ವೀರ ಸಿಂಧೂರ ಲಕ್ಷಣ'ದ ಅಪ್ಡೇಟ್ ಕೊಟ್ಟ ತರುಣ್ ಸುಧೀರ್: ವಿಡಿಯೋ ವೈರಲ್ ಮಾಡಿದ ದರ್ಶನ್ ಫ್ಯಾನ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾನೇ ಶುರುವಾಗಿಲ್ಲ 'ವೀರ ಸಿಂಧೂರ ಲಕ್ಷಣ'ದ ಮಾತೆಲ್ಲ ಅಂದಕೊಂಡವರೇ ಹೆಚ್ಚು. ದರ್ಶನ್ ಇನ್ನು 'ಡೆವಿಲ್' ಸಿನಿಮಾಗೆ ಕೈ ಹಾಕಿಲ್ಲ. ದರ್ಶನ್ ರೆಗ್ಯೂಲರ್ ಜಾಮೀನಿನ ಮೇಲೆ ಹೊರ ಬಂದ್ಮೇಲೆ 'ಡೆವಿಲ್' ಶೂಟಿಂಗ್ ಯಾವಾಗ ಶುರುವಾಗುತ್ತೆ ಅನ್ನೋದನ್ನು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಆದರೆ, ದಾಸನ ಅಡ್ಡದಿಂದ ಈ ಬಗ್ಗೆ ಇನ್ನೂ ಮಾಹಿತಿ ಇಲ್ಲ.
'ಡೆವಿಲ್' ಜೊತೆ ಜೊತೆಗೆ ಇನ್ನೊಂದು ಸಿನಿಮಾ ಕೂಡ ಸದ್ದು ಮಾಡಿತ್ತು. ಅದುವೇ 'ವೀರ ಸಿಂಧೂರ ಲಕ್ಷ್ಮಣ'. ಇದು ದರ್ಶನ್ ವೃತ್ತಿ ಬದುಕಿನ ಡ್ರೀಮ್ ಸಿನಿಮಾಗಳಲ್ಲೊಂದು. ಈ ಸಿನಿಮಾಗೆ 'ಕಾಟೇರ'ದಂತಹ ಯಶಸ್ವಿ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ತರುಣ್ ಸುಧೀರ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋದು ಗೊತ್ತಿದೆ. ಆದರೆ, ಕಳೆದ ಐದಾರು ತಿಂಗಳಿಂದ ಈ ಬಗ್ಗೆ ಮಾಹಿತಿ ಇರಲಿಲ್ಲ.

ಕೊನೆಗೂ ದರ್ಶನ್ ಅಭಿಮಾನಿಗಳಿಗೆ ತರುಣ್ ಸುಧೀರ್ 'ವೀರ ಸಿಂಧೂರ ಲಕ್ಷ್ಮಣ'ದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಅವರು ನಿರ್ದೇಶಿಸುತ್ತಿರುವ ಈ ಸಿನಿಮಾ ಬಗ್ಗೆ ವೇದಿಕೆ ಮೇಲೆ ಮಾತಾಡಿರುವ ವಿಡಿಯೋ ಒಂದನ್ನು ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಆ ವಿಡಿಯೋದಲ್ಲಿ ತರುಣ್ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಬಗ್ಗೆ ಕೆಲವು ಸೂಕ್ಷ್ಮ ಸುಳಿವುಗಳನ್ನು ಕೊಟ್ಟಿದ್ದಾರೆ.
'ಸಂಗೊಳ್ಳಿರಾಯಣ್ಣ' ಸಿನಿಮಾ ಬಳಿಕ ಮತ್ತೆ ದೇಶಭಕ್ತಿಯನ್ನು ಸಾರುವ ಸಿನಿಮಾದಲ್ಲಿ ದರ್ಶನ್ ನಟಿಸಿರಲಿಲ್ಲ. ಮತ್ತೆ ಅಂತಹದ್ದೊಂದು ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಬಹಳ ದಿನಗಳ ಆಸೆಯಾಗಿತ್ತು. ಹಾಗಾಗಿ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅದು 'ಕಾಟೇರ' ಸಿನಿಮಾದ ರಿಲೀಸ್ಗೂ ಮುನ್ನವೇ ಅನೌನ್ಸ್ ಆಗಿತ್ತು. 'ಯಜಮಾನ' ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದ್ದರು. ಆಗ ತರುಣ್ ಸುಧೀರ್ ಈ ಸಿನಿಮಾದ ನಿರ್ದೇಶಕರು ಅಂತ ಘೋಷಣೆಯಾಗಿತ್ತು.
