ತೆಲುಗಿನಲ್ಲಿ ಸದ್ದು ಮಾಡಿದ 'ಲವ್ ರೆಡ್ಡಿ' ಕನ್ನಡದಲ್ಲಿ ರಿಲೀಸ್; ದುನಿಯಾ ವಿಜಯ್, ಹೊಂಬಾಳೆ ಬೆಂಬಲ
ಕಳೆದ ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್ನಲ್ಲಿ 'ಲವ್ ರೆಡ್ಡಿ' ಅನ್ನುವ ತೆಲುಗು ಸಿನಿಮಾ ಸದ್ದು ಮಾಡಿತ್ತು. ಆ ಸಿನಿಮಾದ ಪ್ರಸಾರ ಆಗುತ್ತಿದ್ದ ಚಿತ್ರಮಂದಿರಕ್ಕೆ ಈ ಸಿನಿಮಾದಲ್ಲಿ ನಟಿಸಿದ ಕನ್ನಡದ ನಟ ಹೋದಾಗ ಮಹಿಳೆಯೊಬ್ಬರು ರೊಚ್ಚಿಗೆದ್ದು ಕೆನ್ನೆಗೆ ಬಾರಿಸಿದ್ದರು. ಅದೇ ಸಿನಿಮಾ ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ದಿಗ್ಗಜರು ಈ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.
'ಲವ್ ರೆಡ್ಡಿ' ತೆಲುಗು ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಹೊಸಬರೇ ಸೇರಿ ನಿರ್ಮಿಸಿದ್ದ ಈ ಸಿನಿಮಾಗೆ ಮೆಚ್ವುಗೆ ವ್ಯಕ್ತವಾಗಿತ್ತು. ಹೈದರಾಬಾದ್ನ ಸ್ಮರಣ್ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ರಗಡ್ ಲವ್ ಸ್ಟೋರಿ ಸಿನಿಮಾ ಆಗಿದ್ದರಿಂದ ತೆಲುಗು ಮಂದಿ ಇಷ್ಟ ಪಟ್ಟು ಈ ಸಿನಿಮಾವನ್ನು ನೋಡಿದ್ದರು. ಅದೇ ಸಿನಿಮಾವೀಗ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಂಜನ್ ಹಾಗೂ ಶ್ರಾವಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಕನ್ನಡದ ನಟ ಎನ್ ಟಿ ರಾಮಸ್ವಾಮಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ನಟನ ಅಭಿನಯವನ್ನೇ ನಿಜವೆಂದು ನಂಬಿ ಮಹಿಳೆಯೊಬ್ಬರು ಥಿಯೇಟರ್ನಲ್ಲಿ ಕಪಾಳಮೋಕ್ಷ ಮಾಡಿದ್ದರು. ಈ ಸಿನಿಮಾಗೆ ಕನ್ನಡದ 'ಭೀಮ' ದುನಿಯಾ ವಿಜಯ್ ಬೆಂಬಲ ಸೂಚಿಸಿದ್ದರೆ, ಹೊಂಬಾಳೆ ಫಿಲ್ಮ್ಸ್ ವಿತರಣೆಗೆ ಮುಂದಾಗಿದೆ.
