆಲುಗು ನಟನ ಕಾರು ಅಪಘಾತ: ಸಿಸಿಟಿವಿ ದೃಶ್ಯ ನೋಡಿದ್ಮೇಲೆ 'ಸ್ಟಾರ್' ಮೇಲೆ ಅನುಮಾನ.!
Recommended Video
ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣ, ಕನ್ನಡ ನಟ ದರ್ಶನ್ ಅವರ ಕಾರು ಅಪಘಾತದ ಘಟನೆ ನೆನಪಿರಬಹುದು. ಇದೀಗ, ಅದೇ ರೀತಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಮತ್ತೊಂದು ಕಾರು ಅಪಘಾತ ನಡೆದಿದೆ.
ಮಂಗಳವಾರ ರಾತ್ರಿ ಹೈದ್ರಾಬಾದ್ ನ ಅಲ್ಕಾಪುರ್ ಟೌನ್ ಷಿಪ್ ವೃತ್ತದ ಬಳಿ, ಡಿವೈಡರ್ ಗೆ ಡಿಕ್ಕಿ ಸ್ಟಾರ್ ನಟನ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರಿನಿಂದ ಆ ನಟ ಇಳಿದು ಓಡಿ ಹೋಗಿರುವ ದೃಶ್ಯವೂ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಅಪಘಾತದ ಬಳಿಕ ಆ ನಟ ಓಡಿ ಹೋಗಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿತ್ತು.
ಕಾರಿನಿಂದ ಇಳಿದು ಓಡಿ ಹೋದ ವ್ಯಕ್ತಿ ತೆಲುಗು ಚಿತ್ರರಂಗದ ಯುವ ನಟ ರಾಜ್ ತರುಣ್ ಎಂದು ಹೇಳಲಾಗುತ್ತಿತ್ತು. ಇದೀಗ, ಅದು ನಾನೇ ಎಂದು ಸ್ವತಃ ತರುಣ್ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ, ಈ ಅಪಘಾತ ಯಾಕೆ ಆಯಿತು? ರಾಜ್ ತರುಣ್ ಓಡಿ ಹೋಗಿದ್ದು ಯಾಕೆ? ಮುಂದೆ ಓದಿ....

ಯಾವುದೇ ಅಪಾಯವಾಗಿಲ್ಲ
ಡಿವೈಡರ್ ಗೆ ಡಿಕ್ಕಿ ಹೊಡೆದು ರಾಜ್ ತರುಣ್ ಅವರ ದುಬಾರಿ ವೋಲ್ವೋ ಕಾರು (TS09EX1100) ಅಪಘಾತಕ್ಕೆ ಒಳಗಾಗಿದೆ. ಆದ್ರೆ, ಈ ಅಪಘಾತದಲ್ಲಿ ಯಾರೊಬ್ಬರಿಗೂ ಗಾಯಗಳಾಗಲಿ ಅಥವಾ ನೋವು ಸಂಭವಿಸಿಲ್ಲ. ಹಾಗಾಗಿ, ಪ್ರಕರಣ ಗಂಭೀರವಾಗಿಲ್ಲ ಎನ್ನುವುದು ಪೊಲೀಸರ ಮಾಹಿತಿ ನೀಡಿದ್ದಾರೆ.

ರಾಜ್ ತರುಣ್ ಓಡಿ ಹೋಗಿದ್ದು ಯಾಕೆ?
ಕಾರು ಅಪಘಾತವಾದ ಬಳಿಕ ನಟ ರಾಜ್ ತರುಣ್ ಯಾಕೆ ಓಡಿ ಹೋದರು ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಈ ಅಪಘಾತ ನಡೆದ ಸಮಯದಲ್ಲಿ ರಾಜ್ ತರುಣ್ ಮದ್ಯಪಾನ ಸೇವಿಸಿರಬಹುದು, ಅದಕ್ಕೆ ಓಡಿ ಹೋಗಿದ್ದಾರೆ ಎಂಬ ಅನುಮಾನ ದೊಡ್ಡದಾಗಿ ಕಾಡುತ್ತಿದೆ.

ಸ್ಪಷ್ಟನೆ ನೀಡಿದ ರಾಜ್ ತರುಣ್
''ಕಳೆದ ಮೂರು ತಿಂಗಳಿನಿಂದ ಆ ವೃತ್ತದಲ್ಲಿ ಅಪಘಾತಗಳು ಹೆಚ್ಚಾಗಿದೆ. ನರ್ಸಿಂಗ್ ವೃತ್ತದಲ್ಲಿ ಸಡನ್ ಆಗಿ ಬಲ ತಿರುವು ತೆಗೆದುಕೊಳ್ಳಬೇಕು, ಅಲ್ಲಿ ಬಂದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದೆ. ಒಂದು ಕ್ಷಣ ನನಗೆ ಆತಂಕವಾಯಿತು. ಅದೃಷ್ಟವಶಾತ್ ನಾನು ಸೀಟ್ ಬೆಲ್ಟ್ ಹಾಕಿದ್ದೆ. ಅದೇ ನನ್ನನ್ನು ಕಾಪಾಡಿದ್ದು. ಆತಂಕದಲ್ಲಿ ಇಳಿದು ಮನೆಗೆ ಓಡಿ ಬಂದೆ. ಇಷ್ಟೇ ಆಗಿದ್ದು. ಸದ್ಯಕ್ಕೆ ನಾನು ಆರೋಗ್ಯವಾಗಿದ್ದೇನೆ. ಆದಷ್ಟೂ ಬೇಗ ನನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ಯಾರು ಈ ರಾಜ್ ತರುಣ್?
ಸದ್ಯ ಕಾರು ಮಾಲೀಕರ ಮೇಲೆ ಸುಮೋಟೊ ಕೇಸ್ ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನುಳಿದಂತೆ 2013ರಲ್ಲಿ ಉಯ್ಯಾಲ ಜಂಪಾಲ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶ ಮಾಡಿದ್ದ ರಾಜ್ ತರುಣ್, ಕುಮಾರಿ 21ಎಫ್, ಅಂದಗಾಡು, ರಾಜುಗಾಡು ಎಂಬ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