ಅಲ್ಲಿಂದ ಈ ಸಿನಿಮಾ ಬಗ್ಗೆ ತರುಣ್ ಸುಧೀರ್ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ವೇದಿಕೆಯೊಂದರ ಮೇಲೆ ಮಾತಾಡಿರುವ ವಿಡಿಯೋವನ್ನು ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ. "ಮುಂದೆ ನಾನು ಮಾಡುತ್ತಿರುವ ಸಿನಿಮಾ ಬಂದು ಈ ಮಣ್ಣಿನ ಗಂಡು. ಈ ಮಣ್ಣಿನ ಹೆಮ್ಮೆ ವೀರ ಸಿಂಧೂರ ಲಕ್ಷ್ಮಣ ಅಂತ. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಅವರ ಅಭಿನಯದಲ್ಲಿ ಮಾಡುತ್ತಿದ್ದೇವೆ." ಎಂದು ತರುಣ್ ಸುಧೀರ್ ಈ ಪ್ರಾಜೆಕ್ಟ್ ಇನ್ನೂ ಜೀವಂತವಾಗಿದೆ ಅನ್ನೋದನ್ನು ಕನ್ಫರ್ಮ್ ಮಾಡಿದ್ದಾರೆ.
ಹಾಗೇ ಆದಷ್ಟು ಬೇಗ 'ವೀರ ಸಿಂಧೂರ ಲಕ್ಷ್ಮಣ' ಶುರು ಮಾಡುವ ಸುಳಿವನ್ನು ಇದೇ ವಿಡಿಯೋದಲ್ಲಿ ನೀಡಿದ್ದಾರೆ. "ಅವರು ಆದಷ್ಟು ಬೇಗ ಗುಣಮುಖರಾಗಿ, ಆದಷ್ಟು ಬೇಗ ಚಿತ್ರರಂಗಕ್ಕೆ ಬರಬೇಕು. ಅದಕ್ಕೋಸ್ಕರ ನಾವೆಲ್ಲರೂ ಕಾಯುತ್ತಿದ್ದೇವೆ" ಎಂದು ಹೇಳುವ ಮೂಲಕ 'ವೀರ ಸಿಂಧೂರ ಲಕ್ಷ್ಮಣ' ಶೀಘ್ರವೇ ಶುರುವಾಗಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ. ಇನ್ನು ಈ ಸಿನಿಮಾ 'ರಾಬರ್ಟ್' ರಿಲೀಸ್ ಸಮಯದಲ್ಲೇ ಸುದ್ದಿಯಲ್ಲಿತ್ತು. ಅದನ್ನು ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು. ಇಬ್ಬರ ಕಿತ್ತಾಟದಲ್ಲಿ ಪ್ರಾಜೆಕ್ಟ್ ಡ್ರಾಪ್ ಆಗಿತ್ತು.
ಈಗ ಶೈಲಾಜಾ ನಾಗ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ, 'ವೀರ ಸಿಂಧೂರ ಲಕ್ಷ್ಮಣ' ಸೆಟ್ಟೇರುವುದಕ್ಕೂ ಮುನ್ನ ದರ್ಶನ್ 'ಡೆವಿಲ್' ಮುಗಿಸಬೇಕಿದೆ. ಅದು ಮುಗಿದ ನಂತರ ದರ್ಶನ್ 'ವೀರ ಸಿಂಧೂರ ಲಕ್ಷ್ಮಣ' ಕ್ಕೆ ಗ್ರೀನ್ ಸಿಗ್ನಲ್ ಕೊಡಬಹುದು ಎಂಬ ನಿರೀಕ್ಷೆಯಿದೆ. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದ ದರ್ಶನ್ ಸಂಪೂರ್ಣವಾಗಿ ಹೊರ ಬರಬೇಕಿದೆ.


Click it and Unblock the Notifications











