ರಾಜಮೌಳಿ ಬಳಿ ಸುದೀಪ್ ಕರೆದುಕೊಂಡು ಹೋದಾಗ ತರುಣ್ ಸುಧೀರ್ ಭೇಟಿ ಮಾಡಲಿಲ್ಲ ಯಾಕೆ?
ಸ್ಯಾಂಡಲ್ವುಡ್ ಬಹುಬೇಡಿಕೆಯ ನಿರ್ದೇಶಕ ತರುಣ್ ಸುಧೀರ್ ಈಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರ ಚೊಚ್ಚಲ ನಿರ್ಮಾಣದ ಸಿನಿಮಾ 'ಏಳುಮಲೆ' ನಾಳೆ (ಸೆಪ್ಟೆಂಬರ್ 5) ಬಿಡುಗಡೆಗೆ ಆಗುತ್ತಿದೆ. ಹೀಗಾಗಿ ತರುಣ್ ಸುಧೀರ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಸಿನಿಮಾ ಜರ್ನಿಯ ಬಗೆಗಿನ ಸ್ವಾರಸ್ಯಕರ ಸಂಗತಿಯನ್ನು ತರುಣ್ ಸುಧೀರ್ ಹಂಚಿಕೊಂಡಿದ್ದಾರೆ.
ಇದೇ 'ಏಳುಮಲೆ' ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದರು. ಈ ವೇಳೆ ಕಿಚ್ಚ ಸುದೀಪ್ ಜೊತೆ ರಾಜಮೌಳಿಯನ್ನು ಭೇಟಿ ಮಾಡುವುದಕ್ಕೆ ಹೋಗಿದ್ದಾಗ, ಅವರನ್ನು ಹತ್ತಿರದಿಂದ ಕಂಡು ಮಾತಾಡಿಸಿ, ಫೋಟೋ ತೆಗೆಸಿಕೊಳ್ಳುವ ಅವಕಾಶವಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ಅದಕ್ಕೆ ಕಾರಣವೇನು? ಅನ್ನೋದನ್ನು ಇದೇ ಮೊದಲ ಬಾರಿ ಹೇಳಿಕೊಂಡಿದ್ದಾರೆ.

"ನನ್ನ ಕೆಲಸವೇ ನನ್ನನ್ನು ಗುರುತಿಸಬೇಕು ಅನ್ನೋದು ನನ್ನ ನಂಬಿಕೆ. ಒಂದು ಚಿಕ್ಕ ಸನ್ನಿವೇಶವನ್ನು ನಾನು ಹೇಳುತ್ತೇನೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ರನ್ನ ಎನ್ನುವ ಸಿನಿಮಾವನ್ನು ಶೂಟ್ ಮಾಡುತ್ತಿದ್ವಿ. ರೈಲ್ವೆ ಸ್ಟೇಷನ್ ಎಪಿಸೋಡ್, ಕ್ಲೈಮ್ಯಾಕ್ಸ್ ಸೀನ್ ಶೂಟ್ ಮಾಡುತ್ತಿದ್ವಿ. ಅಲ್ಲಿಂದ 150 ಅಡಿ ದೂರದಲ್ಲಿ ಬಾಹುಬಲಿ ಸೆಟ್ಟು ಹಾಕಿದ್ದರು. ಸುದೀಪ್ ಸರ್ ಬಾಹುಬಲಿ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಅವರು ಹೋಗಿ ವಿಶ್ ಮಾಡಿ ಬರೋರು." ಎಂದು ರಾಜಮೌಳಿ ಸೆಟ್ಟಿನ ಪಕ್ಕದಲ್ಲೇ ರನ್ನ ಸಿನಿಮಾವನ್ನು ಶೂಟಿಂಗ್ ಮಾಡುತ್ತಿದ್ದ ಸನ್ನಿವೇಶವನ್ನು ವಿವರಿಸಿದ್ದಾರೆ.
ಬಾಹುಬಲಿ ಸೆಟ್ಟಿಗೆ ಮೊಬೈಲ್ ತೆಗೆದುಕೊಂಡು ಹೋಗುವಂತೆ ಇರಲಿಲ್ಲ. ಐಡಿ ಕಾರ್ಡ್ ಇಲ್ಲದೆ ಯಾರೂ ಬರುವಂತಿರಲಿಲ್ಲ. ಅವರ ಸೆಟ್ ಇದ್ದ ಒಂದು ಕಿ.ಮೀ ದೂರದಲ್ಲಿಯೇ ಬ್ಯಾರಿಕೇಡ್ ಇತ್ತು. ಅಲ್ಲೇ ಚೆಕ್ ಮಾಡಿ, ಅಲ್ಲೇ ಬಿಡೋತರ ಇತ್ತು. "ನಾವು ಸುದೀಪ್ ಸರ್ಗೆ ನೀವು ರಾಜಮೌಳಿ ಸರ್ ಭೇಟಿ ಮಾಡುವುದಕ್ಕೆ ಹೋಗುವಾಗ ಹೇಳಿ ನಾವು ಬರುತ್ತೇವೆ ಹೇಳಿದ್ವಿ. ನಾನು, ನಮ್ಮ ಅಣ್ಣ ನಂದ, ಸುಧಾಕರ ಕ್ಯಾಮರಾಮ್ಯಾನ್ ತಿಳಿಸಿದ್ವಿ." ಎನ್ನುತ್ತಾರೆ ತರುಣ್ ಸುಧೀರ್.