'ಲವ್ ರೆಡ್ಡಿ' ಸಿನಿಮಾ ಅಂಧ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆಯುವ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಹೀಗಾಗಿ ಕನ್ನಡಿಗರಿಗೂ ಈ ಸಿನಿಮಾ ಇಷ್ಟ ಆಗುತ್ತೆ ಅಂತ ದುನಿಯಾ ವಿಜಯ್ ಹೇಳಿದ್ದರು. ಇತ್ತೀಚೆಗೆ ಕನ್ನಡ ವರ್ಷನ್ ಟ್ರೈಲರ್ ಅನ್ನು ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ರಿಲೀಸ್ ಮಾಡಿ ಹೊಸಬರ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಅಂದ್ಹಾಗೆ ಈ ಸಿನಿಮಾಗೆ ಹೀರೋ ಅಂಜಯ್ ಅವರ ಕುಟುಂಬದವರೇ ಹಣ ಹಾಕಿ ಸಿನಿಮಾ ಮಾಡಿದ್ದಾರೆ. ಟ್ರೈಲರ್ ರಿಲೀಸ್ ವೇಳೆ ಹೊಸಬರ ಸಿನಿಮಾ ಹೇಗೆ ನಿರ್ಮಾಣ ಆಯ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಮಗೆ ಸಿನಿಮಾದ ಯಾವ ಹಿನ್ನೆಲೆಯೂ ಇಲ್ಲ. ಈ ಸಿನಿಮಾದ ಹೀರೋ ಅಂಜನ್ ರಾಮಚಂದ್ರ ನಮ್ಮ ಕುಟುಂಬದವರು. ಹೊಸಬರು ಸಿನಿಮಾ ಮಾಡ್ತಾರೆ ಅಂದ್ರೆ ಬಂಡವಾಳ ಹಾಕುವುದಕ್ಕೆ ಯಾರೂ ಮುಂದೆ ಬರಲ್ಲ. ಈ ಕಾರಣಕ್ಕೆ ನಾವೆಲ್ಲರೂ ಸೇರಿ ಸಿನಿಮಾಗೆ ಹೂಡಿಕೆ ಮಾಡಿದ್ದೇವೆ. ಒಳ್ಳೆಯ ಕಂಟೆಂಟ್ಗೆ ಸೋಲಿಲ್ಲ. ತೆಲುಗಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈಗ ಕನ್ನಡದಲ್ಲೂ ರಿಲೀಸ್ ಮಾಡುತ್ತಿದ್ದೇವೆ" ಎಂದಿದ್ದರು.
ಕನ್ನಡದ ನಟ ಎನ್ ಟಿ ರಾಮಸ್ವಾಮಿ ಈ ಸಿನಿಮಾದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. "ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೊಸಬರಿಗೆ ಈ ರೀತಿ ರೆಸ್ಪಾನ್ಸ್ ಸಿಕ್ತಿರೋದು ಖುಷಿಯ ವಿಚಾರ. ನಾನೆಲ್ಲೂ ಪ್ರಮೋಷನ್ ಗೆ ಹೋಗಿರ್ಲಿಲ್ಲ, ಚಿತ್ರತಂಡ ನನ್ನ ಪಾತ್ರಕ್ಕೆ ಹೆಚ್ಚು ಪ್ರಶಂಸೆ ಸಿಕ್ತಿದೆ, ಜನರಿಗೆ ಕನೆಕ್ಟ್ ಆಗ್ತಿದೆ ನೀವು ಪ್ರಮೋಶನ್ ಗೆ ಬನ್ನಿ ಅಂತ ಹೇಳಿದ್ರು. ಹೀಗೆ ಹೈದರಾಬಾದ್ ನಲ್ಲಿ ಒಂದು ಥಿಯೇಟರ್ ವಿಸಿಟ್ ಮಾಡ್ದಾಗ ಸಿನಿಮಾ ನೋಡಿ, ಏಕಾಏಕಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಬಾರಿಸೋಕೆ ಶುರು ಮಾಡಿದ್ರು, ಬಹುಶಃ ಅವರ ಜೀವನದಲ್ಲಿ ಏನಾಗಿತ್ತೋ, ನನ್ನ ಪಾತ್ರ ನೋಡಿ ಅವರಿಗೆ ಕೋಪ ಬಂದು ನನ್ನ ಮೇಲೆ ಕೈ ಮಾಡಿದ್ರು. ಇದು ಒಂದು ರೀತಿಲಿ ವರನೂ ಹೌದು. ಕಾರಣ ಜನರಿಗೆ ನನ್ನ ಪಾತ್ರ ಮುಟ್ಟಿದೆ." ಎಂದು ಅಂದಿನ ಘಟನೆಯನ್ನು ನೆನೆದಿದ್ದಾರೆ.
'ಲವ್ ರೆಡ್ಡಿ' ತೆಲುಗಿನಲ್ಲಿ ಸೆನ್ಸೇಷನಲ್ ಹಿಟ್ ಆಗಿದೆ. ಇದರ ಕನ್ನಡ ವರ್ಷನ್ ಇದೇ 22ಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯ ಸೂಪರ್ಸ್ಟಾರ್ ಪ್ರಭಾಸ್ ಚಿತ್ರರಂಗಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಕನ್ನಡದಲ್ಲಿ ದುನಿಯಾ ವಿಜಯ್ ಬೆಂಬಲಿಸಿದರೆ, ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡುತ್ತಿದೆ.


Click it and Unblock the Notifications