ಒಂದು ದಿನ ಕಿಚ್ಚ ಸುದೀಪ್ ಇವರೆಲ್ಲರನ್ನೂ ಕರೆದು ಇವತ್ತು ರಾಜಮೌಳಿ ಅವರನ್ನು ಭೇಟಿ ಮಾಡುವುದಕ್ಕೆ ಹೋಗುತ್ತೇನೆ ಎಂದು ಹೇಳಿ, ಈ ಮೂವರನ್ನೂ ಕರೆದುಕೊಂಡು ಹೋದರು. ಎಂಟ್ರಿಯಲ್ಲಿ ಎಲ್ಲರನ್ನೂ ಚೆಕ್ ಮಾಡಿ, ಮೊಬೈಲ್ ತೆಗೆದುಕೊಂಡು ಒಳಗೆ ಬಿಟ್ಟರು. ಕ್ಯಾರವ್ಯಾನ್ ಇದ್ದ ಕಡೆಗೆ ಅಲ್ಲಿಗೆ ರಾಜಮೌಳಿ ಬಂದಿದ್ದರು. ಸುದೀಪ್ ಒಬ್ಬೊಬ್ಬರನ್ನೇ ಪರಿಚಯ ಮಾಡಿಸುವುದಕ್ಕೆ ಮುಂದಾದರು. ಆದರೆ, ರಾಜಮೌಳಿ ಹತ್ತಿರ ಹೋಗಿ ಭೇಟಿ ಮಾಡದೇ ತರುಣ್ ಸುಧೀರ್ ಹಿಂತಿರುಗಿದ್ದರು. ಅದ್ಯಾಕೆ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಸುದೀಪ್ ಸರ್, ನನ್ನ ಟೀಮ್ ಬಂದಿದೆ. ಅತ್ತಾರಿಂಟಿಕಿ ದಾರೇದಿ ರಿಮೇಕ್ ಮಾಡುತ್ತಿದ್ದೇನೆ. ಡೈರೆಕ್ಟರ್, ಡಿಓಪಿ ಬಂದಿದ್ದಾರೆ. ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ನಂದ ಅಂತ ಕರೆದು ಅವನು ಹೋದ. ಇವರೇ ಡೈರೆಕ್ಟರ್. ಈ ಹಿಂದೆ ಇವರದ್ದು ಎರಡು ಸಿನಿಮಾ ಚೆನ್ನಾಗಿ ಆಗಿದೆ ಎಂದು ಪರಿಚಯ ಮಾಡಿಕೊಟ್ಟರು. ಸುಧಾಕರ ಅವರನ್ನು ಕರೆದರು. ಅವರು ಫೋಟೊ ತೆಗೆಸಿಕೊಂಡರು. ಅಲ್ಲಿವರೆಗೂ ಫ್ಯಾನ್ಭಾಯ್ ಮೂವ್ಮೆಂಟ್ನಲ್ಲಿ ಇದ್ದೆ. ಸಡನ್ ಆಗಿ ಒಂದು ಆಲೋಚನೆ ಬಂತು. ಈಗ ನನ್ನನ್ನು ಕರೆದರೆ ಸುದೀಪ್ ಸರ್ ಏನಂತ ಪರಿಚಯ ಮಾಡಿಕೊಡುತ್ತಾರೆ. ನಂದ ತಮ್ಮ ಅಂತ ಪರಿಚಯ ಮಾಡಿಕೊಡಬಹುದು. ಇಲ್ಲಾ ಸುಧೀರ್ ಅಂತಹ ದೊಡ್ಡ ಆಕ್ಟರ್ ಮಗ ಎನ್ನಬಹುದು. ಬೇರೆ ಏನಂತ ಪರಿಚಯ ಮಾಡುತ್ತಾರೆ? ನನ್ನ ಬಗ್ಗೆ ಹೇಳುವುದಕ್ಕೆ ಏನೂ ಇಲ್ವಲ್ಲ. ಅದಕ್ಕೆ ಅವರು ಕರೆಯುವ ಹೊತ್ತಿಗೆ ಕ್ಯಾರಾವ್ಯಾನ್ ಹಿಂದಕ್ಕೆ ಹೋಗಿಬಿಟ್ಟೆ." ಎಂದು ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.
ಇದಾದ ಕೆಲವು ವರ್ಷಗಳ ಬಳಿಕ ತರುಣ್ ಸುಧೀರ್ ಹಾಗೂ ರಾಜಮೌಳಿ ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಪ್ರಸಂಗ ಬಂದಿತ್ತು. ಅದು ಚೌಕ ಸಿನಿಮಾಗೆ ತರುಣ್ ಸುಧೀರ್ಗೆ ಸೈಮಾ ಪ್ರಶಸ್ತಿ ಸಿಕ್ಕಿತ್ತು. ಅದೇ ವೇದಿಕೆ ಮೇಲೆ ರಾಜಮೌಳಿ ಕೂಡ ಈ ವೇಳೆ ತರುಣ್ ಸುಧೀರ್ ಹೋಗಿ ಪರಿಚಯ ಮಾಡಿಕೊಂಡರು. ಈ ಘಟನೆಯನ್ನು ಉದಾಹರಣೆಯಾಗಿಟ್ಟುಕೊಂಡು ತಮ್ಮ ಕೆಲಸ ಮಾತಾಡಬೇಕು ಎಂಬುವುದನ್ನು ಹೇಳಿಕೊಂಡಿದ್ದಾರೆ.


Click it and Unblock the Notifications











